ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ದೇಶಾದ್ಯಂತ ಭಾರೀ ವಿರೋಧ-ಚರ್ಚೆಗೆ ಗುರಿಯಾಗಿದೆ. ಇದೇ ವೇಳೆ, ಕೇಜ್ರಿವಾಲ್ ಹೆಸರಿನಲ್ಲಿ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ಪೋಸ್ಟ್ನಲ್ಲಿ, ‘ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೂರ್ಯಪ್ರಕಾಶ್ ವಿ ರಾಜು ಅವರನ್ನು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸುವಲ್ಲಿ ಸೂರ್ಯಪ್ರಕಾಶ್ ವಿಫಲರಾಗಿದ್ದಾರೆ’ ಎಂದು ಹೇಳಲಾಗುತ್ತಿದೆ.
ನ್ಯಾಯಾಲಯದ ವಿಚಾರಣೆಯ ಪ್ರಶ್ನೋತ್ತರಗಳೆಂದು ಬರೆಯಲಾದ ಪೋಸ್ಟ್ನಲ್ಲಿ, “ಕೇಜ್ರಿವಾಲ್: ನನ್ನನ್ನು ಏಕೆ ಬಂಧಿಸಿದ್ದೀರಿ? ಎಎಸ್ಜಿ ರಾಜು: ನಿಮ್ಮ ವಿರುದ್ಧ ನಮ್ಮ ಬಳಿ ಆರೋಪದ ಹೇಳಿಕೆಯಿದೆ. ಕೇಜ್ರಿವಾಲ್: ಹಾಗಾದರೆ ನಾನು ಮೋದಿ ಮತ್ತು ಅಮಿತ್ ಶಾಗೆ 100 ಕೋಟಿ ರೂ. ನೀಡಿದ್ದೇನೆ ಎಂದು ಹೇಳಿದರೆ, ನೀವು ನನ್ನ ಹೇಳಿಕೆ ಆಧರಿಸಿ ಅವರನ್ನು ಬಂಧಿಸುತ್ತೀರಾ?; ನ್ಯಾಯಾಧೀಶರು ಮತ್ತು ಎಎಸ್ಜಿ ಇಬ್ಬರೂ ಸುಮ್ಮನಾದರು” ಎಂದು ಬರೆಯಲಾಗಿದೆ.
ಈ ಪೋಸ್ಟ್ಅನ್ನು ಸತ್ಯವೆಂದು ನಂಬಿರುವ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮತ್ತು ಪೋಸ್ಟ್ನ ‘ಸ್ಕ್ರೀನ್ ಶಾಟ್‘ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಪೋಸ್ಟ್ನಲ್ಲಿ ಹೇಳಲಾಗಿರುವುದು ಸತ್ಯವೇ ಪರಿಶೀಲಿಸೋಣ.
ಸತ್ಯವೇನು?
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ 100 ಕೋಟಿ ರೂ. ನೀಡಿದರೆ ಅವರನ್ನು ಬಂಧಿಸುತ್ತೀರಾ ಎಂದು ಕೇಳಿದ್ದಾರೆ ಎಂಬುದು ನಕಲಿ ಪೋಸ್ಟ್ ಎಂದು ‘ಬೂಮ್’ ಫ್ಯಾಕ್ಟ್ಚೆಕ್ ವೆಬ್ಸೈಟ್ ಕಂಡುಹಿಡಿದಿದೆ.
ನ್ಯಾಯಾಲಯದ ವಿಚಾರಣೆ ವೇಳೆಯ ಪ್ರಶ್ನೋತ್ತರಗಳಿಗೆ ಸಂಬಂಧಿಸಿದಂತೆ ಕೀವರ್ಡ್ ಮೂಲಕ ಹುಡುಕಿದಾಗ, ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ಆ ಬಗ್ಗೆ ವರದಿ ಮಾಡಿಲ್ಲ.
ಇನ್ನು, ಕೇಜ್ರಿವಾಲ್ ಬಂಧನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿನ ಕಲಾಪಗಳ ಬಗ್ಗೆ ವರದಿ ಮಾಡುತ್ತಿರುವ ‘ನ್ಯೂಸ್ಲ್ಯಾಂಡ್ರಿ’ಯ ವರದಿಗಾರ್ತಿ ತನಿಷ್ಕಾ ಸೋಧಿ ಕೂಡ ವೈರಲ್ ಆಗುತ್ತಿರುವ ಪೋಸ್ಟ್ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.
“ನ್ಯಾಯಾಲಯದ ಒಳಗೆ ಹಲವಾರು ವರದಿಗಾರರು ಇದ್ದರು. ನಾವು ವಿಚಾರಣೆಯ ಸಂದರ್ಭವನ್ನು ಆಲಿಸಿದ್ದೇವೆ. ಅಲ್ಲಿ, ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಉಲ್ಲೇಖಿಸಲಾದ ಸಂಭಾಷಣೆ ನಡೆದಿಲ್ಲ. ವೈರಲ್ ಪೋಸ್ಟ್ಅನ್ನು ಯಾರೋ ತಮಾಷೆಗಾಗಿ ಸೃಷ್ಟಿಸಿದ್ದಾರೆ. ಅದು ನಕಲಿ ಪೋಸ್ಟ್” ಎಂದು ಸೋಧಿ ಸ್ಪಷ್ಟವಾಗಿ ವಿವರಿಸಿದ್ದಾರೆ.
ಅಲ್ಲದೆ, ಪಿಟಿಐ ವರದಿಗಾರ ಅವೈಸ್ ಉಸ್ಮಾನಿ ಕೂಡ ವೈರಲ್ ಪೋಸ್ಟ್ ನಕಲಿ ಎಂದು ಹೇಳಿದ್ದಾರೆ. ವಿಚಾರಣೆ ವೇಳೆ ವೈರಲ್ಪೋಸ್ಟ್ನಲ್ಲಿ ಉಲ್ಲೇಖಿಸಲಾದ ಸಂಭಾಷಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
I was in court and this never happened https://t.co/O6zescvcSE
— Thyagarajan Narendran (@thyagarajan_law) March 28, 2024
39 ನಿಮಿಷಗಳ ಕಾಲ ನಡೆದ ವಿಚಾರಣೆ ಸಂಪೂರ್ಣ ಮಾಹಿತಿಯನ್ನು ‘ನ್ಯೂಸ್ಲ್ಯಾಂಡ್ರಿ’ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗಾಗಿ ಆ ವರದಿಯನ್ನು ಓದಬಹುದು.
ಪ್ರಕರಣವೇನು?
ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು 2024ರ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಮಾರ್ಚ್ 28 ರಂದು, ಕೇಜ್ರಿವಾಲ್ ಅವರನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೋರ್ಟ್ನಲ್ಲಿ ಮಾತನಾಡಿದ್ದ ಕೇಜ್ರಿವಾಲ್, “ತಮ್ಮ ಬಂಧನದ ಹಿಂದೆ ‘ರಾಜಕೀಯ ಪಿತೂರಿ’ ಇದೆ. ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗದೆ ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲು ಇಡಿ ಬಳಿ, ಸಾಕಷ್ಟು ಕಾರಣಗಳಿವೆಯೇ” ಎಂದು ಪ್ರಶ್ನಿಸಿದ್ದರು. ಕೇಜ್ರಿವಾಲ್ ಅವರನ್ನು ಏಪ್ರಿಲ್ 1ರವರೆಗೆ ಇಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.