ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಸ್ಪಿ) ಕಾನೂನು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರೈತರು ದೇಶದಾದ್ಯಂತ ಇಂದು ರೈಲು ತಡೆ ಪ್ರಾರಂಭಿಸಿದ್ದು, ಪಂಜಾಬ್ನ 22 ಜಿಲ್ಲೆಗಳ ರೈಲು ನಿಲ್ದಾಣಗಳಲ್ಲಿ ಪ್ರಯಾಣ ವ್ಯತ್ಯಯವಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೇಶದಾದ್ಯಂತ ಈ ರೈಲು ತಡೆ ಕರೆಯನ್ನು ನೀಡಿದ್ದು, ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೈಲು ತಡೆ ನಡೆಸಲಾಗುತ್ತಿದೆ. ಪ್ರಮುಖವಾಗಿ ರೈತರು ಫಿರೋಜಾಬಾದ್, ಅಮೃತಸರ, ರೂಪನಗರ ಸೇರಿದಂತೆ ಪಂಜಾಬ್ನ ಹಲವು ಪ್ರದೇಶದಲ್ಲಿ ರೈಲು ತಡೆ ನಡೆಸಲಿದ್ದಾರೆ ಎಂದು ಕೆಎಂಎಂ ಮುಖಂಡ ಸರ್ವನ್ ಸಿಂಗ್ ಪಂಡೆರ್ ಹೇಳಿದ್ದಾರೆ.
ಭಾರ್ತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಣ) , ಭಾರ್ತಿ ಕಿಸಾನ್ ಯೂನಿಯನ್ ಮತ್ತು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿದ್ದು ಈ ಸಂಘಟನೆಗಳು ರೈಲು ತಡೆ ನಡೆಸುತ್ತಿದೆ. ಇನ್ನು ಎಸ್ಕೆಎಂ ಕಿಸಾನ್ ಮಹಾಪಂಚಾಯತ್ ಅನ್ನು ದೆಹಲಿಯಲ್ಲಿ ನಡೆಸುವ ಘೋಷಣೆ ಮಾಡಿದೆ.
“ಕಿಸಾನ್ ಮಹಾಪಂಚಾಯತ್ನಲ್ಲಿ 400ಕ್ಕೂ ಅಧಿಕ ರೈತ ಸಂಘಟನೆಗಳು ಭಾಗಿಯಾಗಲಿದೆ” ಎಂದು ಎಸ್ಕೆಎಂ ತಿಳಿಸಿದೆ. ಇನ್ನು ಪಂಜಾಬ್ನಿಂದ ದೆಹಲಿಯತ್ತ ಸಾಗುತ್ತಿರುವ ರೈತರುಗಳು ಶಂಭು ಮತ್ತು ಖಾನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಫೆಬ್ರವರಿ 13ರಂದು ಈ ರೈತರನ್ನು ಪಂಜಾಬ್-ಹರಿಯಾಣ ಗಡಿಯಲ್ಲಿ ತಡೆಯಲಾಗಿದ್ದು, ರೈತರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿದೆ. ರೈತರು ಪಡಿತರ ತುಂಬಿದ ಟ್ರಾಲಿಯೊಂದಿಗೆ ತಮ್ಮ ಮೆರವಣಿಗೆ ಪ್ರಾರಂಭಿಸಿದ್ದು, “ಈ ರೇಷನ್ ತಿಂಗಳುಗಟ್ಟಲೆ ಉಳಿಯುತ್ತದೆ, ನಾವು ನಮ್ಮ ಬೇಡಿಕೆ ಈಡೇರಿಸುವವರೆಗೂ ಹಿಂತಿರುಗುವುದಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಈ ನಡುವೆ ಪೊಲೀಸರು ರೈತರ ವಾಹನಗಳು ದೆಹಲಿಗೆ ಪ್ರವೇಶಿಸದಂತೆ ರಸ್ತೆಗಳಲ್ಲಿ ಮೊಳೆಗಳು ಮತ್ತು ಕಾಂಕ್ರೀಟ್ ಬ್ಲಾಕ್ಗಳನ್ನು ಹಾಕಿದ್ದಾರೆ ಎಂದು ವರದಿಯಾಗಿದೆ. ಇನ್ನು ಕಳೆದ ಬುಧವಾರ ರೈತರುಗಳು ದೆಹಲಿಗೆ ತಮ್ಮ ತಮ್ಮ ರಾಜ್ಯದಿಂದ ಆಗಮಿಸುವಂತೆ ರೈತ ಸಂಘಟನೆಗಳು ಕರೆ ನೀಡಿದೆ.