- ಡಿಜಿಪಿ ಪ್ರವೀಣ್ ಸೂದ್ 1986ನೇ ಬ್ಯಾಚ್ನ ಐಪಿಎಸ್ ಅಧಿಕಾರಿ
- ಮೇ 25ಕ್ಕೆ ಹಾಲಿ ಸಿಬಿಐ ನಿರ್ದೇಶಕರ ಅಧಿಕಾರಾವಧಿ ಮುಕ್ತಾಯ
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಕೇಂದ್ರ ತನಿಖಾ ದಳದ (ಸಿಬಿಐ) ಮುಂದಿನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈಗಿನ ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಎರಡು ವರ್ಷಗಳ ಅಧಿಕಾರವಧಿ ಇದೇ 25ಕ್ಕೆ ಕೊನೆಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರ ಉನ್ನತ ಮಟ್ಟದ ಸಮಿತಿ ಶನಿವಾರ (ಮೇ 13) ಸಂಜೆ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತೀರ್ಮಾನಿಸಿದೆ.
ಸೂದ್ ಅವರು 1986ನೇ ಬ್ಯಾಚ್ ರಾಜ್ಯ ಕೇಡರ್ನ ಐಪಿಎಸ್ ಅಧಿಕಾರಿ. ಸಿಬಿಐ ನಿರ್ದೇಶಕರ ಹುದ್ದೆಗೆ ಸೂದ್ ಮುಂಚೂಣಿಯಲ್ಲಿದ್ದರು. ಸುಧೀರ್ ಸಕ್ಸೇನಾ (ಮಧ್ಯಪ್ರದೇಶ ದಿಜಿಪಿ), ತಾಜ್ ಹಸನ್ ಮತ್ತು ಪ್ರವೀಣ್ ಸೂದ್ (ಕರ್ನಾಟಕ) ಅವರು ಮುಂದಿನ ಸಿಬಿಐ ನಿರ್ದೇಶಕ ಹುದ್ದೆ ಸ್ಪರ್ಧೆಯ ಪಟ್ಟಿಯಲ್ಲಿದ್ದರು. ಅಂತಿಮವಾಗಿ ಪ್ರವೀಣ್ ಸೂದ್ ನೇಮಕಗೊಂಡಿದ್ದಾರೆ.
ನೂತನ ಕೇಂದ್ರ ವಿಚಕ್ಷಣ ದಳದ ಆಯುಕ್ತ ಮತ್ತು ಲೋಕಪಾಲ ಸದಸ್ಯರ ಆಯ್ಕೆ ಬಗ್ಗೆ ಉನ್ನತ ಸಮಿತಿಯಲ್ಲಿ ಚರ್ಚಿಸಲಾಗಿದೆ. ಈ ಕುರಿತು ಅಗತ್ಯ ಮಾಹಿತಿಗಳನ್ನು ಶೀಘ್ರ ಬಹಿರಂಗಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸೂದ್ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದರು. ನಂತರ ಕಳೆದ ಮಾರ್ಚ್ನಲ್ಲಿ ಪ್ರವೀಣ್ ಸೂದ್ ಅವರ ಹೆಸರು ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಪ್ರವೀಣ್ ಸೂದ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ, ಅವರನ್ನು ಬಂಧಿಸಬೇಕು ಎಂದು ಡಿ ಕೆ ಶಿವಕುಮಾರ್ ಆಗ್ರಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಪಾಕ್ಗೆ ಮಾಹಿತಿ ಸೋರಿಕೆ ಮಾಡಿದ ಡಿಆರ್ಡಿಒ ವಿಜ್ಞಾನಿ ಆರ್ಎಸ್ಎಸ್ ಕಾರ್ಯಕರ್ತ; ಕಾಂಗ್ರೆಸ್ ಆರೋಪ
ಆದರೆ, ರಾಜ್ಯದಲ್ಲಿ ಸೂದ್ ಅವರು ಅನೇಕ ವಿಚಾರಗಳಲ್ಲಿ ವಿರೋಧ ಎದುರಿಸುತ್ತಿದ್ದರು. ರಾಜ್ಯ ಬಿಜೆಪಿ ಸರ್ಕಾರದ ಜೊತೆಗೂ ಅವರ ಸಂಬಂಧ ಹೆಚ್ಚು ಸೌಹಾರ್ದಯುತವಾಗಿರಲಿಲ್ಲ ಎಂದು ವಿಶ್ಲೇಷಿಸಲಾಗಿತ್ತು.
ಸಿಬಿಐ ನಿರ್ದೇಶಕರನ್ನು ಎರಡು ವರ್ಷದ ಅವಧಿಗೆ ನೇಮಿಸಲಾಗುತ್ತದೆ. ಅಧಿಕಾರವನ್ನು ಐದು ವರ್ಷದ ಅವಧಿಗೆ ವಿಸ್ತರಿಸಬಹುದು.