- ಅಣ್ಣಾಮಲೈ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರದ ನೇತೃತ್ವ
- ತಮಿಳು ನಾಡಗೀತೆಯನ್ನು ಅರ್ಧಕ್ಕೆ ನಿಲ್ಲಿಸಿ ಕರ್ನಾಟಕ ನಾಡಗೀತೆ ಪ್ರಸಾರ
ತಮಿಳುನಾಡಿನ ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಅವರು ಈಗ ಕರ್ನಾಟಕದ ಚುನಾವಣಾ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆಯನ್ನು ಅರ್ಧಕ್ಕೆ ನಿಲ್ಲಿಸಿ ತಮಿಳಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ತಮಿಳು ನಾಡಗೀತೆಗೆ ಅವಮಾನಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಕ್ಷಮೆಯಾಚಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಅವರು ಶುಕ್ರವಾರ (ಏಪ್ರಿಲ್ 28) ಆಗ್ರಹಿಸಿದ್ದಾರೆ.
ಈ ಕುರಿತು ಕನಿಮೋಳಿ ಅವರು ಅಣ್ಣಾಮಲೈ ನಡೆಯನ್ನು ಟೀಕಿಸಿದ್ದಾರೆ. “ತಮಿಳ್ ತಾಯಿ ವಾಝ್ತು ಹೆಸರಿನ ತಮಿಳು ನಾಡಗೀತೆಯನ್ನು ತನ್ನದೇ ಪಕ್ಷದ ಸದಸ್ಯರು ಅವಮಾನ ಮಾಡುವುದನ್ನು ತಡೆಯಲಾಗದವರು ತಮಿಳುನಾಡಿನ ಜನರ ಬಗ್ಗೆ ಕಾಳಜಿ ತೆಗೆದುಕೊಳ್ಳುವರೇ?” ಎಂದು ಕುಟುಕಿದ್ದಾರೆ.
ಅಣ್ಣಾಮಲೈ ಅವರು ಕನಿಮೋಳಿ ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪ್ರತಿಪಕ್ಷದ ನಾಯಕರಾಗಿದ್ದಾಗಿನ ವಿಡಿಯೋ ತುಣುಕೊಂದನ್ನು ಅವರು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಆದರೆ ರಾಷ್ಟ್ರಗೀತೆಯನ್ನು ಪ್ರಸಾರ ಮಾಡದೇ ಇರುವುದನ್ನು ತೋರಿಸಿದೆ.
“ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕು ಎಂಬ ತಿಳುವಳಿಕೆ ಇಲ್ಲದ ನಾಯಕ ಇರುವ ಪಕ್ಷಕ್ಕೆ ಇದೆಲ್ಲ ಬೇಕೆ? ತಮಿಳು ನಾಡಗೀತೆಯಲ್ಲಿ ಕನ್ನಡದ ಬಗೆಗಿನ ಸಾಲನ್ನು ತೆಗೆದುಹಾಕಿ ರಾಜ್ಯ ವಿಭಜನೆಯನ್ನು ಬಿತ್ತಿದ ಇತಿಹಾಸ ನಿಮ್ಮದಲ್ಲವೇ?” ಎಂದು ಅಣಕವಾಡಿದ್ದಾರೆ.
“ಡಿಎಂಕೆಯ ಅಗ್ಗದ ರಾಜಕೀಯದಿಂದ ತಮಿಳು ಜನರನ್ನು ರಕ್ಷಿಸುವುದು ನಮ್ಮ ಏಕೈಕ ಗುರಿ” ಎಂದು ಅಣ್ಣಾಮಲೈ ಹೇಳಿದರು.
ಏನಿದು ಘಟನೆ?
ಅಣ್ಣಾಮಲೈ ಅವರ ನೇತೃತ್ವದಲ್ಲಿ ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಗುರುವಾರ (ಏಪ್ರಿಲ್ 27) ಮಧ್ಯಾಹ್ನ ಬಿಜೆಪಿಯಿಂದ ಆಯೋಜಿಸಿದ್ದ ತಮಿಳು ಬಾಂಧವರ ಸಮಾವೇಶದಲ್ಲಿ ತಮಿಳು ನಾಡಗೀತೆಯನ್ನು ಶಾಸಕ ಕೆ ಎಸ್ ಈಶ್ವರಪ್ಪ ಅರ್ಧಕ್ಕೆ ತಡೆದರು.
ಬಳಿಕ ಕರ್ನಾಟಕ ನಾಡಗೀತೆಯನ್ನು ಸಮಾವೇಶದಲ್ಲಿ ಹಾಡಲಾಯಿತು. ಅಣ್ಣಾಮಲೈ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯ ಉಸ್ತುವಾರಿ ಆಗಿದ್ದಾರೆ. ಅವರು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಎನ್ ಚನ್ನಬಸಪ್ಪ (ಚನ್ನಿ) ಪರ ಪ್ರಚಾರದಲ್ಲಿ ತೊಡಗಿದ್ದರು.
ಸಮಾವೇಶ ಆರಂಭವಾಗುತ್ತಿದ್ದಂತೆ ಸಂಘಟಕರು ತಮಿಳು ನಾಡಗೀತೆ ಆರಂಭಿಸುವಂತೆ ಸೂಚಿಸಿದರು. ಧ್ವನಿವರ್ಧಕದಲ್ಲಿ ತಮಿಳು ನಾಡಗೀತೆ ಆರಂಭವಾಗುತ್ತಿದ್ದಂತೆ ಆಸನದಿಂದ ಕೆ ಎಸ್ ಈಶ್ವರಪ್ಪ ವೇದಿಕೆಯತ್ತ ಧಾವಿಸಿ ನಾಡಗೀತೆ ನಿಲ್ಲಿಸುವಂತೆ ಸೂಚಿಸಿದರು. ಬಳಿಕ ಕರ್ನಾಟಕ ನಾಡಗೀತೆ ಹಾಕಲಾಯಿತು.
ಈ ಸುದ್ದಿ ಓದಿದ್ದೀರಾ? ಸಂಚಾರ ನಿಯಮ ಉಲ್ಲಂಘನೆ ಆರೋಪ; ಪ್ರಧಾನಿ ಮೋದಿ ವಿರುದ್ಧ ದೂರು ದಾಖಲು
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯು ಮೇ 10ರಂದು ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ.