ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಸಂಚರಿಸುವ ಶಕ್ತಿ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ. ಈ ಯೋಜನೆ ದುಡಿಯುವ ಮಹಿಳೆಯರಿಗೆ ವರವಾಗಿ ಪರಿಣಮಿಸಿದ್ದು, ನೆಚ್ಚಿನ ಸ್ಥಳಗಳಿಗೆ ಪ್ರಯಾಣ ಬೆಳೆಸುವ ಬಯಕೆ ಹೊಂದಿದ್ದವರಿಗೂ ನೆರವಾಗಿದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಿದೆ.
ಜೂನ್ 11ರಂದು ಶಕ್ತಿ ಯೋಜನೆಗೆ ಸಿದ್ದರಾಮಯ್ಯನವರು ಚಾಲನೆ ನೀಡಿದ ಬಳಿಕ ರಾಜ್ಯಾದ್ಯಂತ ಮಹಿಳೆಯರು ಬಸ್ ಪ್ರಯಾಣವನ್ನು ಆರಂಭಿಸಿದ್ದರು. ದಿನನಿತ್ಯ ದುಡಿಮೆಗಾಗಿ ಬಸ್ ಸಂಚಾರವನ್ನು ನೆಚ್ಚಿಕೊಂಡಿದ್ದ ಮಹಿಳೆಯರು ಸರ್ಕಾರ ಶಕ್ತಿ ಯೋಜನೆಯನ್ನು ಘೋಷಿಸಿದ್ದಕ್ಕೆ ಖುಷಿಯಾಗಿದ್ದರು. ಸಂಬಳದ ಹಣದಲ್ಲಿ ತಕ್ಕ ಮಟ್ಟಿಗೆ ಉಳಿತಾಯ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಹಳ್ಳಿಯ ಹೆಣ್ಣುಮಕ್ಕಳು ಕೂಡ ಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದು ತಮ್ಮ ತೀರ್ಥಕ್ಷೇತ್ರಗಳು ಸೇರಿದಂತೆ ತಮ್ಮ ನೆಚ್ಚಿನ ಸ್ಥಳಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಜೊತೆಗೆ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೂ ಭೇಟಿ ನೀಡುತ್ತಿದ್ದಾರೆ.
ಪುನೀತ್ ಸಮಾಧಿಯ ದರ್ಶನಕ್ಕೆ ಬಂದ ಹಲವು ಮಹಿಳೆಯರು ಶಕ್ತಿ ಯೋಜನೆಯ ಬಗ್ಗೆ ಮಾತನಾಡಿದ್ದು, “ಕಳೆದ ಒಂದು ವರ್ಷದಿಂದ ಅಪ್ಪು ಸಮಾಧಿಯನ್ನು ನೋಡಬೇಕು ಎಂದುಕೊಂಡಿದ್ದೆವು. ಪ್ರಯಾಣದ ವೆಚ್ಚ ಭರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದೆವು. ಸರ್ಕಾರದವರು ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವುದರಿಂದ ಅಪ್ಪು ಅವರ ಸಮಾಧಿ ವೀಕ್ಷಿಸಿಲು ಸಾಧ್ಯವಾಯಿತು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆದಿಪುರುಷ್ ಅವಾಂತರ | ತಿರುಗು ಬಾಣವಾದ ಪ್ರಚಾರ ತಂತ್ರ
ಹೊಸಪೇಟೆ, ಇಳಕಲ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಮಹಿಳೆಯರು ತಾವು ಉಚಿತ ಬಸ್ ಪ್ರಯಾಣದ ಅನುಕೂಲ ಪಡೆದೇ ಅಪ್ಪು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.