- ಆದಿಕಾಲದಿಂದಲೂ ದಾಸರ ಜಾತಿಗೆ ಸೇರಿದವರು ಪ್ರವರ್ಗ 1ರಲ್ಲಿ ಬರುತ್ತಾರೆ
- 1976ರಲ್ಲಿ ದಾಸರ ಎಂಬುದನ್ನು ಚೆನ್ನದಾಸರ ಎಂದು ತಿದ್ದುಪಡಿ ಮಾಡಿದ್ದಾರೆ
ಜಿಗಳೂರು ಗ್ರಾಮದ ‘ದಾಸರ’ ಎಂಬ ಜಾತಿಯವರಿಗೆ ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದರಿಂದ ನಿಜವಾದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಹನಮಂತ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.
ದಾಸರ ಸಮುದಾಯಕ್ಕೆ ಎಸ್ಸಿ ಜಾತಿ ಪ್ರಮಾಣ ನೀಡಿರುವುದನ್ನು ವಿರೋಧಿಸಿ ಗದಗ ಜಿಲ್ಲೆ ರೋಣ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಹನಮಂತ ಪೂಜಾರ ಮಾತನಾಡಿ, ಜಿಗಳೂರು ಗ್ರಾಮದಲ್ಲಿ ದಾಸರ ಕುಟುಂಬವಿದ್ದು, ಆದಿಕಾಲದಿಂದಲೂ ದಾಸರ ಜಾತಿಗೆ ಸೇರಿದವರು ಪ್ರವರ್ಗ 1 ರಲ್ಲಿ ಬರುತ್ತಾರೆ. ಅವರ ಶಾಲಾ ದಾಖಲಾತಿಯಲ್ಲಿ ‘ದಾಸರ’ ಎಂದು ಇರುವುದೇ ಇದಕ್ಕೆ ದಾಖಲೆ. 1976ರಲ್ಲಿ ದಾಸರ ಎನ್ನವುದನ್ನು ಬಿಟ್ಟು, ಚೆನ್ನದಾಸರ ಎಂದು ಶಾಲಾ ದಾಖಲಾತಿಯಲ್ಲಿ ತಿದ್ದುಪಡಿ ಮಾಡಿ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದು, ನಿಜವಾದ ಎಸ್ಸಿ ಜನಾಂಗದವರಿಗೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಕಾಶ ಹೊಸಳ್ಳಿ ಮಾನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ರಿಗೆ ಎರಡು ವರ್ಷಗಳ ಹಿಂದೆಯೇ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ತಕರಾರು ಅರ್ಜಿ ಕೊಟ್ಟರೂ ಪರಿಗಣಿಸದೇ ತಹಶೀಲ್ದಾರ್ರು ಬೇಜವಾಬ್ದಾರಿ ಮಾತುಗಳನ್ನಾಡಿ, ವಿಳಂಬ ಧೋರಣೆ ಹಾಗೂ ಕರ್ತವ್ಯ ಲೋಪ ಎಸಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮದ್ಯ ಸೇವಿಸಿ ಆಪರೇಷನ್ ವಾರ್ಡ್ನಲ್ಲಿ ಕುಸಿದು ಬಿದ್ದ ವೈದ್ಯ; ರೋಗಿಗಳ ಪರದಾಟ
ದಲಿತ ಮುಖಂಡ ವೀರಪ್ಪ ತೆಗ್ಗಿನಮನಿ ಮಾತನಾಡಿ, ಸರ್ಕಾರದ ಸುತ್ತೋಲೆಯ ಪ್ರಕಾರ ದಾಸರು ಪ್ರವರ್ಗ 1 ರಲ್ಲಿ ಬರುತ್ತಾರೆ. ಚೆನ್ನದಾಸರು ಎಸ್ಸಿ ಜಾತಿಗೆ ಸೇರುತ್ತಾರೆ. 2021ರಲ್ಲಿ ಕೊರ್ಟಿನಲ್ಲಿ ಅಂದಿನ ತಹಶಿಲ್ದಾರ್ ದಾಸರು ಎಸ್ಸಿ ಜಾತಿಯಲ್ಲಿ ಬರುವುದಿಲ್ಲ ಎಂದು ದಾಖಲೆಗಳನ್ನು ನೀಡಿದ್ದಾರೆ. ನಂತರ ಹೊಸದಾಗಿ ಬಂದ ತಹಶೀಲ್ದಾರ್ ವಾಣಿ ಉಂಕಿ ಅವರಿಗೆ ಈ ಕುರಿತು ಅರ್ಜಿ ಸಲ್ಲಿಸಿ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಂಜು ಬುರಡಿ, ಪ್ರಕಾಶ ಮಾದರ, ದುರಗಪ್ಪ ಮಾದರ, ಬಸವರಾಜ ಮಾದರ, ಶಿವಯೋಗಪ್ಪ ಮಾದರ ಹಾಗೂ ಜಿಗಳೂರು ಗ್ರಾಮದ ದಸಂಸ ಕಾರ್ಯಕರ್ತರು ಭಾಗವಹಿಸಿದ್ದರು.