ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿ ಹಬ್ಬ ಆಚರಣೆಯಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನಗರ ಪೊಲೀಸ್ ಪಟಾಕಿ ಸಿಡಿಸುವ ಮುಂಚೆ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಹೇಳಿತ್ತು. ಜತೆಗೆ, ಹಸಿರು ಪಟಾಕಿ ಮಾತ್ರ ಬಳಕೆ ಮಾಡಲು ಸೂಚಿಸಿತ್ತು. ತಪ್ಪಿದಲ್ಲಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಿತ್ತು. ಹಬ್ಬದ ಆರಂಭದ ದಿನ ರವಿವಾರದಿಂದ ನಗರದ ಹಲವೆಡೆ ಜನರು ಪಟಾಕಿ ಹಚ್ಚುತ್ತಿದ್ದಾರೆ. ಎರಡೇ ದಿನ ಪಟಾಕಿ ಸಿಡಿಸಿದಕ್ಕೆ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಕಡ್ಡಾಯವಾಗಿ ಹಸಿರು ಪಟಾಕಿ ಬಳಸಬೇಕು ಎಂದು ಎಚ್ಚರಿಕೆ ನೀಡಿದರೂ ಸಹ ನಗರದಲ್ಲಿ ಎರಡೇ ದಿನಕ್ಕೆ ವಾಯುಮಾಲಿನ್ಯ ಡಬಲ್ ಆಗಿದೆ. ನಿತ್ಯ ಬೆಂಗಳೂರಿನಲ್ಲಿ ವಾಹನಗಳ ಹೊಗೆ, ಧೂಳಿನಿಂದ ವಾಯು ಮಾಲಿನ್ಯ ಉಂಟಾಗುತ್ತಿತ್ತು. ಇದೀಗ ಪಟಾಕಿ ಮಾಲಿನ್ಯದಿಂದ ನಗರದ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಸದ್ಯ ಬೆಂಗಳೂರಿನ ವಾಯು ಗುಣಮಟ್ಟ (ಎಕ್ಯೂಐ) 100 ರ ಗಡಿ ದಾಟಿದೆ.
ಬೆಂಗಳೂರಿನಲ್ಲಿ ವಾಯುಗುಣಮಟ್ಟ ಸೂಚ್ಯಂಕ ಗಂಭೀರ ಸ್ಥಿತಿಗೆ ಹೋಗಿದೆ. ಇದು ಹಲವು ಆತಂಕಕ್ಕೆ ಕಾರಣವಾಗಿದೆ. ಈ ವಾಯು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀಳಲಿದೆ. ಹೆಚ್ಚಾಗಿ ಮಕ್ಕಳ ಮತ್ತು ವಯಸ್ಕರು ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ, ಅಸ್ತಮ, ಕೆಮ್ಮು ರೋಗಗಳಿಂದ ಬಳಲುತ್ತಿರುವವರಿಗೆ ಮಾಲಿನ್ಯ ವಿಷವಾಗಬಹುದು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.
ಜಯನಗರ, ಕವಿಕ, ನಿಮ್ಹಾನ್ಸ್, ಸಿಲ್ಕ್ ಬೋರ್ಡ್ ಜಂಕ್ಷನ್, ಜಿಗಣಿ, ಪೀಣ್ಯ, ಮೈಲಸಂದ್ರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತವಾಗಿದೆ.
ಜಯನಗರದಲ್ಲಿ ಸಾಮಾನ್ಯ ದಿನಗಳಲ್ಲಿ 105 ಇದ್ದ ಮಾಲಿನ್ಯಕಾರಕಗಳ ಪ್ರಮಾಣ 282ಕ್ಕೆ ಏರಿಕೆಯಾಗಿದೆ. ಪಿಎಮ್ 2.5 ಮಾಲಿನ್ಯಕಾರಕಗಳು ಹೆಚ್ಚು ಇದ್ದು ಗುಣಮಟ್ಟ ಕಳಪೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಇನ್ನು ಹೆಬ್ಬಾಳದಲ್ಲೂ 57 ಇದ್ದ ಗಾಳಿಯ ಮಾಲಿನ್ಯಕಾರಕಗಳು ಪಟಾಕಿ ಹೊಗೆಯಿಂದಾಗಿ 176ಕ್ಕೆ ಏರಿಕೆಯಾಗಿದ್ದು, ಬಸವೇಶ್ವರನಗರದಲ್ಲಿ 39 ರಿಂದ 82 ಕ್ಕೆ ಏರಿಕೆಯಾಗಿದೆ. ಕಸ್ತೂರಿನಗರದಲ್ಲಿ ಗಾಳಿಯ ಮಾಲಿನ್ಯಕಾರಕಗಳು 57 ದಿಂದ 77ಕ್ಕೆ ಏರಿಕೆಯಾಗಿದೆ. ಕವಿಕ ಬಳಿ 90 ರಿಂದ 192ಕ್ಕೆ ಗಾಳಿಯ ಗುಣಮಟ್ಟ ಇಳಿಕೆಯಾಗಿದ್ದು, ಸಾಧಾರಣವಾಗಿದೆ. ನಿಮ್ಯಾನ್ಸ್ ಆಸ್ಪತ್ರೆ ಬಳಿ 51 ರಿಂದ 179ಕ್ಕೆ ಜಾಸ್ತಿಯಾಗಿದೆ. ಸಿಲ್ಕ್ ಬೋರ್ಡ್ನಲ್ಲಿ 68 ರಿಂದ 175ಕ್ಕೆ ಏರಿಕೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಳಕಿನ ಹಬ್ಬ | ಎರಡೇ ದಿನದಲ್ಲಿ 80ಕ್ಕೂ ಹೆಚ್ಚು ಪಟಾಕಿ ಅವಘಡಗಳು ವರದಿ
ಮೆಜೆಸ್ಟಿಕ್ನಲ್ಲಿ 67 ರಿಂದ 101ಕ್ಕೆ ಏರಿಕೆಯಾಗಿದೆ. ಜಿಗಣಿಯಲ್ಲಿ 80 ರಿಂದ 128ಕ್ಕೆ ಏರಿಕೆಯಾಗಿದೆ. ಪೀಣ್ಯದಲ್ಲಿ 80 ರಿಂದ 108ಕ್ಕೆ ತಲುಪಿದೆ. ಮೈಲಸಂದ್ರದಲ್ಲಿ 78 ರಿಂದ 187 ಕ್ಕೆ ಏರಿಕೆಯಾಗಿದೆ. ಕೆಆರ್ಪುರಂನಲ್ಲೂ ಮಾಲಿನ್ಯ ಹೆಚ್ಚಳವಾಗಿದೆ.