ಶಾಲೆಯ ಗಾಂಧಿ ಜಯಂತಿ ಆಚರಣೆಗೆಂದು ನಾನೇ ಬರೆದುಕೊಟ್ಟಿದ್ದ ಭಾಷಣವನ್ನು ಅಕ್ಷರಶಃ ಉರು ಹೊಡೆದು ಕಂಠಪಾಠ ಮಾಡಿಕೊಂಡ ಬಳಿಕ ನನ್ನ ಮಗ ಕೇಳಿದ, “ಅಪ್ಪಾ, ಗಾಂಧಿ ನಿಜಕ್ಕೂ ಎಷ್ಟು ಪವರ್ಫುಲ್ ಮನುಷ್ಯನಾಗಿದ್ದರು?”. ಕೊಡಬೇಕಿದ್ದ ಉತ್ತರದ ಬಗ್ಗೆ ನಾನು ಸ್ಪಷ್ಟವಾಗಿದ್ದೆ; ಆದರೆ ಅದನ್ನು ಯಾವ ರೀತಿ ನೀಡಬೇಕೆಂಬುದರ ಕುರಿತು ಕೊಂಚ ಗಲಿಬಿಲಿಗೊಂಡು ತಡಕಾಡಿದೆ.
ಯಾಕೆಂದರೆ, ಒಬ್ಬ ಮನುಷ್ಯನ ಶಕ್ತಿ, ಸಾಮರ್ಥ್ಯಗಳನ್ನು ಅಳೆಯುವ ಮಾನದಂಡ ಯಾವುದು? ಅದು, ಆ ವ್ಯಕ್ತಿಯ ಸಮಗ್ರ ಜೀವನವನ್ನು ಅರ್ಥ ಮಾಡಿಕೊಂಡಾಗ ಆತನ ಕುರಿತು ನಮ್ಮೊಳಗೇ ತಳೆಯುವ ಒಂದು ತೀರ್ಮಾನ; ಅಭಿಮಾನ; ಮತ್ತು ಗೌರವ. ಅದನ್ನು, ಆ ವ್ಯಕ್ತಿಯ ಬಗ್ಗೆ ಅಷ್ಟೇನು ಗೊತ್ತಿರದ ಮತ್ತೊಬ್ಬರ ಮುಂದೆ ಹೇಳುವಾಗ ಚುಟುಕಾಗಿ ಹೇಗೆ ನಿರೂಪಿಸುವುದು. ನನ್ನ ಸಮಸ್ಯೆ ಅದಾಗಿತ್ತು. ಮಗ ಕಾಯುತ್ತಲೇ ಇದ್ದ.
ಕೊನೆಗೂ ಒಂದು ದಾರಿ ತೋರಿತು, “ನೋಡು ಮಗನೇ, ಗಾಂಧಿಯನ್ನು ಕೊಂದದ್ದು ಗೋಡ್ಸೆ ಎಂಬ ಹಂತಕ. ಆ ಹಂತಕನಿಗೆ ಮನದೊಳಗೇ ಗುಡಿಕಟ್ಟಿ, ಆರಾಧಿಸಿ, ಜೈಕಾರ ಕೂಗುವ ಸಂತತಿಯವರನ್ನು ಕೂಡಾ; ಅಕ್ಟೋಬರ್ 2 ಬಂತೆಂದರೆ, ತಮ್ಮ ಸಮಾಧಿಯ ಬಳಿ ಕರೆಸಿಕೊಂಡು, ಅವರ ಕೈಗಳಿಂದಲೇ ಪುಷ್ಪ ನಮನ ಮಾಡಿಸಿಕೊಂಡು, ತಲೆಬಾಗಿಸಿ ನಿಲ್ಲುವಂತೆ ಮಾಡಿಸಿಕೊಳ್ಳುವಷ್ಟು ಪವರಲ್ಫುಲ್ ವ್ಯಕ್ತಿ, ನಮ್ಮ ಗಾಂಧಿ” ಎಂದೆ.
ಈ ನನ್ನ ಉತ್ತರದಿಂದ ಮಗನಿಗೆ ಎಷ್ಟುಮಾತ್ರ ತೃಪ್ತಿ ಸಿಕ್ಕಿತೋ ಗೊತ್ತಿಲ್ಲ, ಆದರೆ ನಾನಂತೂ ಮಗನ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟ ಖುಷಿಯಲ್ಲಿ ಬೀಗುತ್ತಿದ್ದೆ. ಅದೇ ಹೊತ್ತಿಗೆ, ಗಾಂಧಿಯ ಇಡೀ ಬದುಕಿನ ಸುಸ್ಪಷ್ಟ ಮೌಲ್ಯಗಳಾದ ಸತ್ಯ ಮತ್ತು ಅಹಿಂಸೆಗಳನ್ನು ಮುಂದಿನ ಪೀಳಿಗೆಯವರಿಂದ ಮರೆಮಾಚುವ ದುರುದ್ದೇಶವೇನೊ ಎಂಬಂತೆ, ಅವರನ್ನು ಕೇವಲ ಸ್ವಚ್ಛತೆಯ ಗೂಟಕ್ಕೆ ಬಿಗಿಯುವ ಪ್ರಯತ್ನದಲ್ಲಿ ಅದ್ಯಾರೋ ಟಿವಿ ಪರದೆಯ ಮೇಲೆ ಭಾಷಣ ಮಾಡುತ್ತಿದ್ದರು.
ಗಿರೀಶ್ ತಾಳಿಕಟ್ಟೆ
ಪತ್ರಕರ್ತ, ಲೇಖಕ