ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಬಂಧನದಲ್ಲಿರುವ ಕೇಜ್ರಿವಾಲ್ ನೀಡಿರುವ ಸಂದೇಶವನ್ನ ಅವರ ಪತ್ನಿ ಓದುತ್ತಿರುವ ವಿಡಿಯೋವನ್ನು ಎಎಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಈ ಬೆನ್ನಲ್ಲೇ ದೆಹಲಿಯಲ್ಲಿರುವ ಎಎಪಿ ಕಚೇರಿಯನ್ನು ಪೊಲೀಸರು ಎಲ್ಲ ಕಡೆಗಳಿಂದ ಸೀಲ್ ಮಾಡಿದ್ದಾರೆ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.
ತಮ್ಮನ್ನು ಪಕ್ಷದ ಕಚೇರಿಗೆ ಪ್ರವೇಶಿದಂತೆ ತಡೆಯಲಾಗುತ್ತಿದೆ ಎಂದು ಎಎಪಿ ಮುಖಂಡರಾದ ಅತಿಶಿ, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ಇತರರು ಆರೋಪಿಸಿದ್ದಾರೆ.
.@AamAadmiParty has sought an urgent appointment with the Election Commission, to ensure a level playing field in the Lok Sabha elections.
Despite the representation made yesterday, today @AamAadmiParty office was sealed. Lok Sabha candidates and party leaders could not come to… pic.twitter.com/cqb6V8QTSM
— Atishi (@AtishiAAP) March 23, 2024
“ದೆಹಲಿಯಲ್ಲಿರುವ ಎಎಪಿ ಕಚೇರಿಯನ್ನು ಎಲ್ಲ ಕಡೆಯಿಂದಲೂ ‘ಸೀಲ್’ ಮಾಡಲಾಗಿದ್ದು, ಪ್ರವೇಶ ನಿರ್ಬಂಧಿಸಲಾಗಿದೆ. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು” ಎಂದು ದೆಹಲಿ ಸಚಿವೆ ಆತಿಶಿ ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಆತಿಶಿ, “ದಿಲ್ಲಿಯ ‘ಐಟಿಒ‘ನಲ್ಲಿರುವ ಪಕ್ಷದ ಕಚೇರಿಯನ್ನು ಎಲ್ಲ ಕಡೆಗಳಿಂದ ಸೀಲ್ ಮಾಡಲಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ರಾಷ್ಟ್ರೀಯ ಪಕ್ಷವೊಂದರ ಕಚೇರಿಯನ್ನು ಈ ರೀತಿ ಹೇಗೆ ಬಂದ್ ಮಾಡಬಹುದು” ಎಂದು ಪ್ರಶ್ನಿಸಿದ್ದಾರೆ.
“ಸಂವಿಧಾನವು ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅವಕಾಶವನ್ನು ನೀಡುತ್ತದೆ. ಆದರೆ, ಕಚೇರಿಯನ್ನು ‘ಸೀಲ್’ ಮಾಡಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ” ಎಂದು ತಿಳಿಸಿದ್ದಾರೆ.
“ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಮತ್ತು ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ಆಯುಕ್ತರಲ್ಲಿ ಎಎಪಿ ಸಮಯಾವಕಾಶ ಕೇಳಿದೆ” ಎಂದಿದ್ದಾರೆ.
ಎಎಪಿ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್ ಕೂಡ ಪ್ರತಿಕ್ರಿಯಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೊದಲು ನೀರು ಕೊಟ್ಟು ಆಮೇಲೆ ಚುನಾವಣಾ ಪ್ರಚಾರಕ್ಕೆ ಬನ್ನಿ; ಕರವೇ ಟಿ.ಎ.ನಾರಾಯಣಗೌಡ
ಎಎಪಿ ನಾಯಕರ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ. “ನಾವು ಯಾವುದೇ ಕಚೇರಿಯನ್ನು ಸೀಲ್ ಮಾಡಿಲ್ಲ. ಆ ಪ್ರದೇಶದಲ್ಲಿ ಸಿಆರ್ಪಿಸಿ ಸೆಕ್ಷನ್ 144 ಡಿಡಿ ಜಾರಿಗೊಳಿಸಲಾಗಿದೆ. ಹೀಗಾಗಿ, ಅಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ, ಆ ಸ್ಥಳಗಳಲ್ಲಿ ಸಭೆ ಸೇರುವುದನ್ನು ನಿಷೇಧಿಸಲಾಗಿದೆ” ಎಂದು ಡಿಸಿಪಿ (ಕೇಂದ್ರ) ಎಂ ಹರ್ಷವರ್ಧನ ಹೇಳಿದ್ದಾರೆ.
“ಎಎಪಿಯ 500ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ನಾಯಕರು ಶನಿವಾರ ಶಾಹೀದಿ ಪಾರ್ಕ್ನಲ್ಲಿ ಜಮಾಯಿಸಿದ್ದರು. ಸಭೆಗೆ ಅನುಮತಿ ಪಡೆಯದೆಯೇ ಮೆರವಣಿಗೆ ಮಾಡಿದ್ದರು. ಈ ಮಾರ್ಗದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಅಲ್ಲದೆ, ಆ ರಸ್ತೆಯಲ್ಲಿ ನ್ಯಾಯಾಲಯ ಮತ್ತು ಹಲವು ರಾಜಕೀಯ ಪಕ್ಷಗಳ ಕಚೇರಿಗಳು ಇವೆ. ಹಾಗಾಗಿ, ಅವರನ್ನು ತಡೆಯಲಾಯಿತು. 25 ಮಂದಿಯನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು” ಎಂದು ಅವರು ವಿವರಿಸಿದ್ದಾರೆ.