ಕಳೆದೆರಡು ದಿನಗಳಿಂದ ಕಾಡಾನೆಗಳು ನಿರಂತರವಾಗಿ ದಾಳಿ ಮಾಡಿದ್ದು, ಕೊಡಗು ಜಿಲ್ಲೆಯ ಚೆಂಬು ಮತ್ತು ಡಬ್ಬಡ್ಕ ಭಾಗದಲ್ಲಿ ಬೆಳೆ ಹಾನಿಯಾಗಿದೆ. ಆನೆಗಳ ದಾಳಿಯಿಂದ ಬೆಳೆ ಕಳೆದುಕೊಂಡ ರೈತರ ಜಮೀನಿಗೆ ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಸ್ಥಳಕ್ಕೆ ಕೃಷಿ ಅಧಿಕಾರಿಗಳನ್ನು ಕರೆಸಿಕೊಂಡ ಅವರು, ‘ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಸೂಚಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡ ರೈತರು, “ಕಳೆದ 20 ವರ್ಷಗಳಿಂದ ಆನೆ ಹಾವಳಿ ನಿರಂತರವಾಗಿದೆ. ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ. ಅರಣ್ಯ ಇಲಾಖೆಯಿಂದ ಕೂಡ ಸೂಕ್ತ ರೀತಿಯಲ್ಲಿ ಪರಿಹಾರ ದೊರಕುತ್ತಿರಲಿಲ್ಲ” ಎಂದು ದೂರಿದರು.
ಈ ಬಗ್ಗೆ ಸಂಕೇತ್ ಪೂವಯ್ಯ ಅವರು ಫೋನ್ ಕರೆಯ ಮೂಲಕ ಶಾಸಕರಿಗೆ ಮಾಹಿತಿ ನೀಡಿದರು. ಕರೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, “ಕೂಡಲೇ ಬೆಳೆ ನಷ್ಟಕ್ಕೆ ಅಗತ್ಯ ಪರಿಹಾರವನ್ನು ವಿತರಿಸಬೇಕು. ಆನೆ ದಾಳಿ ತಡೆಗೆ ಬೇಕಾದಂತಹ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿಎಲ್, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯ ಆದಮ್, ಗಿರೀಶ್ ಹೊಸೂರು, ಕುಸುಮ ಯೋಗೀಶ್ವರ್, ಜೀವಿ ಗಣಪಯ್ಯ, ಸೋಮಣ್ಣ ಬಾಲಂಬಿ, ತಿರುಮಲ ಸೋನ, ವಾಸು ಪೂಜಾರಿ, ಹನೀಫ್ ಸಂಪಾಜೆ, ಭುವನೇಶ್ವರ ಕೊಪ್ಪದ, ರಘುನಾಥ್ ಬಾಲಂಬಿ, ಗಿರೀಶ್ ಕೆದಂಬಾಡಿ, ದಿನಕರ ಗುಂಡಿಯ, ನಾಗೇಶ ಕಿರ್ಲಾಯ ಮತ್ತಿತರರು ಇದ್ದರು.