ಗದಗ ಜಿಲ್ಲೆಯ ಹಿರಿಯ ನಾಗರಿಕರು, ಬೀದಿ ಬದಿ ವ್ಯಾಪಾರಸ್ಥರು, ಭಿಕ್ಷುಕರು, ವಿಕಲಚೇತನರು ಸೇರಿದಂತೆ ವಿವಿಧ ಸ್ಥರಗಳಲ್ಲಿ ಸರ್ಕಾರದ ಯೋಜನೆಯ ಸೌಲಭ್ಯ ಪಡೆಯಬಯಸುವ ಅರ್ಹರು ಯೋಜನೆಯ ಸೌಲಭ್ಯಗಳಿಂದ ವಂಚಿತರಾಗದಂತೆ ಆಯಾ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ (ನ.13) ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ನವೆಂಬರ್ 19ರಂದು ನಗರದ ಭೂಮರೆಡ್ಡಿ ಸರ್ಕಲ್ದಿಂದ ಕೆ. ಎಚ್. ಪಾಟೀಲ್ ಸರ್ಕಲ್ವರೆಗೆ ಬೀದಿ ಬದಿ ವ್ಯಾಪಾರಸ್ಥರಿಗೆ 92 (ಕಾರ್ಟ್) ತಳ್ಳುವ ಗಾಡಿ ವಿತರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಗರದ ಜನರಲ್ ಕಾರ್ಯಪ್ಪ ವೃತ್ತ, ಬೆಟಗೇರಿ ತರಕಾರಿ ಮಾರುಕಟ್ಟೆ, ಜೋಡು ಮಾರುತಿ ದೇವಸ್ಥಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಎಲ್ಇಡಿ ಲೈಟ್ ಅಳವಡಿಕೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಪಂಚ ಗ್ಯಾರಂಟಿಗಳ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಗದಗ ಜಿಲ್ಲೆ ಪ್ರಥಮ ಸ್ಥಾನದಲ್ಲಿರಬೇಕು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಸೌಲಭ್ಯಗಳು ತಲುಪಿಸಲು ಶ್ರಮಿಸಬೇಕು. ಅನುಷ್ಠಾನಕ್ಕೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ, ಪ್ರತಿಯೊಬ್ಬರಿಗೂ ಯೋಜನೆಯ ಲಾಭ ದೊರಕಿಸುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಅನ್ನಭಾಗ್ಯ ಯೋಜನೆಯಡಿ ಗದಗ ಜಿಲ್ಲೆಗೆ ನಿಗದಿಪಡಿಸಲಾದ ಗುರಿ ಪೈಕಿ ಶೇ. 92ರಷ್ಟು ಗುರಿ ಸಾಧನೆಯಾಗಿದೆ. ವಿವಿಧ ತಾಂತ್ರಿಕ ತೊಂದರೆಗಳಿರುವ 7,565 ಫಲಾನುಭವಿಗಳಿಗೆ ಪ್ರಸಕ್ತ ಮಾಹೆಯಿಂದ ಅನ್ನಭಾಗ್ಯ ಯೋಜನೆಯ ನಗದು ಪಾವತಿಸಲಾಗುವುದು. ಜಿಲ್ಲೆಯ 19,079 ಕಾರ್ಡುದಾರರಿಗೆ ವಿವಿಧ ಕಾರಣಗಳಿಂದ ಹಣ ಪಾವತಿಯಾಗಿಲ್ಲ. ಇದರಲ್ಲಿ ಆಧಾರ ನೋಂದಣಿ ಮತ್ತು ಪಡಿತರ ಚೀಟಿ, ಬ್ಯಾಂಕ್ ಖಾತೆ ಹಾಗೂ ಆಧಾರ ಕಾರ್ಡನಲ್ಲಿನ ಹೆಸರುಗಳ ವ್ಯತ್ಯಾಸದಿಂದ ಪಾವತಿಯಾಗಿಲ್ಲ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೊಜನೆಯಡಿ 2,48,000 ಗುರಿ ಹೊಂದಿದ್ದು 2,18,215 ಫಲಾನುಭವಿಗಳಿಗೆ ಮಂಜೂರಾತಿ ನೀಡಲಾಗಿದೆ. ಫಲಾನುಭವಿಗಳ ಆಧಾರ ಕಾರ್ಡ ಮತ್ತು ರೇಷನ್ ಕಾರ್ಡನಲ್ಲಿನ ಹೆಸರು ಹೊಂದಾಣಿಕೆಯಾಗದ ಕಾರಣ ಹೀಗೆ ತಾಂತ್ರಿಕ ತೊಂದರೆಗಳಿಂದ ಬಾಕಿ ಉಳಿದಿರುವ ಫಲಾನುಭವಿಗಳ ಹೆಸರು ಅಪ್ಡೇಟ್ ಆಗಿರುವುದಿಲ್ಲ. ಶೀಘ್ರದಲ್ಲಿಯೇ ಕ್ರಮ ವಹಿಸಲಾಗುವುದು. ಗೃಹ ಲಕ್ಷ್ಮೀಯಡಿ ಫಲಾನುಭವಿಗಳ ಪಾವತಿಯಲ್ಲಿ ರಾಜ್ಯದಲ್ಲಿಯೇ ಗದಗ ಜಿಲ್ಲೆ 3ನೇ ಸ್ಥಾನದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಜೂನ್ದಿಂದ ಇದುವರೆಗೆ 2.19ಕೋಟಿ ಮಹಿಳೆಯರು ಪ್ರಯಾಣಿಸಿದ್ದು 1.53 ಕೋಟಿ ಪುರುಷರು ಪ್ರಯಾಣಿಸಿದ್ದಾರೆ. ಪ್ರತಿ ದಿನದ ಸರಾಸರಿ ಪುರುಷ ಪ್ರಯಾಣಿಕರಿಂದ 30ಲಕ್ಷ ಮತ್ತು ಮಹಿಳಾ ಪ್ರಯಾಣಿಕರಿಂದ 47ಲಕ್ಷ ರೂ. ಹೀಗೆ, ಒಟ್ಟಾರೆ 77 ಲಕ್ಷ ರೂ. ಆದಾಯವಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ಅಧಿಕಾರಿ ಮಾಹಿತಿ ನೀಡಿದರು.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ನಿಗದಿಪಡಿಸಲಾದ ಗುರಿಗೆ ಶೇ. 94ರಷ್ಟು ಸಾಧನೆಯಾಗಿದೆ. 2,55,933 ಫಲಾನುಭವಿಗಳನ್ನು ತಲುಪುವ ಗುರಿ ಹೊಂದಲಾಗಿದ್ದು, 15,605 ಫಲಾನುಭವಿಗಳು ನೊಂದಣಿ ಮಾಡಿಕೊಳ್ಳಬೇಕಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ 4,722 ಅರ್ಜಿಗಳು ಬಾಕಿ ಇವೆ ಎಂದು ಹೆಸ್ಕಾಂ ಇಲಾಖೆಯ ಅಧಿಕಾರಿ ಸಭೆಗೆ ವಿವರಿಸಿದರು.
ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ 6,115 ವಿದ್ಯಾರ್ಥಿಗಳು ಯೋಜನೆಯ ಫಲಾಕಾಂಕ್ಷಿಗಳಿದ್ದು, ಸರ್ಕಾರದ ಮಾರ್ಗದರ್ಶನದಂತೆ ಯೋಜನೆಯ ಅನುಷ್ಠಾನಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಗಂಗಪ್ಪ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.