ದಲಿತ ಬಾಲಕಿಯೊಬ್ಬಳ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ. ಆಕೆಯನ್ನು ಚುಡಾಯಿಸುತ್ತಿದ್ದವನೇ ಕೊಲೆ ಮಾಡಿರಬಹುದು ಎಂದು ಅನುಮಾನಿಸಲಾಗಿದೆ. ಸದ್ಯ, ಶಂಕಿತನೂ ಕತ್ತುಕೊಯ್ದುಕೊಂಡು ಆಸ್ಪತ್ರೆ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
20 ದಿನಗಳ ಹಿಂದೆ ದಲಿತ ಬಾಲಕಿ ಶಾಲೆಗೆ ತೆರಳುತ್ತಿದ್ದಾಗ, ಸವರ್ಣೀಯ ಸಮುದಾಯದ ನಿತಿನ್ ಎಂಬಾತ ಚುಡಾಯಿಸಿದ್ದ. ಆತನನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಕೂಡ ಮಾಡಿದ್ದ. ಘಟನೆ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದರು. ಬಳಿಕ, ಮಾಲೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು.
ಆದರೆ, ಗ್ರಾಮದ ಹಿರಿಯ ಮುಖಂಡರು ಎರಡು ಕುಟುಂಬಗಳ ನಡುವೆ ರಾಜೀ-ಸಂದಾನ ನಡೆಸಿದ್ದರು. ರಾಜಿ ಪಂಚಾಯತಿ ನಡೆದ ಕೆಲವೇ ದಿನಗಳಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಗುರುವಾರ ಆಕೆಯ ಮೃತದೇಹ ಪತ್ತೆಯಾಗಿದೆ.
ಅನುಗೊಂಡನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರಿಗೆ ದೂರು ನೀಡಿದ್ದರಿಂದ ಮತ್ತು ರಾಜಿ ಪಂಚಾಯತಿಯಿಂದ ತನಗೆ ಅವಮಾನವಾಗಿದ್ದಕ್ಕೆ, ಪ್ರಬಲ ಜಾತಿಯ ನಿತಿನ್ ಎಂಬಾತನೇ ಕೊಲೆ ಮಾಡಿಬಹುದು ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ, “ಗುರುವಾರ ಬಾಲಕಿಯ ಮೃತದೇಹ ಪತ್ತೆಯಾಗಿದೆ. ನಿತಿನ್ ಎಂಬಾತನೇ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆತನೂ ಕತ್ತುಕೊಯ್ದುಕೊಂಡಿದ್ದಾನೆ. ಆತ ಕೋಮಾ ಸ್ಥಿತಿಯಲ್ಲಿದ್ದಾನೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ನಡೆಯುತ್ತಿದೆ” ಎಂದು ತಳಿಸಿದ್ದಾರೆ.