ಬೆಳಗಾವಿ ನಗರದಲ್ಲಿ ನವಂಬರ್ 1ರಂದು ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ಕನ್ನಡ ಹಬ್ಬದ ಮೆರವಣಿಗೆಯಲ್ಲಿ ಐದು ಲಕ್ಷ ಜನ ಭಾಗಿಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಬೆಳಗಾವಿಯಲ್ಲಿಯೇ ಹೆಚ್ಚು ಸಂಭ್ರಮದಿಂದ ರಾಜ್ಯೋತ್ಸವ ಆಚರಿಸಲಾಗುತ್ತದೆ. ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಶುದ್ಧ ಕುಡಿಯುವ ನೀರು, ಮೊಬೈಲ್ ಟಾಯ್ಲೆಟ್ ಹಾಗೂ ಇತರ ಮೂಲಸೌಕರ್ಯ ಒದಗಿಸಲಾಗುವುದು ಎಂದರು.
ರಾಣಿ ಚೆನ್ನಮ್ಮ ವೃತ್ತದಲ್ಲಿ ವೀಕ್ಷಕರ ಗ್ಯಾಲರಿ ನಿರ್ಮಿಸಲಾಗಿದ್ದು, ಈ ಸಲ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು 77ರೂಪಕಗಳು ನೊಂದಾವಣೆಗೊಂಡಿವೆ. ಗಡಿಯಲ್ಲಿ ನಾಡು, ನುಡಿಯ ಬೆಳವಣಿಗೆಗೆ ಶ್ರಮಿಸಿದ ಕನ್ನಡ ಹೋರಾಟಗಾರರು, ಪತ್ರಕರ್ತರು ಸೇರಿದಂತೆ 25 ಸಾಧಕರನ್ನ ಸತ್ಕರಿಸಲಾಗುವುದು ಎಂದರು.
ನಗರದ ಕ್ರೀಡಾ ಗಣದಲ್ಲಿ ಬುಧವಾರ ಬೆಳಗ್ಗೆ 10:30 ಕ್ಕೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸುವರು. ಈ ಕಾರ್ಯಕ್ರಮದಲ್ಲಿ ʼಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,ʼ ʼಎಲ್ಲಾದರು ಇರು ಎಂತಾದರು ಇರು,ʼ ʼಒಂದೇ ಕರ್ನಾಟಕ ಒಂದೇ ಒಂದೇ ಕರ್ನಾಟಕವೊಂದೇ,ʼ ʼಹೊತ್ತಿತೋ ಹೊತ್ತಿತೋ ಕನ್ನಡದ ದೀಪ,ʼ ಹಾಗೂ ʼಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ,ʼ ಎಂಬ ಐದು ಗೀತೆಗಳನ್ನು ಹಾಡಿ ಕನ್ನಡಾಂಬೆಗೆ ನಮನ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ನವಂಬರ್ ಒಂದರಂದು ಸಂಜೆ 5:00 ಗಂಟೆಗೆ ಎಲ್ಲ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟ ಹಾರಿಸಬೇಕು. ಸಂಜೆ 7:00 ಗಂಟೆಗೆ ತಮ್ಮ ಮನೆ, ಕಚೇರಿ ಹಾಗೂ ಅಂಗಡಿಗಳ ಮುಂದೆ ಹಣತೆ ಹಚ್ಚಿ ಎಂದು ಮನವಿ ಮಾಡಿದರು.
ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಯ್ಯಪ್ಪ ಮಾತನಾಡಿ, ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೆರವಣಿಗೆ ಮಾರ್ಗ, ಆಯಕಟ್ಟಿನ ಸ್ಥಳಗಳಲ್ಲಿ 300 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಇತ್ತ, ಎಂಇಎಸ್ ನವಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ವಿರುದ್ಧ ಕರಾಳ ದಿನಾಚರಣೆಗೆ ನಡೆಸಲು ಮುಂದಾಗಿದೆ. ಅದಕ್ಕಾಗಿ, ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜೆ ದೇಸಾಯಿ, ಚಂದ್ರಕಾಂತ್ ಪಾಟೀಲ್, ಸಚಿವ ದೀಪಕ್ ಕೇಸರಕರ್ ಹಾಗೂ ಸಂಸದ ಧೈರ್ಯಶೀಲ ಮಾನೆ ಅವರಿಗೆ ಆಹ್ವಾನ ನೀಡಿದೆ. ಆದರೆ, ಕರಾಳ ದಿನಾಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ಇಲ್ಲ ಎಂದು ಹೇಳಿದೆ. ಮಾತ್ರವಲ್ಲದೆ, ಮಹರಾಷ್ಟ್ರದ ರಾಜಕೀಯ ನಾಯಕರಿಗೆ ಬೆಳಗಾವಿ ಪ್ರವೇಶಿಸದಂತೆ ನಿರ್ಬಂಧ ಹೇರಿದೆ.