ಭೀಕರ ಬರಗಾಲಕ್ಕೆ ತುತ್ತಾದ ರಾಜ್ಯದ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಸತತವಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕಿದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಕುರಿತು ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.
“ರಾಜ್ಯದ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು ಸುಸ್ತಿ ಆಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಅಸಲು ಫೆ.28ರ ಒಳಗಾಗಿ ಪಾವತಿಸಿದಲ್ಲಿ ಅದರ ಮೇಲಿನ ಬಡ್ಡಿ ಮನ್ನಾ ಮಾಡಲು ಘೋಷಿಸಿದ ರಾಜ್ಯ ಸರ್ಕಾರ ಯಾವ ಮಾನದಂಡ ಆಧರಿಸಿದೆ” ಎಂದು ಪ್ರಶ್ನಿಸಿದರು.
“ಮೊದಲೇ ಜಿಲ್ಲೆಯ ರೈತರು ಬರಗಾಲದಿಂದ ತತ್ತರಿಸಿದ್ದಾರೆ.ಈ ಮಧ್ಯೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಹಣ ಸಹಿತ ಇನ್ನೂ ಕೊಟ್ಟಿಲ್ಲ. ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ರೈತರಿಗೆ 3-4 ತಿಂಗಳಾದರೂ ಕಬ್ಬಿನ ಬಿಲ್ ಪಾವತಿಸಿಲ್ಲ. ಇಂತಹ ಸಂಕಷ್ಟ ಎದುರಿಸುತ್ತಿರುವ ರೈತರು ಫೆ.28 ರ ಒಳಗಾಗಿ ಸಾಲದ ಅಸಲು ಪಾವತಿಸಲು ಹೇಗೆ ಸಾಧ್ಯವಿದೆ. ಸರ್ಕಾರಕ್ಕೆ ರೈತರ ಸಾಲದ ಬಡ್ಡಿ ಮನ್ನಾ ಮಾಡುವ ಉದ್ದೇಶವಿದ್ದರೆ ಕೂಡಲೇ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಬಿಲ್ ಕೊಡಿಸಬೇಕು” ಎಂದು ಒತ್ತಾಯಿಸಿದರು.
“ಕಾರ್ಖಾನೆಗಳು ಕಬ್ಬು ಪುರೈಸಿದ ರೈತರಿಗೆ 15 ದಿನಗಳಲ್ಲಿ ಹಣ ಪಾವತಿಸುವ ನಿಯಮವಿದೆ. ಇಲ್ಲದಿದ್ದರೆ ಶೇ.14% ಬಡ್ಡಿ ಸಹಿತ ಹಣ ರೈತರಿಗೆ ನೀಡಬೇಕೆಂಬ ನಿಯಮವಿದೆ. ಆದರೆ ರೈತರು ನಿಗದಿತ ಸಮಯಕ್ಕೆ ಬ್ಯಾಂಕಿಗೆ ಹಣ ಕಟ್ಟದಿದ್ದರೆ ಚಕ್ರ ಬಡ್ಡಿ ಸಹಿತ ವಸೂಲಿ ಮಾಡುವ ಸರ್ಕಾರಕ್ಕೆ ರೈತರಿಗೆ ಬಡ್ಡಿ ಸಹಿತ ಹಣ ಪಾವತಿಸಲು ಆಗುವುದಿಲ್ಲ” ಎಂದರು.
“ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ತೀವ್ರ ಮಳೆ-ಬೆಳೆ ಕೊರತೆಯಿಂದ ಈ ವರ್ಷ ಬರಗಾಲ ಆವರಿಸಿದೆ. ರೈತರು ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಜಿಲ್ಲೆಯ ಎಲ್ಲ ಶಾಸಕರು, ಮಂತ್ರಿಗಳು ಪಕ್ಷಾತೀತವಾಗಿ ಚರ್ಚಿಸಿ ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಶಾಸಕ, ಸಚಿವರ ಮುನೆ ಎದುರು ಧರಣಿ ನಡೆಸಿ ಘೇರಾವ್ ಹಾಕಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಂವೇದನಶೀಲರು ವಚನ ಪರಂಪರೆಯ ಮುಂದುವರಿಕೆಗೆ ಶ್ರಮಿಸಬೇಕು : ವಿಕ್ರಮ ವಿಸಾಜಿ
ಈ ಸಂದರ್ಭದಲ್ಲಿ ರೈತ ಸಂಘದ ಮಹಿಳಾ ಘಟಕ ಜಿಲ್ಲಾಧ್ಯಕ್ಷ ಶಾಂತಮ್ಮಾ ಮೂಲಗೆ, ಬೀದರ್ ತಾಲೂಕಾಧ್ಯಕ್ಷ ಬಸವರಾಜ ಅಷ್ಟೂರ್, ಬಸವಕಲ್ಯಾಣ ತಾಲೂಕಾಧ್ಯಕ್ಷ ರುದ್ರಯ್ಯಾ ಸ್ವಾಮಿ, ವಿಠ್ಠಲ ರೆಡ್ಡಿ ಸೇರಿದಂತೆ ಪ್ರಮುಖರಾದ ವಿಠ್ಠಲರಾವ್ ಮೇತ್ರೆ, ಶಿವಕಾಂತ ಖಂಡೆ, ವಿಜಯಕುಮಾರ್ ಬಾವಗೆ ಸೇರಿದಂತೆ ಇತರರಿದ್ದರು.