ವೈ ಎಸ್ ಜಗನ್ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ನಂತರ ಆಂಧ್ರಪ್ರದೇಶವು ಸೇಡಿನ ರಾಜಕಾರಣದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ ಎಂದು ಸಿಪಿಐ ಆಂಧ್ರಪ್ರದೇಶ ಕಾರ್ಯದರ್ಶಿ ರಾಮಕೃಷ್ಣ ಟೀಕಿಸಿದ್ದಾರೆ.
ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಅವರು ಖಂಡಿಸಿದರು.
‘ಸಿಎಂ ಜಗನ್ ರಾಜ್ಯದ ಅಭಿವೃದ್ಧಿ ಕಡೆಗಣಿಸಿದ್ದು, ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಪ್ರಕರಣ ದಾಖಲಾಗಿದ್ದರೂ ಸಿಐಡಿಯು ನಾಯ್ಡು ಅವರನ್ನು ಏಕೆ ವಿಚಾರಣೆಗೆ ಕರೆಯಲು ಸಾಧ್ಯವಾಗಲಿಲ್ಲ ಎಂದು ನಾವು ತಿಳಿಯಲು ಬಯಸುತ್ತೇವೆ. ರಾಜ್ಯದ ಪ್ರಮುಖ ಪ್ರತಿಪಕ್ಷದ ನಾಯಕನನ್ನು ಬಂಧಿಸಿರುವುದರಲ್ಲಿ ಯಾವುದೇ ತರ್ಕವಿಲ್ಲ’ ಎಂದು ರಾಮಕೃಷ್ಣ ಹೇಳಿದರು.
‘ಜನರಿಗಾಗಿ ಧ್ವನಿ ಎತ್ತುವ ವಿರೋಧ ಪಕ್ಷಗಳನ್ನು ಹೆದರಿಸಲು ಸಿಎಂ ಪ್ರಯತ್ನಿಸುತ್ತಿದ್ದಾರೆ’ ಎಂದ ಅವರು, ‘ರಾಜ್ಯದಲ್ಲಿ ಜಗನ್ ಮೋಹನ್ ರೆಡ್ಡಿ ಅವರ ಹತೋಟಿಯಿಲ್ಲದ ಆಡಳಿತವನ್ನು ಎದುರಿಸಲು ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಕೈಜೋಡಿಸಬೇಕು’ ಎಂದು ಕರೆ ನೀಡಿದರು.
ಸಿಐಡಿ ಜಗನ್ ಮೋಹನ್ ರೆಡ್ಡಿ ಅವರ ಖಾಸಗಿ ಸೇನೆಯಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು.
ಕೋರ್ಟು ಸುತ್ತುವುದೇ ಜಗನ್ ಕೆಲಸವಾಗಲಿದೆ: ಪವನ್ ಕಲ್ಯಾಣ್
ಇನ್ನೊಂದೆಡೆ, ಚಂದ್ರಬಾಬು ನಾಯ್ಡು ಅವರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಜನಸೇನಾ ಪಕ್ಷದ ಮುಖಂಡ, ನಟ ಪವನ್ ಕಲ್ಯಾಣ್, ‘ಜಗನ್ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
‘ಭ್ರಷ್ಟಾಚಾರದ ಹಣವನ್ನು ತೊಡಗಿಸಲು ಜಗನ್ ಲಂಡನ್ಗೆ ಹೋಗಿದ್ದಾರೆ. ಚುನಾವಣೆಯ ನಂತರ ನಮ್ಮ ಸರ್ಕಾರ ಬಂದರೆ, ಜೈಲು ಮತ್ತು ಕೋರ್ಟುಗಳನ್ನು ಸುತ್ತುವುದೇ ಅವರ ಕೆಲಸವಾಗಲಿದೆ’ ಎಂದು ಪವನ್ ಹೇಳಿದ್ದಾರೆ.