ಮುತ್ಯಾಲಮ್ಮ ಜಾತ್ರೆಯ ಸಂಭ್ರಮದಲ್ಲಿ ಕುಟುಂಬದ ಸದಸ್ಯರ ಜೊತೆಗೆ ಕುಣಿದು ಕುಪ್ಪಳಿಸಿ ಖುಷಿಪಡುತ್ತಿದ್ದ ಬಾಲಕ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿ ಮಂಜುನಾಥ್ ಎಂಬುವವರ ಪುತ್ರ ಶ್ರೇಯಸ್(9) ಮೃತ ಬಾಲಕ. ಈತ ಮನೆಯವರೊಂದಿಗೆ ಮುತ್ಯಾಲಮ್ಮ ಜಾತ್ರೆಗೆ ಹೋಗಿದ್ದ.
ಜಾತ್ರೆಯಲ್ಲಿ ಹಾಕಿದ್ದ ಅಮ್ಯೂಸ್ಮೆಂಟ್ ಕ್ರೀಡೆಗಳಲ್ಲಿ ಭಾಗಿಯಾಗಿದ್ದ ಬಾಲಕ ಬಳಿಕ ಬೌನ್ಸಿ ಬಲೂನ್ನಲ್ಲಿ ಆಟವಾಡಲು ತೆರಳಿದ್ದ. ಇತರ ಮಕ್ಕಳಂತೆ ಆತನೂ ಕುಣಿಯುತ್ತಾ, ಜಿಗಿಯುತ್ತಾ ಆಟವಾಡುತ್ತಿದ್ದ. ನೋಡುನೋಡುತ್ತಿದ್ದಂತೆಯೇ ಆತ ಆಟವಾಡುವುದನ್ನು ನಿಲ್ಲಿಸಿ, ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ
ಬಾಲಕನ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಿಲ್ಲ. ಲೋ ಬಿಪಿಯಿಂದ ಹೃದಯಾಘಾತ ಸಂಭವಿಸಿರಬಹುದು ಎಂಬ ಸಂಶಯವಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.