- ಸಂಸತ್ ಭವನ ಉದ್ಘಾಟನೆಯಲ್ಲಿ ಸ್ವಾಮೀಜಿಗಳ ಸಂಭ್ರಮ, ಪಟ್ಟಾಭಿಷೇಕ ಟೀಕೆ
- ರಾಷ್ಟ್ರಪತಿಗೆ ಆಹ್ವಾನವಿರದ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ ವಿಪಕ್ಷಗಳು
ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಸಂವಿಧಾನದ ಮೂಲ ತತ್ವಗಳಾದ ಜಾತ್ಯತೀತ ಮತ್ತು ಎಲ್ಲರನ್ನೊಳಗೊಂಡ ರಾಷ್ಟ್ರವೆನ್ನುವ ಕಲ್ಪನೆ ಮರೆಯಾಗಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳು ಟೀಕಿಸಿವೆ.
“ಸಂಸತ್ತು ಪ್ರಜೆಗಳ ಧ್ವನಿ. ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ಉದ್ಘಾಟನೆಯನ್ನು ಪಟ್ಟಾಭಿಷೇಕ ಎಂದು ಪರಿಗಣಿಸಿದ್ದಾರೆ” ಎಂದು ರಾಹುಲ್ ಟೀಕಿಸಿದ್ದಾರೆ.
ನಂತರ ಮತ್ತೊಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಪಟ್ಟಾಭಿಷೇಕ ಪೂರ್ಣಗೊಂಡಿದೆ. ಅಹಂಕಾರಿ ರಾಜ ರಸ್ತೆಯಲ್ಲಿ ಪ್ರಜೆಗಳ ಧ್ವನಿಯನ್ನು ಅಡಗಿಸುತ್ತಿದ್ದಾನೆ” ಎಂದು ಕ್ರೀಡಾಪಟುಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಟೀಕಿಸಿದ್ದಾರೆ. ಜೊತೆಗೆ, ಕ್ರೀಡಾಪಟುಗಳು ದೇಶಕ್ಕೆ ಹೆಮ್ಮೆ ತಂದಿರುವ ಕ್ಷಣಗಳು ಮತ್ತು ರಸ್ತೆಯಲ್ಲಿ ಅವರ ಮೇಲೆ ನಡೆದಿರುವ ಅನ್ಯಾಯದ ದೃಶ್ಯಗಳಿರುವ ವಿಡಿಯೋ ಟ್ವೀಟ್ ಮಾಡಿದ್ದಾರೆ.
ಎಐಸಿಸಿ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭ ಟೀಕಿಸಿ, “ನೂತನ ಸಂಸತ್ ಭವನ ಕಟ್ಟಡಕ್ಕೆ ಅಡಿಗಲ್ಲು ಹಾಕುವ ಸಂದರ್ಭ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿತ್ತು. ಈಗ ಉದ್ಘಾಟನಾ ಕಾರ್ಯಕ್ರಮದಿಂದ ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಹೊರಗಿಡಲಾಗಿದೆ” ಎಂದು ಟೀಕಿಸಿದ್ದಾರೆ.
ಶವಪೆಟ್ಟಿಗೆಗೆ ಹೋಲಿಸಿದ ಆರ್ಜೆಡಿ
ನೂತನ ಸಂಸತ್ ಭವನವನ್ನು ರಾಷ್ಟ್ರೀಯ ಜನತಾದಳ ಪಕ್ಷವು (ಆರ್ಜೆಡಿ) ಶವಪೆಟ್ಟಿಗೆಗೆ ಹೋಲಿಸಿದೆ.
ಈ ಕುರಿತು ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂದು ಕಡೆ ಶವ ಪೆಟ್ಟಿಗೆ, ಮತ್ತೊಂದು ಸಂಸತ್ ಭವನದ ಚಿತ್ರ ಹಾಕಿದೆ.
ಆರ್ಜೆಡಿ ಪಕ್ಷವು ಈಗಾಗಲೇ ಹೊಸ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಇರುವುದಾಗಿ ಘೋಷಿಸಿದೆ. ಭಾನುವಾರದ ಕಾರ್ಯಕ್ರಮಕ್ಕೂ ಪಕ್ಷದ ಪ್ರತಿನಿಧಿಗಳು ಆಗಮಿಸಿಲ್ಲ. ಆದರೆ ಆರ್ಜೆಡಿಯ ಈ ಟ್ವೀಟ್ಗೆ ಭಾರೀ ವಿರೋಧ ವ್ಯಕ್ತವಾಗಿದ್ದು. ನೆಟ್ಟಿಗರು ಪಕ್ಷ ನಡೆಯನ್ನು ಟೀಕಿಸಿದ್ದಾರೆ. “ಇದೇ ರೀತಿಯ ಪೆಟ್ಟಿಗೆಯಲ್ಲಿ ಪಕ್ಷದ ಅಂತ್ಯವಾಗಲಿದೆ” ಎಂದು ಕೆಲವರು ಹೇಳಿದರೆ, “ಆರ್ಜೆಡಿಯು ಬ್ರಿಟೀಷ್ ಸಂಸ್ಕೃತಿಯನ್ನು ಬೆಂಬಲಿಸುತ್ತಿದೆ” ಎಂದು ಹಲವರು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕೂಡ ಆರ್ಜೆಡಿ ಟ್ವೀಟ್ಗೆ ತಿರುಗೇಟು ನೀಡಿದೆ. ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು, “ಪ್ರಜಾಪ್ರಭುತ್ವದ ಪ್ರತಿರೂಪದಂತಿರುವ ಸಂಸತ್ ಭವನಕ್ಕೆ ಹೊಸ ರೂಪ ನೀಡಿ ದೇಶದ ಹಿರಿಮೆ ಹೆಚ್ಚಿಸಿದ್ದರೂ ಆರ್ಜೆಡಿ ಮನಸ್ಥಿತಿ ಆ ಪಕ್ಷದ ಚಿಂತನೆ ತೋರಿಸುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ಇಂಥವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಜರಾತ್ | 10ನೇ ತರಗತಿ ಫಲಿತಾಂಶ; 157 ಶಾಲೆಗಳಲ್ಲಿ ಶೂನ್ಯ ಫಲಿತಾಂಶ; ಟ್ವಿಟರ್ನಲ್ಲಿ ಟ್ರೆಂಡಿಂಗ್
ಆರ್ಜೆಡಿ ಟ್ವೀಟ್ಗೆ ಸಮಜಾಯಿಷಿ ನೀಡಿರುವ ಪಕ್ಷದ ನಾಯಕ ಶಕ್ತಿಸಿಂಗ್ ಯಾದವ್, “ಪ್ರಜಾಪ್ರಭುತ್ವವನ್ನು ಸಮಾಧಿ ಮಾಡಲಾಗುತ್ತಿದೆ ಎಂಬುದನ್ನು ಹೇಳಲು ಶವಪೆಟ್ಟಿಗೆಯ ಚಿತ್ರವನ್ನು ಬಳಸಲಾಗಿತ್ತು. ಸಂಸತ್ತು ಪ್ರಜಾಪ್ರಭುತ್ವದ ದೇವಾಲಯ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಟೀಕಿಸಿದ್ದಾರೆ.
ರೈತರು ಮತ್ತು ಕ್ರೀಡಾಪಟುಗಳ ಪ್ರತಿಭಟನೆ ಹತ್ತಿಕ್ಕಲು ಪೊಲೀಸ್ ಬಲ ಪ್ರಯೋಗಿಸಿದ ಸರ್ಕಾರದ ಕ್ರಮವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವಿರೋಧಿಸಲಾಗಿದೆ. ಅಲ್ಲದೆ, ಸಂಸತ್ ಭವನ ಉದ್ಘಾಟನೆಯ ನಂತರ ಪ್ರಧಾನಿಯವರು ಸ್ವಾಮೀಜಿಗಳ ಜೊತೆಗೂಡಿ ತೆಗೆಸಿಕೊಂಡ ಫೋಟೋ ಮತ್ತು ಪ್ರಜಾಪ್ರಭುತ್ವ ದೇಶದಲ್ಲಿ ಅಸ್ತಿತ್ವಕ್ಕೆ ಬಂದಾಗ ತೆಗೆಯಲಾಗಿದ್ದ ಫೋಟೋವನ್ನು ಹೋಲಿಸಿ ಕೇಂದ್ರ ಸರ್ಕಾರದ ಉದ್ಘಾಟನಾ ಸಮಾರಂಭಕ್ಕೆ ಟೀಕೆ ವ್ಯಕ್ತವಾಗಿದೆ.