- ಆಸ್ಪತ್ರೆಯಲ್ಲಿ ಡೆಂಗ್ಯೂಗೆ ದಾಖಲಾಗುವವರ ಸಂಖ್ಯೆ 20% ಹೆಚ್ಚಳ
- ಜುಲೈ-ಆಗಸ್ಟ್ನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ನಗರದ ಆಸ್ಪತ್ರೆಗಳಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ದಿನಕ್ಕೆ 20ಕ್ಕಿಂತ ಕಡಿಮೆ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ, ಈ ಸಂಖ್ಯೆ 100ಕ್ಕೆ ಏರಿಕೆ ಕಂಡಿದೆ ಎಂದು ಸಮಗ್ರ ಆರೋಗ್ಯ ಮಾಹಿತಿ ವೇದಿಕೆ (ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್ಫಾರ್ಮ್) (ಐಎಚ್ಐಪಿ) ಹೇಳಿದೆ.
ನಗರದಲ್ಲಿನ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಿಂದ ರೋಗಿಗಳ ವರದಿಯನ್ನು ಐಎಚ್ಐಪಿ ಪೋರ್ಟಲ್ನಲ್ಲಿ ನಮೂದಿಸಲಾಗಿದೆ.
ಮೇ ಅಂತ್ಯಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕ್ರಮೇಣ ಏರಿಕೆಯಾಗಲು ಆರಂಭವಾಯಿತು. ಜೂನ್ನಿಂದಲೂ ಈ ಸಂಖ್ಯೆ ಏರಿಕೆ ಕಾಣುತ್ತಿದೆ. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗಬಹುದು. ತೀವ್ರತರವಾದ ಪ್ರಕರಣಗಳು ಕಡಿಮೆ ಇದ್ದರೂ ದಾಖಲಾತಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸ್ಪರ್ಶ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ.ಜಾನ್ ಪಾಲ್ ಮಾತನಾಡಿ, “ಆಸ್ಪತ್ರೆಯಲ್ಲಿ ಡೆಂಗ್ಯೂಗೆ ದಾಖಲಾಗುವವರ ಸಂಖ್ಯೆ ಏಪ್ರಿಲ್-ಮೇಗೆ ಹೋಲಿಸಿದರೆ ಈಗ 10 ರಿಂದ 20 ಪ್ರತಿಶತದಷ್ಟು ಹೆಚ್ಚಾಗಿದೆ” ಎಂದರು.
ಸೇಂಟ್ ಜಾನ್ಸ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಪೂರ್ಣಿಮಾ ಆರ್ ಎನ್ ಮಾತನಾಡಿ, “ಈ ಬಾರಿ ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿರುವುದು ವಿಭಿನ್ನವಾಗಿದೆ. ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಆದರೆ, ಈ ಬಾರಿ ಏಳರಿಂದ 10 ದಿನಗಳ ಕಾಲ ಜ್ವರ ಇದೆ. ಈ ವೇಳೆಯಲ್ಲಿ ಮಾತ್ರ ಕಡಿಮೆ ಬಿಪಿ ಮತ್ತು ಪ್ಲೇಟ್ಲೆಟ್ ಸಂಖ್ಯೆ ಕಡಿಮೆ ಸೇರಿದಂತೆ ಡೆಂಗ್ಯೂ ನಿರ್ದಿಷ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕರಾವಳಿಯಲ್ಲಿ ಬೆಂಬಿಡದೆ ಸುರಿಯುತ್ತಿರುವ ಮಳೆ
“ಕೆಲವು ಸಂದರ್ಭಗಳಲ್ಲಿ, ಮೂರರಿಂದ ನಾಲ್ಕು ದಿನಗಳವರೆಗೆ ಜ್ವರ ಇರುತ್ತದೆ. ಅದು ಕ್ರಮೇಣ ಕಡಿಮೆಯಾಗುತ್ತದೆ ಮತ್ತೆ ಆರಂಭವಾಗುತ್ತದೆ. ಮಕ್ಕಳಿಗೆ ತೀವ್ರ ಆಯಾಸವಿದೆ. ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿ ಈಗ ಡೆಂಗ್ಯೂ ರೋಗಿಗಳು ಸುಮಾರು 10 ಪ್ರತಿಶತದಷ್ಟು ದಾಖಲಾಗಿದ್ದಾರೆ. ಜುಲೈ-ಆಗಸ್ಟ್ನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. 1 ರಿಂದ 2 ರಷ್ಟು ಡೆಂಗ್ಯೂ ರೋಗಿಗಳು ಪ್ರಸ್ತುತ ಐಸಿಯುಗೆ ದಾಖಲಾಗುತ್ತಿದ್ದಾರೆ” ಎಂದು ಡಾ.ಪೂರ್ಣಿಮಾ ಹೇಳಿದರು.
“ಏಪ್ರಿಲ್-ಮೇಗೆ ಹೋಲಿಸಿದರೆ ಕೆಮ್ಮು, ಶೀತ, ಆಸ್ತಮಾದ ಉಲ್ಬಣ ಸೇರಿದಂತೆ ಇತ್ಯಾದಿ ರೋಗ ಲಕ್ಷಣಗಳನ್ನು ಹೊಂದಿರುವ ಸುಮಾರು 20 ರಿಂದ 30 ಪ್ರತಿಶತದಷ್ಟು ಜನರ ಸಂಖ್ಯೆ ಹೆಚ್ಚಾಗಿದೆ. ಆದರೆ, ಸಂಖ್ಯೆ ಅಥವಾ ತೀವ್ರತೆಯ ವಿಷಯದಲ್ಲಿ ಪರಿಸ್ಥಿತಿಯು ಆತಂಕಕಾರಿಯಾಗಿಲ್ಲ” ಎಂದು ಹೇಳಿದರು.