ಚುನಾವಣಾ ಬಾಂಡ್ಗಳ ಮೂಲಕ ಯಾವುದೇ ಹಣ ಪಡೆದಿಲ್ಲ. ಬಾಂಡ್ಗಳನ್ನು ಸ್ವೀಕರಿಸಲು ಅಗತ್ಯವಿದ್ದ ಎಸ್ಬಿಐ ಖಾತೆಯನ್ನು ಪಕ್ಷ ತೆರೆದೂ ಇಲ್ಲ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) [ಸಿಪಿಐಎಂ] ಹೇಳಿದೆ.
ಸಿಪಿಐ(ಎಂ) ಕೂಡ ಚುನಾವಣಾ ಬಾಂಡ್ಗಳ ಮೂಲಕ ಹಣವನ್ನು ಪಡೆದಿದೆ ಎಂದು ಕೆಲವು ಮಾಧ್ಯಮಗಳು ವರದಿ ಬಿತ್ತರಿಸಿದ್ದವು. ಈ ಬೆನ್ನಲ್ಲೇ ಸಿಪಿಐ(ಎಂ) ವರದಿಗೆ ಪ್ರತಿಕ್ರಿಯೆ ನೀಡಿದೆ. ಪಕ್ಷವೂ ಚುನಾವಣಾ ಬಾಂಡ್ ಮೂಲಕ ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
“ಚುನಾವಣಾ ಬಾಂಡ್ ಮೂಲಕ ಹಣ ಪಡೆದಿರುವ ಬಗ್ಗೆ ಮಾಧ್ಯಮಗಳು ಪ್ರಕಟಿಸಿರುವ ವರದಿಗಳು ಸುಳ್ಳು ಮತ್ತು ಆಧಾರರಹಿತ. ವಾಸ್ತವವೆಂದರೆ, ಸಿಪಿಐ(ಎಂ) ತಾತ್ವಿಕವಾಗಿ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಚುನಾವಣಾ ಬಾಂಡ್ ಮೂಲಕ ಹಣ ಪಡೆಯಲು ಅಗತ್ಯವಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯನ್ನೇ ಪಕ್ಷ ತೆರೆಯಲಿಲ್ಲ” ಎಂದು ಹೇಳಿದೆ.
“ಗಮನಿಸಬೇಕಾದ ವಿಚಾರವೆಂದರೆ, ಚುನಾವಣಾ ಬಾಂಡ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಸಿಪಿಐ(ಎಂ) ಯೋಜನೆಯ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಚುನಾವಣಾ ಬಾಂಡ್ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಿದೆ” ಎಂದು ವಿವರಿಸಿದೆ.
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಕೇಂದ್ರದ ಚುನಾವಣಾ ಬಾಂಡ್ಗಳ ಬೇನಾಮಿ ರಾಜಕೀಯ ನಿಧಿ ಯೋಜನೆಯನ್ನು ರದ್ದುಗೊಳಿಸಿದೆ. ಚುನಾವಣಾ ಬಾಂಡ್ ‘ಅಸಂವಿಧಾನಿಕ‘ ಎಂದು ಕೋರ್ಟ್ ಹೇಳಿದೆ. 2024ರ ಮಾರ್ಚ್ 13 ರೊಳಗೆ ಬಾಂಡ್ನ ದಾನಿಗಳು, ಮೊತ್ತ ಮತ್ತು ಅವುಗಳನ್ನು ಸ್ವೀಕರಿಸಿದವರ ಹೆಸರುಗಳನ್ನು ಬಹಿರಂಗಪಡಿಸುವಂತೆ ಎಸ್ಬಿಐ ಮತ್ತು ಚುಣಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
2018ರ ಜನವರಿಯಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿ, ಜಾರಿಗೆ ತಂದಿತ್ತು. ನಾಗರಿಕರು ಅಥವಾ ಕಾರ್ಪೊರೇಟ್ ಗುಂಪುಗಳು ಚುನಾವಣಾ ಬಾಂಡ್ಗಳನ್ನು ಬ್ಯಾಂಕ್ನಿಂದ ಖರೀದಿಸಬಹುದು ಮತ್ತು ರಾಜಕೀಯ ಪಕ್ಷಕ್ಕೆ ನೀಡಬಹುದು. ಇವುಗಳ ಮಾಹಿತಿಯು ಗೌಪ್ಯವಾಗಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.