ಭೂ ಸುಧಾರಣೆ ಮೂಲಕ ಎಲ್ಲರಿಗೂ ಸಮಾನ ಹಕ್ಕು ನೀಡಿದ ಸಾಮಾಜಿಕ ಹರಿಕಾರ ದೇವರಾಜ ಅರಸು ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ಜಿಲ್ಲಾಡಳಿತದದಿಂದ ಆಯೋಜಿಸಿದ ಧೀಮಂತ ನಾಯಕ ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ದೇವರಾಜ ಅರಸು ಕರ್ನಾಟಕ ರಾಜ್ಯದ ಅಪರೂಪದ ರಾಜಕಾರಣಿ. ಅರಸು ಬಡವರ ಮತ್ತು ಸಾಮಾಜಿಕ ನ್ಯಾಯದ ಪರವಾಗಿದ್ದರು. ಭೂ ಸುಧಾರಣೆ ಕಾಯಿದೆ ಜಾರಿಗೆ ತಂದು ʼಉಳುವವನೇ ಭೂ ಒಡೆಯʼ ಎಂಬ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಸಮಾಜದಲ್ಲಿ ಎಲ್ಲರಿಗೂ ಸಮಾನತೆಯನ್ನು ಮೆರೆದಿದ್ದಾರೆ” ಎಂದರು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಮಾತನಾಡಿ, “ಬಡವರೂ ಕೂಡ ರಾಜಕೀಯ ಮತ್ತು ಇನ್ನಿತರ ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಇದಕ್ಕೆ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ಅರಸು ಅವರ ಆಡಳಿತ ವೈಖರಿಯೇ ಕಾರಣವಾಗಿದೆ. ಮಕ್ಕಳು ದೇಶದ ಮುಂದಿನ ಭವಿಷ್ಯದ ನಿರ್ಮಾಣಕಾರರು. ಆದ್ದರಿಂದ ವಿದ್ಯಾರ್ಥಿಗಳು ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ ಅರಸು ಅವರ ಚಿಂತನೆ ಮತ್ತು ಆಲೋಚನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ಜಗಳೂರು : ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ 108 ನೇ ದೇವರಾಜ್ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಗಳೂರು ಶಾಸಕ ಬಿ ದೇವೇಂದ್ರಪ್ಪ ಸ್ಮರಿಸಿದರು.
“ಹಿಂದುಳಿದ ವರ್ಗಗಳ ಸಮಾಜಕ್ಕೆ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ್ ಅರಸು ಅವರು ಆದರ್ಶ” ಎಂದು ಜಗಳೂರು ಶಾಸಕ ಬಿ ದೇವೇಂದ್ರಪ್ಪ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ದೇವರಾಜ ಅರಸು ನಾಡಿನ ಶ್ರೇಷ್ಠ ರಾಜಕಾರಣಿ: ಶಾಸಕ ಶರಣು ಸಲಗರ
“ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸಿಲ್ಲದೆ ದಾರಿಯಲ್ಲಿ ನಡೆಯಲು ಅಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ವಿವಿಧ ಆಯಾಮಗಳಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಮೈಲುಗಲ್ಲು ಹಾಕಿದ್ದಾರೆ. ಭೂ ಸುಧಾರಣೆ, ಮಲಹೋರುವ ಪದ್ಧತಿ ನಿಷೇಧ ಸೇರಿದಂತೆ ಹಲವು ಮಜಲುಗಳಲ್ಲಿ ಆಡಳಿತ ನಡೆಸಿ ಆರ್ಥಿಕ ಸಂಪತ್ತು ಮತ್ತು ಅವಕಾಶಗಳನ್ನು ಎಲ್ಲ ವರ್ಗದವರಿಗೂ ಸಮಾನವಾಗಿ ಒದಗಿಸಿದ ಧೀಮಂತ ರಾಜಕಾರಣಿಯಾಗಿದ್ದಾರೆ” ಎಂದು ಸ್ಮರಿಸಿದರು.