- ಗದಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ
- ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡುವಂತೆ ಸಮಿತಿಗೆ ಸೂಚನೆ
ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿಗಾಗಿ ಪೂರಕ ವಾತಾವರಣ ನಿರ್ಮಿಸಲು ಯೋಜನೆಗಳನ್ನು ರೂಪಿಸುವ ಕುರಿತು ಆಳವಾದ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ ಸೂಚಿಸಿದರು.
ಗದಗ ನಗರದ ರೈತರ ಭವನದಲ್ಲಿ ಜರುಗಿದ ಗದಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ಹಾಗೂ ತಳಮಟ್ಟದಲ್ಲಿ ಅಧ್ಯಯನ ಮಾಡಿ ಉತ್ತಮ ವರದಿಯನ್ನು ಒಂದು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು. ಗದಗ ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವಾಗಿಸಲು ಪೂರಕ ವಾತಾವರಣವಿದೆ. ಇರುವ ಸಂಪನ್ಮೂಲ ಸಮರ್ಪಕವಾಗಿ ಬಳಸಿ ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವಾಗಿಸೋಣ ಎಂದರು.
ಜಿಲ್ಲೆಯಲ್ಲಿ ವಾಸ್ತುಶಿಲ್ಪಕ್ಕೆ ಪ್ರಸಿದ್ದಿ ಪಡೆದಿರುವ ಲಕ್ಕುಂಡಿ, ಹರ್ತಿ, ಡಂಬಳ, ಹುಲಕೋಟಿ ಸೇರಿದಂತೆ ಇತರೆ ಸ್ಥಳಗಳು ಐತಿಹಾಸಿಕ ದೇವಾಲಯಗಳನ್ನು ಹೊಂದಿದ್ದು, ಈ ಕುರಿತು ಈಗಾಗಲೇ ರಚಿಸಿರುವ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಆಳವಾದ ಅಧ್ಯಯನ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದರು.
ರೋಣ, ಗಜೇಂದ್ರಗಡ, ನರಗುಂದ, ಶ್ರೀಮಂತಗಡ ಕೋಟೆಗಳು ಐತಿಹಾಸಿಕ ಚಾರಿತ್ರ್ಯ ಸಾರುವ ಕೋಟೆಗಳಾಗಿವೆ. ಹತ್ತಿರದ ಕಪ್ಪತಗುಡ್ಡ ಔಷಧಿ ಗುಣವುಳ್ಳ ಸಸ್ಯ ಸಂಪತ್ತನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡು ಸಹ್ಯಾದ್ರಿಯಾಗಿದೆ. ಬಿಂಕದಕಟ್ಟಿಯಲ್ಲಿ ಇರುವ ಪ್ರಾಣಿ ಸಂಗ್ರಹಾಲಯವು 50 ವರ್ಷಗಳನ್ನು ಪೂರೈಸಿ ಸುವರ್ಣ ಸಂಭ್ರಮ ಆಚರಣೆ ಮಾಡಿದೆ. ನಗರದ ಭೀಷ್ಮಕೆರೆ, ಜುಮ್ಮಾ ಮಸೀದಿ, ತಿರಂಗಾ ಪಾರ್ಕ್, ಬೆಟಗೇರಿಯ ತಾರಾಲಯ, ಪ್ರಾಚ್ಯ ವಸ್ತು ಸಂಗ್ರಹಾಲಯ, ನೇಕಾರಿಕೆ ಇವೆಲ್ಲವುಗಳು ಪ್ರವಾಸಿಗರ ಆಕರ್ಷಣೆಗೆ ಪೂರಕವಾಗಿವೆ ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೆಣ್ಣುಮಕ್ಕಳು ಸ್ವಾವಲಂಬನೆಯತ್ತ ಹೆಜ್ಜೆ ಹಾಕಿ; ಬಿ ವಾಮದೇವಪ್ಪ ಸಲಹೆ
ಗದಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ಮನೋಜ ಕುಮಾರ್, ಕಾರ್ಯದರ್ಶಿಯಾಗಿ ಜಿ. ಜಗದೀಶ, ಸದಸ್ಯರಾಗಿ ಮಂಜುನಾಥ ಚವ್ಹಾಣ, ಜೆ ಕೆ ಜಮಾದಾರ, ವಿವೇಕಾನಂದಗೌಡ ಪಾಟೀಲ, ಡಾ. ಎಸ್ ಜಿ ಚಲವಾದಿ, ಕಿಶೋರ ಬಾಬು ನಾಗರಕಟ್ಟೆ, ಎ ದೇವರಾಜ, ಎಫ್ ಎನ್ ಹುಡೇದ ಸೇರಿದಂತೆ ಒಟ್ಟು 16 ತಜ್ಞರು ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಎಂ ಎಲ್ ವೈಶಾಲಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಬಿ ಸುಶೀಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಉಪವಿಭಾಗಾಧಿಕಾರಿ ಎಂ ಅನ್ನಪೂರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಇತರರು ಇದ್ದರು.