ದೇಶದ ರಕ್ಷಣಾ ಕ್ಷೇತ್ರದ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಡಿಆರ್ಡಿಒ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಆರ್ಎಸ್ಎಸ್ನ ಸಕ್ರಿಯ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪಿಸಿದೆ.
ಹನಿಟ್ರ್ಯಾಪ್ಗೆ ಒಳಗಾಗಿ ಪಾಕ್ಗೆ ಮಾಹಿತಿ ಸೋರಿಕೆ ಮಾಡಿದ್ದ ಡಿಆರ್ಡಿಒ ವಿಜ್ಞಾನಿ ಪ್ರದೀಪ್ ಕುರುಲ್ಕರ್ನನ್ನು ಕಳೆದ ವಾರ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿತ್ತು. ಆರೋಪಿಯನ್ನು ಮೇ 15ರವರೆಗೆ ಎಟಿಎಸ್ ವಶಕ್ಕೆ ನೀಡುವ ಆದೇಶವನ್ನು ಪುಣೆ ವಿಶೇಷ ನ್ಯಾಯಾಲಯ ನೀಡಿತ್ತು.
ಪ್ರದೀಪ್ ಕುರುಲ್ಕರ್ ಆರ್ಎಸ್ಎಸ್ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರ ಜತೆಗೆ ಭಾಗಿಯಾಗಿರುವ ವಿಡಿಯೋಗಳನ್ನು ಕಾಂಗ್ರೆಸ್ ವಕ್ತಾರರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ಪಾಕಿಸ್ತಾನದ ಪರವಾಗಿ ಗೂಢಚರ್ಯೆ ಮಾಡಿರುವ ಪ್ರದೀಪ್, ಆರ್ಎಸ್ಎಸ್ನ ಕಟ್ಟಾ ಸ್ವಯಂ ಸೇವಕ ಎಂದಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ ಸರ್ಕಾರದ ಅಧಿಕಾರ ನಿರ್ಬಂಧಿತ; ಹಸ್ತಕ್ಷೇಪಕ್ಕೆ ಎಲ್ಜಿಗೆ ಅಧಿಕಾರವಿಲ್ಲ ಎಂದ ಸುಪ್ರೀಂ ಕೋರ್ಟ್
‘ಪ್ರದೀಪ್ ಕುರುಲ್ಕರ್ ತಾತ ಕೂಡ ಆರ್ಎಸ್ಎಸ್ನ ಕಾರ್ಯಕರ್ತರಾಗಿದ್ದರು. ಇವರ ತಂದೆ ಕೂಡ ಸಂಘದ ಸಕ್ರಿಯ ಸದಸ್ಯರಾಗಿದ್ದರು.ರಾಷ್ಟ್ರೀಯವಾದಿ ಎಂದು ಬಿಂಬಿಸಿಕೊಳ್ಳುತ್ತಿರುವ ಸಂಘಟನೆಯ ನಿಜವಾದ ಬಣ್ಣ ಬಯಲಾಗಿದೆ. ಆರ್ಎಸ್ಎಸ್ ಹಾಗೂ ಪ್ರದೀಪ್ಗೂ ಇರುವ ಸಂಬಂಧ ಏನು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ವಿವರಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ವ್ಯಾಟ್ಸಪ್ ಹಾಗೂ ವಿಡಿಯೋ ಕಾಲ್ಗಳ ಮೂಲಕ ಪಾಕಿಸ್ತಾನದ ಗೂಢಚಾರಿಗಳ ಜೊತೆ ಪ್ರದೀಪ್ ಸಂಪರ್ಕದಲ್ಲಿದ್ದರು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.