ಫೆಬ್ರವರಿ 10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತಪರ ಬಜೆಟ್ ರೂಪಿಸಲು ಹಕ್ಕೊತ್ತಾಯ ಮಂಡನೆ ಮಾಡಲಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಸಾರಿ ಬರಗಾಲ ಎದುರಾದಾಗ ಪರಿಹಾರ ನೀಡುತ್ತವೆ. ಇದರಿಂದ ರೈತ ಸಮಸ್ಯೆಗಳಿಗೆ ಪರಿಹಾರ ಸಿಗುವದಿಲ್ಲ. ಬರ ನಿವಾರಣೆಗೆ ಶಾಸ್ವತವಾಗಿ ಯೋಜನೆಗಳನ್ನು ರೂಪಿಸಬೇಕು. ಸಣ್ಣ ನೀರಾವರಿ ಯೋಜನೆಗಳು ಬರ ಪರಿಹಾರಕ್ಕೆ ಹೆಚ್ಚು ಅನುಕೂಲವಾಗಲಿದೆ” ಎಂದರು.
“ರಾಜ್ಯ ಸರ್ಕಾರವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಮತ್ತು ಬರ ಪರಿಹಾರಕ್ಕೆ ಯೋಜನೆಗಳನ್ನು ರೂಪಿಸಬೇಕು. ಬೇಸಾಯ ಪದ್ದತಿಯಲ್ಲಿ ಬದಲಾವಣೆ ಮಾಡಬೇಕು. ರೈತರಿಗೆ ಆದಾಯ ಭದ್ರತೆಯನ್ನು ನೀಡಬೇಕು. ರಾಜ್ಯದ ಜನತೆಗೆ ನೀಡುತ್ತಿರುವ ಅಕ್ಕಿಯ ಜೊತೆಗೆ ರಾಗಿ, ಜೋಳ, ಎಣ್ಣೆ, ಬೇಳೆಕಾಳು ಸಹ ನೀಡಬೇಕು. ಮುಖ್ಯವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ಪರ ಬಜೆಟ್ ಮಂಡನೆ ಮಾಡಬೇಕು. ಇಂತಹ ಅನೇಕ ವಿಷಯಗಳನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ” ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಾಮರಸ ಮಾಲಿ ಪಾಟಿಲ್, ಬಸವರಾಜ ಮೋಕಾಶಿ, ಶಿವನಗೌಡ ಪಾಟಿಲ, ಗಣಾಚಾರಿ,
ಬಾಳಪ್ಪ ಪಾಟಿಲ ಹಾಗೂ ಹಲವು ರೈತ ಮುಖಂಡರು ಇದ್ದರು.