ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಮೂರು ವಾರಗಳಷ್ಟೇ ಬಾಕಿ ಉಳಿದಿವೆ. ಎಲ್ಲ ಪ್ರಮುಖ ಪಕ್ಷಗಳು ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಒಂದೊಂದು ಪಟ್ಟಿ ಪ್ರಕಟವಾದಂತೆ ಬಂಡಾಯದ ಕಾವು ಏರುತ್ತಲೇ ಇದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಲ್ಲಿ ಪಕ್ಷ ತೊರೆದು ಮತ್ತೊಂದು ಪಕ್ಷ ಸೇರುವವರ ಸಂಖ್ಯೆ ಬೆಳೆಯುತ್ತಲೇ ಇದೆ. ಆದರೂ, ಪಕ್ಷಾಂತರ ಲಾಭವನ್ನು ಜೆಡಿಎಸ್ ಹೆಚ್ಚಾಗಿ ಪಡೆದುಕೊಂಡಿದೆ. ಇದೂವರೆಗೂ ರಾಜ್ಯದಲ್ಲಿ 24 ಮಂದಿ ಪ್ರಭಾವಿ ನಾಯಕರು ಮತ್ತು ಮುಖಂಡರು ಕೈ-ಕಮಲ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಸಿಟ್ಟಿಗೆದ್ದಿರುವ ಉಭಯ ಪಕ್ಷಗಳ ಮುಖಂಡರು ಪಕ್ಷಗಳನ್ನು ತೊರೆದು, ಜೆಡಿಎಸ್ ಸೇರಿದ್ದಾರೆ. ಇದೂವರೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವಾರು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಸಖ್ಯ ಬೆಳೆಸಿದ್ದಾರೆ. ಅವರೆಲ್ಲ ಸೇರ್ಪಡೆಯಿಂದ ಜೆಡಿಎಸ್ ಶಕ್ತಿ ಹೆಚ್ಚಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗಳಿಸಲು ನೆವಾಗಲಿದೆ ಎನ್ನಲಾಗಿದೆ.
ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಜೆಡಿಎಸ್ಗೆ ನೆಲೆ ಇರಲಿಲ್ಲ. ಇದೀಗ, ಅಲ್ಲಿನ ಸ್ಥಳೀಯ ನಾಯಕರು ಜೆಡಿಎಸ್ಗೆ ಸೇರ್ಪಡೆಯಾಗಿರುವುದರಿಂದ ಪಕ್ಷವು ತನ್ನ ಪ್ರಾಬಲ್ಯವನ್ನು ಬೆಳೆಸಿಕೊಳ್ಳಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಹಲವು ಹಾಲಿ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರು ಜೆಡಿಎಸ್ ಸೇರುವ ಸಾಧ್ಯತೆಗಳಿವೆ.
ಕಾಂಗ್ರೆಸ್-ಬಿಜೆಪಿ ತೊರೆದು ಜೆಡಿಎಸ್ ಸೇರಿದವರ ಪಟ್ಟಿ ಹೀಗಿದೆ:
ಬಿಜೆಪಿ ತೊರೆದು ತೆನೆ ಹೊತ್ತವರು
- ಶಹಾಪುರದ ಗುರುಪಾಟೀಲ್ ಶಿರವಾಳ್
- ಜೇವರ್ಗಿಯ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್
- ಬೀದರ್ನ ಸೂರ್ಯಕಾಂತ ನಾಗಮಾರಪಲ್ಲಿ
- ಕುಡಚಿಯ ಆನಂದ ಮಾಳಗ
- ರಾಯಬಾಗದ ಪ್ರದೀಪ ಮಾಳಗಿ
- ಯಾದಗಿರಿಯ ಎ.ಬಿ ಮಾಲಕರೆಡ್ಡಿ
- ಬಸವನ ಬಾಗೇವಾಡಿಯ ಅಪ್ಪುಗೌಡ ಪಾಟೀಲ್
- ಕೊಪ್ಪಳದ ಸಿ.ವಿ ಚಂದ್ರಶೇಖರ್
- ಅರಸೀಕೆರೆಯ ಎನ್.ಆರ್ ಸಂತೋಷ್
- ಅರಕಲಗೂಡಿನ ಎ ಮಂಜು
- ಮೂಡಿಗೆರೆಯ ಎಂ.ಪಿ ಕುಮಾರಸ್ವಾಮಿ
- ವರುಣಾ ಕ್ಷೇತ್ರದ ಭಾರತಿ ಶಂಕರ್
ಕಾಂಗ್ರೆಸ್ಗೆ ಕೈ ಕೊಟ್ಟು ತೆನೆ ಹೊತ್ತವರು
- ಅಥಣಿಯ ಶಶಿಕಾರ್ ಪಡಲಗಾ
- ಹಾನಗಲ್ನ ಮನೋಹರ ತಹಸೀಲ್ದಾರ್
- ಜಗಳೂರಿನ ಎಚ್.ಪಿ ರಾಜೇಶ್
- ಚಿತ್ರದುರ್ಗದ ರಘು ಆಚಾರ್
- ಹಳಿಯಾಳದ ಘೋಕ್ಲೃಕರ್
- ಬಾಗಲಕೋಟೆಯ ದೇವರಾಜ ಪಾಟೀಲ್
- ಚನ್ನಗಿರಿಯ ತೇಜಸ್ವಿ ಪಟೇಲ್
- ಮಾಯಕೊಂಡದ ಆನಂದಪ್ಪ
- ಶಿಕಾರಿಪುರದ ನಾಗರಾಜಗೌಡ
- ಕಂಪ್ಲಿಯ ರಾಜು ನಾಯಕ್
- ಕಾರವಾರದ ಚೈತ್ರಾ ಕೋಠಾರ್ಕರ್
- ಬೆಂಗಳೂರು ದಕ್ಷಿಣ ಕ್ಷೇತ್ರದ ರಾಜಗೋಪಾಲರೆಡ್ಡಿ