ಬೆಂಗಳೂರು ಮತ್ತು ತಮಿಳುನಾಡಿನ ಗಡಿಭಾಗ ಹೊಸೂರಿನ ಬಳಿ ಸುಮಾರು 80ಕ್ಕೂ ಹೆಚ್ಚು ಕಾಡಾನೆಗಳಿದ್ದ ಹಿಂಡುಗಳು ಕಾಣಿಸಿಕೊಂಡಿದೆ. ಹೊಸೂರಿನ ಶಾನಮಾನು ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಿಂಡು ಅಡ್ಡಾಡುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸೂರು ಪ್ರದೇಶದ ಶಾನಮಾವು, ಬಿರ್ಜೆಪೆಲ್ಲಿ, ರಾಮಾಪುರ, ಬೂದುರು, ಹಳಿಯಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳು ಓಡಾಡುತ್ತಿದ್ದು, ರೈತರಲ್ಲಿ ಬೆಳೆ ನಾಶವಾಗುವ ಭಯ ಆವರಿಸಿದೆ. ಆನೆಗಳನ್ನು ಮುತ್ಯಾಮಡುವು ಬಳಿ ಅಡ್ಡಗಟ್ಟಿ, ಕಾಡಿಗೆ ಹಿಮ್ಮೆಟ್ಟಲು ಅರಣ್ಯಾಧಿಕಾರಿಗಳು ಪಟಾಕಿ ಸಿಡಿದ್ದಾರೆ. ಆದರೂ, ಆನೆಗಳು ಇನ್ನೂ ಗ್ರಾಮೀಣ ಪ್ರದೇಶದಲ್ಲಿಯೇ ಓಡಾಡುತ್ತಿವೆ.
ಆನೆಗಳು ಮೂರು ಹಿಂಡುಗಳಾಗಿ ಓಡಾಡುತ್ತಿವೆ ಎಂದು ಹೇಳಲಾಗಿದೆ. ಆನೆಗಳ ಗ್ರಾಮಗಳಿಗೆ ನುಗ್ಗದಂತೆ ತಡೆಯಲು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಯಾರೂ ಕೂಡ ಗ್ರಾಮಗಳಿಂದ ಹೊರಭಾಗಕ್ಕೆ ಹೋಗಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.