ಚಳಿಗಾಲದಲ್ಲಿ ಮೀನುಗಾರಿಕೆಯಲ್ಲಿ ತೊಡಗಬೇಕಿದ್ದ ಬೋಟ್ಗಳು ಕಡಲ ತೀರದಲ್ಲೇ ನಿಂತಿವೆ. ಮೀನು ಹಿಡಿಯುವ ಕಾಯಕದಲ್ಲಿ ತೊಡಗಬೇಕಿದ್ದ ಮೀನುಗಾರರು ಬೋಟ್ಗಳು ಮತ್ತು ಬಲೆಗಳ ರಿಪೇರಿ ಕೆಲಸ ಮಾಡುತ್ತಾ ಕುಳಿತಿದ್ದಾರೆ. ಸಮುದ್ರದಲ್ಲಿ ಹೆಚ್ಚಾಗಿ ಮೀನುಗಳು ಸಿಗದ ಕಾರಣ, ಮೀನುಗಾರಿಕೆ ಕುಂಟಿತಗೊಂಡಿದೆ ಎಂದು ಹೇಳಲಾಗಿದೆ.
ಸರ್ಕಾರದ ಆದೇಶದಂತೆ ಆಗಸ್ಟ್ 1ರಿಂದ ಮೀನುಗಾರಿಕೆ ಆರಂಭವಾಗುತ್ತದೆ. ಪ್ರತಿವರ್ಷ ಜೂನ್ 1ರಿಂದ ಜುಲೈ 30ರವರೆಗೆ ಎರಡು ತಿಂಗಳುಗಳ ಕಾಲ ಮೀನುಗಾರಿಕೆಗೆ ನಿರ್ಬಂಧವಿರುತ್ತದೆ. ಮೀನುಗಳು ಮೊಟ್ಟೆ ಇಟ್ಟು, ಮರಿ ಮಾಡುವ ಕಾರಣದಿಂದಾಗಿ ಆ ಅವಧಿಯಲ್ಲಿ ಮೀನುಗಾರಿಕೆ ಮಾಡಿದರೆ, ಮೀನುಗಳ ಸಂತತಿ ವೃದ್ಧಿಯಾಗುವುದಿಲ್ಲ ಎಂಬ ಕಾರಣಕ್ಕೆ ನಿರ್ಬಂಧ ಹೇರಲಾಗಿರುತ್ತದೆ. ಇಳಿದಂತೆ ಆಗಸ್ಟ್ 1ರಿಂದ ಮೇ 31ರವರೆಗೆ ಮೀನುಗಾರಿಕೆ ಅವಕಾಶ ಇರುತ್ತದೆ. ಮೀನುಗಾರರು ಸಮುದ್ರದಲ್ಲಿ ಮೀನು ಹಿಡಿಯುವಲ್ಲಿ ತೊಡಗುತ್ತಾರೆ.
ಆದರೆ, ಈ ಬಾರಿ, ಮೀನುಗಾರಿಕೆ ಆರಂಭವಾಗಿ ನಾಲ್ಕು ತಿಂಗಳು ಕಳೆದಿಲ್ಲ. ಆಗಲೇ, ಮೀನುಗಾರಿಕಾ ಬೊಟ್ಗಳು ಬಂದರಿನಲ್ಲಿ ಲಂಗರು ಹಾಕುತ್ತಿವೆ. 30 ನಾಟಿಕಲ್ ಮೈಲ್ಗಳ ಆಳ ಸಮುದ್ರಕ್ಕೆ ಹೋದರೂ ಕೂಡ ಮೀನುಗಳು ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಮೀನುಗಾರರು.
“ಆಳ ಸಮುದ್ರದಲ್ಲಿ ಒಮ್ಮೆ ಮೀನುಗಾರಿಕೆಗೆ ತೆರಳಲು 40-50 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ, ಆದ ವೆಚ್ಚ ಹಿಂದಿರುಗುವಷ್ಟು ಮೀನುಗಳು ಸಿಗುತ್ತಿಲ್ಲ. ಹಾಕಿದ ಬಂಡವಾಳದ ಅರ್ಧದಷ್ಟು ಮಾತ್ರವೇ ಹಣ ದೊರೆಯುತ್ತಿದೆ. ಮೀನುಗಾರಿಕೆಯಲ್ಲಿ ನಷ್ಟ ಎದುರಾಗಿದೆ” ಎಂದು ಮೀನುಗಾರರು ಹೇಳುತ್ತಿದ್ದಾರೆ.
“ಪ್ರತಿವರ್ಷವೂ ಆಳ ಸಮುದ್ರದಲ್ಲಿ ತರಹೇವಾರಿ ಮೀನುಗಳು ಸಿಗುತ್ತಿದ್ದವು. ಹಾಕಿದ್ದ ಬಂಡವಾಳಕ್ಕಿಂತ ಹೆಚ್ಚಿನ ಆದಾಯ ಸಿಗುತ್ತಿತ್ತು. ಜೀವನವೂ ಉತ್ತಮವಾಗಿ ನಡೆಯುತ್ತಿತ್ತು. ಆದರೆ, ಈ ಬಾರಿ, 40 ಸಾವಿರ ರೂ. ಬಂಡವಾಳ ಹಾಕಿ ಮೀನುಗಾರಿಕೆ ಹೋದರೆ, 15-20 ಸಾವಿರ ರೂ.ಗಳಷ್ಟು ಮೌಲ್ಯದ ಮೀನುಗಳು ದೊರೆಯುತ್ತಿವೆ. ಬೋಟ್ಗಳಿಗೆ ಹಾಕಿದ ಡೀಸೆಲ್ ಹಣವೂ ವಾಪಸ್ ಬರುತ್ತಿಲ್ಲ” ಎಂದು ಹೇಳಿದ್ದಾರೆ.