ಕಲಬುರಗಿ ಮಹಾನಗರ ಪಾಲಿಕೆಯ ಭ್ರಷ್ಟ ಎಂಜಿನಿಯರ್ಗಳು ಮತ್ತು ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು. 477 ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಧರಣಿ ನಡೆಸುತ್ತಿದೆ. ಧರಣಿಯು 4ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಸೂರ್ಯಕಾಂತ ನಿಂಬಳಕರ್, “ಪಾಲಿಕೆಯಲ್ಲಿ ದಿನಗೂಲಿ ಕಾರ್ಮಿಕರಾಗಿ 477 ಪೌರ ಕಾರ್ಮಿಕರು ಸುಮಾರು 20 ವರ್ಷಗಳಿಂದ ನಿರಂತರವಾಗಿ ದುಡಿಯುತ್ತಿದ್ದಾರೆ. ಹೊರಗುತ್ತಿಗೆ ನೇಮಕಾತಿಯನ್ನು ನಿಲ್ಲಿಸುವಂತೆ ಕಾರ್ಮಿಕ ನ್ಯಾಯಾಲಯ ಅದೇಶ ನೀಡಿದ್ದು, ಎಲ್ಲ ಪೌರ ಕಾರ್ಮಿಕರು ದಿನಗೂಲಿ ನೌಕರರಾಗಿದ್ದಾರೆ. ಆದರೆ, 35 ತಿಂಗಳಿಂದ ಕಾರ್ಮಿಕರಿಗೆ ವೇತನ ನೀಡಲಾಗಿಲ್ಲ. ಕೂಡಲೇ ವೇತನ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಕಾರ್ಮಿಕ ನ್ಯಾಯಾಲಯದ ಆದೇಶದ ವಿರುದ್ಧ ಪಾಲಿಕೆಯು ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಜಿಲ್ಲಾ ನ್ಯಾಯಾಲಯವು ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆಯಡಿ 35 ತಿಂಗಳ ಬಾಕಿರುವ ವೇತನ ನೀಡುವಂತೆ ಮತ್ತು ದಿನಗೂಲಿ ನೌಕರರೆಂದು ಪರಿಗಣಿಸುವಂತೆ ಆದೇಶಿಸಿದೆ. ಆದರೆ, ದಿನಗೂಲಿ ನೌಕರರಿಗೆ ಸಿಗಬೇಕಾದ ಸೌಲಭ್ಯ ಹಾಗೂ 20 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದರೂ ಅವರನ್ನು ಖಾಯಮಾತಿ ಮಾಡಲಾಗಿಲ್ಲ” ಎಂದು ಕಿಡಿಕಾರಿದ್ದಾರೆ.
“2016-17ನೇ ಸಾಲಿನ ಸರ್ಕಾರಿ ಆದೇಶದಂತೆ ಕಲಬುರಗಿ ಮಹಾನಗರ ಪಾಲಿಕೆ ಹೊರತುಪಡಿಸಿ ಇಡೀ ರಾಜ್ಯದ್ಯಾಂತ ಕಾರ್ಮಿಕರ ಖಾಯಮಾತಿ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ. 3 ವರ್ಷಗಳ ತಡವಾಗಿ ಪಾಲಿಕೆಯಲ್ಲಿ ಖಾಯಮಾತಿ ಪ್ರಕ್ರಿಯೆಗೆ ಕಲಬುರಗಿ ಜಿಲ್ಲಾಧಿಕಾರಿಗಳು ಅಧೀಸೂಚನೆ ಹೊರಡಿಸಿ ಅರ್ಜಿ ಅವ್ಹಾನಿಸಿದ್ದಾರೆ. ಆದರೆ, ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಸರ್ಕಾರದ ನಿಯಮಗಳು ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಮ್ಮ ಸ್ವ-ಹಿತಾಸಕ್ತಿ ಕಾಪಾಡಲು ಪೌರಕಾರ್ಮಿಕ ಅಲ್ಲದವರನ್ನು ಆಯ್ಕೆ ಮಾಡಿ, ತಾತ್ಕಾಲಿಕ ಖಾಯಂಮಾತಿ ಆಯ್ಕೆ ಪಟ್ಟಿ ಅಂತಿಮಗೊಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಇದರಿಂದ, ಅರ್ಹ ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ. ನೊಂದ ಮತ್ತು ಅರ್ಹ ದಿನಗೂಲಿ ಪೌರಕಾರ್ಮಿಕರು ಕಾಲಮಿತಿಯೊಳಗೆ ಜಿಲ್ಲಾಧಿಕಾರಿಗಳಿಗೆ ತಾತ್ಕಾಲಿಕ ನೇಮಕಾತಿ ಆಯ್ಕೆ ಪಟ್ಟಿಯ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಆದರೆ, ಆಕ್ಷೇಪಣೆಗಳ ಕುರಿತು ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಇದರಲ್ಲಿ, ಪಾಲಿಕೆ ಎಂಜಿನಿಯರ್ಗಳ ಪಾತ್ರವಿದ್ದು, ಅವರ ವಿರುದ್ಧ ಅಂದಿನ ಪಾಲಿಕೆಯ ಆಡಳಿತಾಧಿಕಾರಿ, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ವಿಚಾರಣೆ ನಡೆಸಿರುವ ಜಿಲ್ಲಾಧಿಕಾರಿಗಳು, ಪ್ರಕರಣವನ್ನು ಗಂಭೀರ ಕರ್ತವ್ಯಲೋಪವೆಂದು ಪರಿಗಣಿಸಿದ್ದಾರೆ. 3 ವರ್ಷದ ಒಳಗಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಲ್ಲದೆ, ಯಾವ ಹುದ್ದೆಗೆ ಆಯ್ಕೆ ಮಾಡಬೇಕೆಂದು ಅಧಿಸೂಚನೆ ಹೊರಡಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಆದರೂ, ಸದರಿ ಆಯ್ಕೆ ಪಟ್ಟಿಯಲ್ಲಿ ಕ್ರಿಮಿನಲ್ ಮೊಕದಮೆ ಹೊಂದಿರುವ, ಮರಣ ಹೊಂದಿದವರ ವ್ಯಕ್ತಿಗಳ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಬಂದಿರುವುದು ಕಂಡುಬಂದಿದೆ. ಅಂದಿನ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆಯ ಸಕ್ಷಮ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಜೋತಿಷ್ಠಾ, ಪಾಲಿಕೆಯ ಪರಿಸರ ಅಭಿಯಂತರ ಮುನಾಫ ಪಟೇಲ್ ಇತರರ ಮೂರು ಅಧಿಕಾರಿಗಳ ವಿರುದ್ಧ ಕಾನೂನು ಕೈಗೊಳ್ಳಲು ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹೀಗಾಗಿ, ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಪೌರ ಕಾರ್ಮಿಕರ ಬಾಕಿ ವೇತನವನ್ನು ಪಾವತಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಧರಣಿಯಲ್ಲಿ ಸೂರ್ಯಕಾಂತ ಜಿಡಗಾ, ಸೋಮಶೇಖರ ಬಂಗರಗಿ, ಭಾರತಭಾಯಿ ಎಸ್. ಹತ್ತರಕಿ, ಶಿವಶರಣಪ್ಪ ಜಿ. ಹೊಸಮನಿ, ರಾಣೋಜಿ ಎಸ್. ಓಮನಕರ್, ಜಗದೇವಿ ಗಂಡ ಬಾಬುರಾವ ಸೇರಿದಂತೆ ಹಲವರು ಇದ್ದರು.