- ಅಮುಲ್ ವಿರುದ್ಧ ಅಭಿಯಾನ ಆರಂಭಿಸಿದ ಕರವೇ
- ʼಕನ್ನಡಿಗರ ಹೆಮ್ಮೆಯ ಸಂಸ್ಥೆ ನಂದಿನಿಯನ್ನು ನುಂಗುತ್ತಿದ್ದಾರೆʼ
ಕನ್ನಡಿಗರು ಕಷ್ಟಪಟ್ಟು ಕಟ್ಟಿ ಬೆಳೆಸಿದ ಸಂಸ್ಥೆ ಕೆಎಂಎಫ್ (ನಂದಿನಿ). ಈ ಸಂಸ್ಥೆಯನ್ನು ನಾಶಪಡಿಸಿ ಗುಜರಾತ್ನ ಅಮುಲ್ ಸಂಸ್ಥೆಯನ್ನು ಕರ್ನಾಟಕದ ಒಳಗೆ ಅಕ್ರಮವಾಗಿ ತರುತ್ತಿರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟವನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿ ನೆರೇಂದ್ರ ಮೋದಿ ಅವರಿಗೆ ಕರವೇ ಕಾರ್ಯಕರ್ತರು ಹಕ್ಕೊತ್ತಾಯ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, “ಅಮುಲ್ ಮತ್ತು ನಂದಿನಿಯನ್ನು ವಿಲೀನಗೊಳಿಸುವುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಅನಂತರ ಅಮುಲ್ ಸಂಸ್ಥೆ ತನ್ನ ಹಾಲು, ಮೊಸರನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹೆಲಿಪ್ಯಾಡ್ ಬಳಿ ಆಕಸ್ಮಿಕ ಬೆಂಕಿ : ಸಿಎಂಗೆ ಎದುರಾದ ಅಗ್ನಿ ಆತಂಕ
“ಒಂದು ವೇಳೆ ಅಮೂಲ್ ತೆಕ್ಕೆಗೆ ನಂದಿನಿ ಹೋದಲ್ಲಿ, ಕರ್ನಾಟಕದ ಲಕ್ಷಾಂತರ ರೈತರು ಬೀದಿಪಾಲಾಗುತ್ತಾರೆ. ಕನ್ನಡಿಗರು ಕಟ್ಟಿದ ಬ್ಯಾಂಕ್ಗಳನ್ನು ಕಬಳಿಸಿದವರು, ಈಗ ಕನ್ನಡಿಗರ ಹೆಮ್ಮೆಯ ಸಂಸ್ಥೆ ನಂದಿನಿಯನ್ನು ನುಂಗುತ್ತಿದ್ದಾರೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ” ಎಂದು ಅಸಮದಾನ ವ್ಯಕ್ತಪಡಿಸಿದರು.
“ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರ ನೇತೃತ್ವದಲ್ಲಿ ಈಗಾಗಲೇ ಅಮುಲ್ ವಿರುದ್ಧ ಚಳುವಳಿ ಆರಂಭಿಸಿದ್ದೇವೆ. ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಅಮುಲ್ ಹಾಲು, ಮೊಸರು ವ್ಯಾಪಾರ ನಡೆಸಲು ಮುಂದಾದರೆ ಅಂಥ ಸಂಸ್ಥೆಗಳ ವಿರುದ್ಧ ಕರವೇ ಚಳುವಳಿ ರೂಪಿಸಲಿದೆ. ಆಗುವ ಅನಾಹುತಗಳಿಗೆ ಆ ಸಂಸ್ಥೆಗಳೇ ಜವಾಬ್ದಾರಿ ಹೊರಬೇಕು” ಎಂದು ಕರವೇ ಎಚ್ಚರಿಕೆ ನೀಡಿದೆ.
ಭಾಗ್ಯ ಬೇಟಗೇರಿ, ಮಲ್ಲು ಕಟ್ಟಿಮನಿ, ಬಸವರಾಜ ಅಂಬಿಗೇರ, ಸಲಿಂ ಜಮಾದಾರ, ರಾಹುಲ್ ಶೆಟ್ಟರ್, ಗಣೇಶ ನಾಯಕ್ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.