ಪೇದೆ ಹುದ್ದೆಗಳ ಭರ್ತಿಗಾಗಿ ದೇಹ ದಾರ್ಢ್ಯತೆ ಮತ್ತು ದೇಹ ಸಹಿಷ್ಣುತೆ ಪರೀಕ್ಷೆ ವೇಳೆ ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದುರ್ನಡತೆ ತೋರಿದ ಹಿನ್ನಲೆ ಪೊಲೀಸ್ ಇಲಾಖೆಯ ಇಬ್ಬರು ಪೇದೆಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಬೀದರ್ ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ನಾಗರೀಕ ಪೊಲೀಸ್ ಪೇದೆ ಹುದ್ದೆಗಳ ಭರ್ತಿಗಾಗಿ ಲಿಖಿತ ಪರೀಕ್ಷೆ ಪಾಸಾದ ಅಭ್ಯರ್ಥಿಗಳಿಗೆ 2024ರ ಮಾರ್ಚ್ 1ರಂದು ಬೀದರ್ ಜಿಲ್ಲಾ ಪೊಲೀಸ್ ಕಚೇರಿಯ ಕವಾಯತು ಮೈದಾನದಲ್ಲಿ ದೇಹ ದಾರ್ಢ್ಯತೆ ಮತ್ತು ದೇಹ ಸಹಿಷ್ಣುತೆ (ಪಿ.ಎಸ್.ಟಿ. & ಪಿ.ಇ.ಟಿ.) ಪರೀಕ್ಷೆಗಳನ್ನು ನಡೆಸಲಾಯಿತು.
ಸದರಿ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಪೇದೆ ಐವಾನ್ 1600 ಮೀ. ಓಟವನ್ನು 6 ನಿಮಿಷ 30 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಇವರ ಓಟದ ಸಮಯ ನಿರೀಕ್ಷೆಗಾಗಿ ಜನವಾಡ ಪೊಲೀಸ್ ಠಾಣೆಯ ಸಿಪಿಸಿ ಶಫಿಕ್ ಅವರನ್ನು ನೇಮಿಸಲಾಗಿತ್ತು.
ಪಿ.ಇ.ಟಿ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿ ಐವಾನ್ 1600 ಮೀಟರ್ ಓಟ ಪೂರ್ಣಗೊಳಿಸಲು ಕವಾಯತು ಮೈದಾನಕ್ಕೆ ನಾಲ್ಕು ಸುತ್ತು ಹಾಕಿ ಪೂರ್ಣಗೊಳಿಸಬೇಕಾಗಿರುತ್ತದೆ. ಆದರೆ, ಅಭ್ಯರ್ಥಿ ಐವಾನ್ ಕವಾಯತು ಮೈದಾನದ ಸುತ್ತಲು ಕೇವಲ ಮೂರು ಸುತ್ತುಗಳು ಮಾತ್ರ ಪೂರ್ಣಗೊಳಿಸಿ ನಾಲ್ಕು ಸುತ್ತುಗಳನ್ನು ಪೂರ್ಣಗೊಳಿಸಿದ್ದೇನೆ ಎಂದು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದುರ್ನಡತೆ ತೋರಿದ್ದಾನೆ.
ಅಭ್ಯರ್ಥಿಯ ಓಟದ ಸಮಯ ನಿರೀಕ್ಷೆಗಾಗಿ ನಿಗದಿ ಪಡಿಸಿದ ಪೇದೆ ಶಫಿಕ್ ಅವರು ಐವಾನ್ ಅಭ್ಯರ್ಥಿಯು 1600 ಮೀಟರ್ ಓಟ ಪೂರ್ಣಗೊಳಿಸಿದ್ದಾನೆ ಎಂದು ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಕರ್ತವ್ಯ ನಿರ್ವಹಣೆಯಲ್ಲಿ ದುರ್ನಡತೆ, ಬೇಜವಾಬ್ದಾರಿತನ ತೋರಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ʼಹಸಿವು ಮುಕ್ತ ಕರ್ನಾಟಕʼಕ್ಕೆ ಬೇಕಿದೆ ಅಧಿಕಾರಿಗಳ ಬದ್ಧತೆ
ಡಿಎಸ್ಪಿ ಡಿಎಆರ್ ಅವರು ಸಲ್ಲಿಸಿರುವ ವರದಿ ಹಾಗೂ ಸಿಸಿಟಿವಿ ಮತ್ತು ವಿಡಿಯೋಗ್ರಾಫಿ ಮೂಲಕ ಮಾಡಿರುವ ರಿಕಾರ್ಡಿಂಗ್ ಪರಿಶೀಲಿಸಿದಾಗ ಇಲಾಖೆಯಲ್ಲಿರುವ ಇಬ್ಬರು ಪೊಲೀಸ್ ಸಿಬ್ಬಂದಿ ಐವಾನ್ ಮತ್ತು ಶಫಿಕ್ ಅವರು ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಇಲಾಖೆಯಲ್ಲಿ ದುರ್ನಡತೆ ತೋರಿಸಿದ್ದಕ್ಕೆ ಇವರಿಗೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.