- ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಹಿಂದೆ ಸರಿದಿದ್ದ ಮಹದೇವಪ್ಪ
- ಧ್ರುವನಾರಾಯಣ ಹಠಾತ್ ನಿಧನ ಬೆನ್ನಲ್ಲೇ ಗರಿಗೆದರಿದ್ದ ಟಿಕೆಟ್ ಗೊಂದಲ
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ದಿವಂಗತ ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಮಾಜಿ ಸಂಸದ ಧ್ರುವನಾರಾಯಣ ಅವರು ಹೃದಯಘಾತದಿಂದ ಮಾರ್ಚ್ 11ರಂದು ಹಠಾತ್ ನಿಧನರಾಗಿದ್ದರು. ಅದಾದ ಬಳಿಕ ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲ ಗರಿಗೆದರಿತ್ತು.
ಈ ಬಾರಿಯ ವಿಧಾನಸಭಾ ಚುನಾವಣೆಗೆ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಧ್ರುವನಾರಾಯಣ ಮತ್ತು ಡಾ ಎಚ್ ಸಿ ಮಹದೇವಪ್ಪ ಇಬ್ಬರು ಸಹ ಅರ್ಜಿ ಸಲ್ಲಿಸಿದ್ದರು. ಟಿಕೆಟ್ಗಾಗಿ ಇಬ್ಬರು ನಾಯಕರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಈ ಇಬ್ಬರು ನಾಯಕರು ಸಹ ಸ್ಪರ್ಧೆಯಿಂದ ಹಿಂದೆ ಸರಿಯುವ ಲಕ್ಷಣಗಳಿರಲಿಲ್ಲ.
ಆದರೆ, ಧ್ರುವನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ನಂಜನಗೂಡು ಕ್ಷೇತ್ರದಲ್ಲಿ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ಟಿಕೆಟ್ ನೀಡುವಂತೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ದರ್ಶನ್ ಸಹ ಕ್ಷೇತ್ರದ ಜನತೆಗೆ ಮತ್ತು ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳುವೆ ಎಂದಿದ್ದರು.
ಈ ನಡುವೆ ಟಿಕೆಟ್ ಜಟಾಪಟಿ ಮುಂದುವರೆಸದ ಎಚ್ ಸಿ ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದಲ್ಲಿ ಧ್ರುವನಾರಾಯಣ ಅವರ ಪುತ್ರನಿಗೆ ಟಿಕೆಟ್ ನೀಡುವಂತೆ ಹೇಳಿ ತಮ್ಮ ದೊಡ್ಡತನ ಮೆರೆದಿದ್ದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹ ದರ್ಶನ್ ಧ್ರುವನಾರಾಯಣ ಅವರ ಪರ ಕೆಲಸ ಮಾಡುವುದಾಗಿ ಘೋಷಿಸಿದ್ದರು. ನಿರೀಕ್ಷೆಯಂತೆಯೇ ದರ್ಶನ್ ಧ್ರುವನಾರಾಯಣ ಅವರಿಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ನಂಜನಗೂಡು ಕ್ಷೇತ್ರದಿಂದ ಹಿಂದೆ ಸರಿದ ಎಚ್ ಸಿ ಮಹದೇವಪ್ಪ ಅವರಿಗೆ ಎಸ್ ಸಿ ಮೀಸಲು ಕ್ಷೇತ್ರ ಟಿ ನರಸೀಪುರದಿಂದ ಟಿಕೆಟ್ ನೀಡಲಾಗಿದೆ.