ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹೊನ್ನಾಳಿಯಿಂದ ಮೂವರು ಬಿಜೆಪಿ ಮುಖಂಡರು ಆಕಾಂಕ್ಷಿತರಿದ್ದೇವೆ. ಇದೇ ಡಿಸೆಂಬರ್ 31 ರಂದು ಜಿಲ್ಲಾಧ್ಯಕ್ಷರ ಆಯ್ಕೆ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಈ ವೇಳೆ ಹೊನ್ನಾಳಿ ತಾಲೂಕಿಗೆ ಅವಕಾಶ ನೀಡಬೇಕೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಹೊನ್ನಾಳಿ ತಾಲೂಕಿನಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ನಾನೂ ಸೇರಿದಂತೆ ಹನುಮಂತಪ್ಪ ಹಾಗೂ ಕೆ ವಿ ಚನ್ನಪ್ಪ ಆಕಾಂಕ್ಷಿತರಿದ್ದೇವೆ. ಈ ಬಾರಿ ನಮ್ಮನ್ನು ಪರಿಗಣಿಸಬೇಕು” ಎಂದು ಮನವಿ ಮಾಡಿದರು.
“ನಾನೂ ಕೂಡ ಹೊನ್ನಾಳಿ ಮಂಡಲದಿಂದ ಎರಡು ಬಾರಿ ಮಂಡಲದ ಅಧ್ಯಕ್ಷನಾಗಿ, ಮೂರು ಬಾರಿ ಉಪಾಧ್ಯಕ್ಷನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಅದೇ ರೀತಿ ಹನುಮಂತಪ್ಪ ಹಾಗೂ ಕೆ ವಿ ಚನ್ನಪ್ಪ ಅವರುಗಳೂ ಬಿಜೆಪಿಗಾಗಿ ದುಡಿದಿದ್ದಾರೆ. ಇದೀಗ ನಾವು ಮೂವರೂ ಕೂಡ ಆಕಾಂಕ್ಷಿಗಳಾಗಿದ್ದೇವೆ. ಈವರೆಗೂ ಹೊನ್ನಾಳಿ ತಾಲೂಕಿಗೆ ಅಧ್ಯಕ್ಷ ಸ್ಥಾನ ದೊರೆತಿಲ್ಲ. ಆದ್ದರಿಂದ ನಮ್ಮ ಮೂವರಲ್ಲಿ ಯಾರಿಗೇ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೂ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ” ಎಂದರು.
“ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಅವರು ತಮಗೇ ಟಿಕೆಟ್ ನೀಡಬೇಕೆಂದು ಕೆಲವರಿಂದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಿಂದ ಯಾರಿಗೇ ಟಿಕೇಟ್ ಸಿಕ್ಕರೂ ಗೆಲ್ಲಬಹುದು. ಈ ರೀತಿ ತಮ್ಮ ಬಗ್ಗೆ ತಾವೇ ಅವರಿವರಿಂದ ಹೇಳಿಸುವುದು ಸರಿಯಲ್ಲ” ಎಂದರು.
“ರೇಣುಕಾಚಾರ್ಯ ಅವರು ಪಕ್ಷಕ್ಕಾಗಿ ಬಹು ವರ್ಷಗಳಿಂದ ದುಡಿದವರ ಹೆಸರನ್ನು ಹೇಳಿಸಬಹುದಿತ್ತು. ಆದರೆ ಅವರು ತಮ್ಮ ಹೆಸರನ್ನು ಪ್ರಸ್ತುತ ಪಡಿಸಿದ್ದು ಅಸಮಾಧಾನ ತಂದಿದೆ. ಈ ಹಿಂದೆ ಶಾಸಕರಾಗಿ, ಸಚಿವರಾಗಿ ಅವರು ಅಧಿಕಾರ ಅನುಭವಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳುವುದು ಎಷ್ಟು ಸರಿ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | 15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
“ಪಕ್ಷ ಯಾರಿಗೇ ಟಿಕೆಟ್ ನೀಡಲಿ, ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತೇವೆ. ನಾವೆಲ್ಲಾ ಸುಮಾರು 33 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇವೆ ಇದನ್ನು ಪರಿಗಣಿಸಿ ಈ ಬಾರಿ ಹೊನ್ನಾಳಿ ತಾಲೂಕಿಗೆ ಅಧ್ಯಕ್ಷ ಸ್ಥಾನ ನೀಡಬೇಕು” ಎಂದರು.
ಹನುಮಂತಪ್ಪ, ಕೆ ವಿ ಚನ್ನಪ್ಪ, ದೇವರಾಜ್, ಸಿ ಕೆ ಪ್ರಭು ಸೋಗಿಲು, ಚನ್ನೇಶ್, ಶಿವಕುಮಾರ್ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.