ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ವಿಕಲಚೇತನ ಯುವಕನಿಗೆ ಎಲೆಕ್ಟ್ರಿಕ್ ವೀಲ್ ಚೇರ್ ವಿತರಿಸಿ ಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.
ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ವಿಕಲಚೇತನ ಯುವಕ ಅಹ್ಮದ್ ಬಶೀರ್ ಎಂಬುವವರು ಹುಟ್ಟಿನಿಂದ ಅಂಗವೈಫಲ್ಯಕ್ಕೊಳಗಾಗಿ ಸಂಕಷ್ಟ ಅನುಭವಿಸುತ್ತಿದ್ದರು. ಎಸ್ಡಿಪಿಐನ ಉಳ್ಳಾಲ ನಗರಸಭಾ ಸಮಿತಿಯ ಉಪಾಧ್ಯಕ್ಷ ಹಾಗೂ ಉದ್ಯಮಿ ಇಮ್ತಿಯಾಝ್ ಕೋಟೆಪುರ ಅವರು ದಾನವಾಗಿ ನೀಡಿದ ಎಲೆಕ್ಟ್ರಿಕ್ ವೀಲ್ ಚೇರ್ ಅನ್ನು ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು ಭಾನುವಾರದಂದು ವಿತರಿಸಿದರು.
ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದ ಅಹ್ಮದ್ ಬಶೀರ್ ಅವರು ಮತ್ತೊಬ್ಬರ ಸಹಾಯವಿಲ್ಲದೆ ಯಾವುದೇ ಕೆಲಸಗಳನ್ನು ಮಾಡಲು ಸಾದ್ಯವಿಲ್ಲದಂತ ಸ್ಥಿತಿಯಲ್ಲಿದ್ದರು. ಕಳೆದ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇವರನ್ನು ಭೇಟಿಯಾಗಿದ್ದ ಎಸ್ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಹಾಗೂ ಪಕ್ಷದ ನಾಯಕರು ಬಡ ಕುಟುಂಬದ ಬಶೀರ್ ಅವರ ಸಂಕಷ್ಟದ ಜೀವನವನ್ನು ಕಂಡು ಪಕ್ಷದ ವತಿಯಿಂದ ಒಂದು ಎಲೆಕ್ಟ್ರಿಕ್ ವೀಲ್ ಚೇರನ್ನು ಮುಂದಿನ ದಿನಗಳಲ್ಲಿ ದೊರೆಕಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಇಂದು ಉಳ್ಳಾಲ ನಗರಸಭೆಯ ಉಪಾಧ್ಯಕ್ಷ ಇಮ್ತಿಯಾಝ್ ಅವರು ದಾನವಾಗಿ ನೀಡಿದ ಎಲೆಕ್ಟ್ರಿಕ್ ವೀಲ್ ಚೇರ್’ಅನ್ನು ರಿಯಾಝ್ ಫರಂಗಿಪೇಟೆಯವರು ಪಕ್ಷದ ನಾಯಕರೊಂದಿಗೆ ಆಗಮಿಸಿ ಸಂತ್ರಸ್ತ ವಿಕಲಚೇತನ ಯುವಕ ಬಶೀರ್ ಅವರಿಗೆ ಹಸ್ತಾಂತರಿಸಿ ಚುನಾವಣಾ ಸಂದರ್ಭದಲ್ಲಿ ಕೊಟ್ಟ ವಾಗ್ದಾನವನ್ನು ನೆರವೇರಿಸಿದ್ದಾರೆ.
ರಿಯಾಝ್ ಮಾತನಾಡಿ, “ಇನ್ನೊಬ್ಬರನ್ನು ಆಶ್ರಯಿಸದೆ ಬದುಕು ನಡೆಸಬೇಕಾದ ಹುಟ್ಟು ಅಂಗವೈಫಲ್ಯದಿಂದ ಬಳಲುವ ವ್ಯಕ್ತಿಗಳನ್ನು ಸರ್ಕಾರ ಗುರುತಿಸಿ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಬೇಕಾದದ್ದು ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಚುನಾವಣೆಯಲ್ಲಿ ಆಯ್ಕೆಯಾಗಿ ಹೋದ ಬಳಿಕ ಜನರ ಸಮಸ್ಯೆಗೆ ಸ್ಪಂದನೆ ನೀಡದ ಜನಪ್ರತಿನಿಧಿಗಳ ಧೋರಣೆಯಿಂದ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸಿಗತ್ತಿಲ್ಲ. ಆದ್ದರಿಂದ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಇಂತಹ ಸಮಸ್ಯೆಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಲ್ಲ ಶಾಸನಗಳ ತಾಯಿಯೇ ನಮ್ಮ ಸಂವಿಧಾನ: ಹನುಮಂತ ಅನಂತರಾವ್ ಸಾತ್ವಿಕ
ಈ ಸಂದರ್ಭರ್ದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಉಳ್ಳಾಲ ಕ್ಷೇತ್ರ ಕಾರ್ಯದರ್ಶಿ ಬಶೀರ್ ಹರೇಕಳ, ಉಳ್ಳಾಲ ನಗರ ಸಮಿತಿಯ ಅಧ್ಯಕ್ಷ ಸುಹೈಲ್ ಉಳ್ಳಾಲ, ಉಪಾಧ್ಯಕ್ಷ ಇಮ್ತಿಯಾಝ್ ಕೋಟೆಪುರ, ಕಾರ್ಯದರ್ಶಿ ಜಮಾಲ್ ಉಳ್ಳಾಲ, ಸ್ಥಳೀಯ ಮುಖಂಡರುಗಳಾದ ಅಬ್ದುಲ್ ಲತೀಫ್ ಕಲ್ಲಾಪು, ಸಬೀಲ್, ಶಿಹಾಬ್, ಸಲೀಂ, ಇಸ್ಮಾಯಿಲ್, ರಮೀಝ್ ಕಲ್ಲಾಪು ಸೇರಿದಂತೆ ಇತರರು ಇದ್ದರು.