- ಮೇಲ್ವರ್ಗದ ಗುಂಪಿನಿಂದ ಮೆರವಣಿಗೆ ಸಾಗುತ್ತಿದ್ದ ದಲಿತ ವರನ ಮೇಲೆ ಹಲ್ಲೆ
- ಉತ್ತರ ಪ್ರದೇಶದ ಸಾದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಉತ್ತರ ಪ್ರದೇಶದ ಆಗ್ರಾದಲ್ಲಿ ಕುದುರೆ ಮೇಲೆ ಸವಾರಿ ಮಾಡಿ ಮದುವೆ ಮೆರವಣಿಗೆ ಸಾಗುತ್ತಿದ್ದ 24 ವರ್ಷದ ದಲಿತ ವರನ ಮೇಲೆ ಹಲ್ಲೆ ನಡೆಸಿ ಕುದುರೆಯಿಂದ ಇಳಿಸಿರುವುದು ಮಾತ್ರವಲ್ಲದೆ, ಮದುವೆ ನಡೆಯಲಿರುವ ಸಭಾಭವನದ ವಿದ್ಯುತ್ ಕಡಿತಗೊಳಿಸಿ ಕಿರುಕುಳ ನೀಡಿರುವುದು ತಡವಾಗಿ ಬೆಳಕಿದೆ ಬಂದಿದೆ.
ಮೇ 4ರಂದು ಆಗ್ರಾದ ಸಾದರ್ ಬಜಾರ್ ಪೊಲೀಸ್ ಠಾಣೆಯ ಬಳಿಯ ಸೋಹಲ್ಲ ಜಾತವ್ ಬಸ್ತಿಯ ಮೂಲಕ ವಿವಾಹದ ಮೆರವಣಿಗೆ ಸಾಗುತ್ತಿದ್ದಾಗ ಮೇಲ್ವರ್ಗದ ಗುಂಪೊಂದು ದಾಳಿ ನಡೆಸಿತ್ತು. ವರ ಮತ್ತು ಮೆರವಣಿಗೆಯಲ್ಲಿ ಸಾಗಿದ್ದ ಇತರರ ಮೇಲೆ ಹಲ್ಲೆ ನಡೆಸಲಾಗಿದೆ. ವರನಿಗೆ ಹೊಡೆದು ಕುದುರೆಯಿಂದ ಕೆಳಗಿಳಿಸಲಾಗಿದೆ. ಜಾತಿ ನಿಂದನೆಯನ್ನೂ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಪ್ರಕಾರ, ಮೆರವಣಿಗೆಯಲ್ಲಿ ಸಾಗುತ್ತಿರುವವರು ಆತಂಕದಿಂದ ಮದುವೆ ನಡೆಯಬೇಕಿದ್ದ ರಾಧಾ ಕೃಷ್ಣ ಮದುವೆ ಹಾಲ್ಗೆ ಓಡಿ ಬಂದಿದ್ದರು. ಮೇಲ್ವರ್ಗದ ಮಂದಿ ಕೋಲುಗಳು ಮತ್ತು ಕಬ್ಬಿಣದ ಕಂಬಿಗಳನ್ನು ಹಿಡಿದು ಹೊಡೆಯುತ್ತಾ ಹಿಂಬಾಲಿಸಿ ಅಲ್ಲಿಗೂ ಧಾವಿಸಿದ್ದರು. ವಿವಾಹಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ನಂತರ ಮದುವೆ ಹಾಲ್ನ ವಿದ್ಯುತ್ ತೆಗೆದು ಜಾತಿ ನಿಂದನೆ ಮಾಡಿ ಮದುವೆಗೆ ಅಡ್ಡಿಪಡಿಸಿದ್ದಾರೆ.
ಈ ಸಂಬಂಧ ಸಾದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ವರನ ಅತ್ತೆ ಗೀತಾ ಜಾತವ್ ಮೇ 8ರಂದು ದೂರು ದಾಖಲಿಸಿದ್ದಾರೆ. ಅಳಿಯ ಅಜಯ್ ಜಾತವ್ ಮತ್ತು ಇತರರು ಸೋಹಲ್ಲ ಬಸ್ತಿ ದಾಟುತ್ತಿರುವಾಗ 20-25 ಮಂದಿಯ ಮೇಲ್ವರ್ಗದವರ ಗುಂಪು ದಾಳಿ ನಡೆಸಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. “ನಮ್ಮ ಗ್ರಾಮಗಳಲ್ಲಿ ದಲಿತರ ವರರು ಕುದುರೆ ಏರುವುದಿಲ್ಲ. ಕುದುರೆ ಏರಲು ನಿನಗೆಷ್ಟು ಧೈರ್ಯ” ಎಂದು ದಾಳಿಕೋರರು ನಿಂದಿಸಿರುವುದಾಗಿ ಎಫ್ಐಆರ್ನಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
“ಮೇ 5ರಂದೇ ನಾವು ಈ ಸಂಬಂಧ ದೂರು ದಾಖಲಿಸಲು ಮುಂದಾದರೂ ಪೊಲೀಸರು ಸಹಕರಿಸಲಿಲ್ಲ. ನಂತರ ಆಗ್ರಾ ಪೊಲೀಸ್ ಆಯುಕ್ತ ಡಾ ಪ್ರೀತಿಂದರ್ ಸಿಂಗ್ ಅವರನ್ನು ಸಂಪರ್ಕಿಸಿದೆವು. ಅವರ ನಿರ್ದೇಶನದ ನಂತರ ಮೇ 8ರಂದು ಪೊಲೀಸರು ದೂರು ದಾಖಲಿಸಿದ್ದಾರೆ. ನನ್ನ ಮಗಳ ಮದುವೆಗೆ ಅಡ್ಡಿಯಾದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದೇವೆ” ಎಂದು ಗೀತಾ ಹೇಳಿದ್ದಾರೆ.
ಪೊಲೀಸರು ಯೋಗೇಶ್ ಠಾಕೂರ್, ರಾಹುಲ್ ಕುಮಾರ್, ಸೋನು ಠಾಕೂರ್, ಕುಣಾಲ್ ಹಾಗೂ ಶಿಶುಪಾಲ್ ಮೊದಲಾದ ಐದು ಮಂದಿಯನ್ನು ಗುರುತಿಸಿ ದೂರು ದಾಖಲಿಸಿದ್ದಾರೆ. 20 ಮಂದಿ ಅಪರಿಚಿತರ ಮೇಲೂ ದೂರು ದಾಖಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯಡಿಯೂ ದೂರು ದಾಖಲಿಸಿಕೊಳ್ಳಲಾಗಿದೆ. “ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ” ಎಂದು ಸಾದರ್ ಬಜಾರ್ ಉಪ ಪೊಲೀಸ್ ಆಯುಕ್ತರು ಹೇಳಿದ್ದಾರೆ.