ಯಾವುದೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶ ಸ್ಥಳೀಯ ಸಾಂಸ್ಕೃತಿಕ ಸಾಹಿತ್ಯಿಕ ಅವಲೋಕನ ಮತ್ತು ಚಿಂತನ ಮಂಥನ ಮಾಡುವುದಾಗಿದೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ. ಸಿ.ವಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಶ್ರೀ ಸಿದ್ದೇಶ್ವರ ಪ್ಯಾಲೇಸ್ನಲ್ಲಿ ನಡೆದ ದಾವಣಗೆರೆ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ್ಯತೆ ವಹಿಸಿ ಅವರು ಮಾತನಾಡಿದರು.
“ದಾವಣಗೆರೆ ಜಿಲ್ಲೆಯು ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ” ಎಂದರು.
“ಸ್ಥಳೀಯ ಸಾಹಿತಿಗಳು, ಬರಹಗಾರರು ಹಾಗೂ ಜನರು ಒಟ್ಟಿಗೆ ಸೇರಿ ಜಿಲ್ಲೆಯ ಸಮಗ್ರ ಸಾಹಿತ್ಯಿಕ-ಸಾಂಸ್ಕೃತಿಕ- ಚಿಂತನೆಗಳ ಜೊತೆಗೆ ಕನ್ನಡ ನಾಡು-ನುಡಿಯ ಕುರಿತಾದ ಪರಂಪರೆ ಹಾಗೂ ಕನ್ನಡ ಸಾಹಿತ್ಯ ತನ್ನ ಪರಂಪರೆಯುದ್ದಕ್ಕೂ ಸಾರಿ, ಜೀವ ಹಾಗೂ ಜೀವನಪರ ಮೌಲ್ಯಗಳ ಜೊತೆಗೆ ಪ್ರಗತಿಪರವಾದ ಅರಿವು ಅಭಿಮಾನಗಳನ್ನು ಪುನರ್ ಮನನ ಮಾಡುವುದು ಹಾಗೂ ಜಿಲ್ಲೆಯ ಅಭಿವೃದ್ಧಿಪರ ಯೋಜನೆ ಹಾಗೂ ಯೋಜನೆಗಳನ್ನು ಸಾಕಾರಗೊಳಿಸಲು ಇಲ್ಲಿ ಸಮ್ಮಿಲನಗೊಂಡ ಜನರಿಗೆ, ರಾಜಕೀಯ ಪ್ರತಿನಿಧಿಗಳಿಗೆ, ಆಡಳಿತ ವ್ಯವಸ್ಥೆಗೆ ಗಮನಕ್ಕೆ ತರುವುದೇ ಆಗಿದೆ ಎಂಬುದು ನನ್ನ ಗ್ರಹಿಕೆಯಾಗಿದೆ” ಎಂದರು.
“ಹಿಂದಿನ ಕಾಲಘಟದಲ್ಲಿ ಸಾಹಿತ್ಯವನ್ನು ಕುರಿತಾದ ಮೀಮಾಂಸೆಗಳು, ರಸಾನುಭವ, ಕಲಾನುಭೂತಿ, ಅದರಿಂದ ಒದಗುವ ಆನಂದ ಮುಂತಾದ ವಿಷಯಗಳನ್ನು ಚರ್ಚೆಗಳು ನಡೆಯುತ್ತಿದ್ದವು. ಆದರೆ, ಇಂದು ಸಾಹಿತ್ಯ – ಸಾಂಸ್ಕೃತಿಕ ಚರ್ಚೆಗಳು ಕೇವಲ ರಸಾನುಭವ ಮಟ್ಟದಲೇ ವಿರಮಿಸಿಕೊಳ್ಳುವಂತಿಲ್ಲ. ಹಾಗೆ ವಿರಮಿಸಿಕೊಳ್ಳುವ ಕಾಲವೂ ಅಲ್ಲ. ಸಾಹಿತ್ಯಕ್ಕೆ ಸಾಮಾಜಿಕ ಆಯಾಮ ಬೇಕು. ಸಮಾಜವನ್ನು ಬದಲಾವಣೆ ಮಾಡುವ ಅದನ್ನು ‘ಸರ್ವಜನಾಂಗದ ಶಾಂತಿಯ ತೋಟʼವನ್ನಾಗಿ ಮಾಡುವ ಶಕ್ತಿ ಅದಕ್ಕೆ ಇರುವುದರಿಂದ ಜನ ಇಂಥ ಸಮ್ಮೇಳನಗಳ ಮುಖಾಂತರ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅರಿವು ಅಭಿಮಾನ ಮೂಡಿಸುವುದರ ಜೊತೆಗೆ ಸಮಾಜ ಬಯಸುವ ಅಭಿವೃದ್ಧಿ ಹಾಗೂ ಬದಲಾವಣೆಗಳು ಸಾಹಿತ್ಯದ ಮೂಲಕ ಆಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
“ಚರ್ಚೆ-ಚಿಂತನೆಗಳ ಮೂಲಕ ಸ್ಥಳೀಯ ಸಂವೇದನೆಗಳ ಬಗೆಗೆ ‘ಬೌದ್ಧಿಕ ಬೆಳಕು’ ಪಡೆಯಲು ಬರುತ್ತಾರೆಂದು ತಿಳಿಯಲಾಗಿದೆ. ಹಾಗೆಯೇ ಆಗಬೇಕಾಗಿರುವುದು ಇಂಥ ಸಮ್ಮೇಳನಗಳ ಉದ್ದೇಶವೂ ಕೂಡ ಅದೇ ಆಗಿರುತ್ತದೆ ಎಂದರು. ‘ಭಾವಸಂಗಮ’ದ ಕೇಂದ್ರವಾದ ‘ದಾವಣಗೆರೆ’ಯದು ವಿಶಿಷ್ಟ ಸಂಸ್ಕೃತಿ, ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗಲೂ ತನ್ನ ವಿಶಿಷ್ಟ ಸಾಂಸ್ಕೃತಿಕ ಭಿನ್ನತೆಯನ್ನ ಬಿಟ್ಟುಕೊಟ್ಟಿರಲಿಲ್ಲ. ಅದು ನಮಗೆ ಹೆಮ್ಮೆಯ ಸಂಗತಿ ಎಂದರು.
ದಾವಣಗೆರೆ ಜಿಲ್ಲೆ ಮೂಲತಃ ಹತ್ತಿಗಿರಣಿಯಿಂದ ಏಕಾಏಕಿ ಮತ್ತೊಂದು ಹೊಸ ಆಯಾಮವನ್ನು ಪಡೆದು ‘ಸಮಾಜೋಪಿ ಶೈಕ್ಷಣಿಕ ವಿದ್ಯಾಕಾಶಿ’ಯಾಗಿ ರೂಪಾಂತರ ಹೊಂದಿದೆ. ಹಾಗೆಯೇ ಮೂರು ವಿಭಿನ್ನ ಪ್ರದೇಶಗಳ ವೈಶಿಷ್ಟ್ಯತೆ. ಅಲ್ಲಿನ ಆಸ್ಥಿತೆ, ಸಾಂಸ್ಕೃತಿ-ಚಹರೆಗಳಿಂದ ಮಿಳಿತವಾಗಿ ಈ ಜಿಲ್ಲೆಯಲ್ಲಿ ಹೊಸ ‘ಸಂವೇದನೆ’ಗಳು ಹುಟ್ಟಿ ಕೊಂಡಿದ್ದರಿಂದ ಹೊಸ ಸಾಹಿತ್ಯ ಮತ್ತು ಸಾಂಸ್ಕೃತಿಕ ಚರಿತ್ರೆಗಳನ್ನು ಕಟ್ಟುವ ಅವಶ್ಯಕತೆ ಒಡಮೂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳ ಮುಖಾಂತರ ಸ್ಥಳೀಯ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಅವಲೋಕನ ಮತ್ತು ಚಿಂತನ-ಮಂಥನ ಮಾಡುವುದೇ ಜಿಲ್ಲಾ ಸಮ್ಮೇಳನಗಳ ಮೂಲ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಗರದ ಹರಿಹರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮ್ಮೇಳನದ ಸ್ಥಳಕ್ಕೆ ಆಗಮಿಸಿತು.
ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಎಸ್.ಎಸ್. ಕೇರ್ ಟ್ರಸ್ಟಿ ಪ್ರಭಾ ಮಲ್ಲಿಕಾರ್ಜುನ್, ಪ್ರೊ.ಮಲ್ಲೇಪುರಂಜಿ ವೆಂಕಟೇಶ, ವಿ. ದಿಳ್ಳಪ್ಪ, ರಾಘವೇಂದ್ರ ನಾಯರಿ ಮತ್ತಿತರರಿದ್ದರು.