- ಭೋಪಾಲದಲ್ಲಿ ಹೇಳಿಕೆ ನೀಡಿದ್ದ ಸಿಎಂ ಶಿವರಾಜ್ ಸಿಂಗ್ ಚೌಹಾಣ್
- ಸುಳ್ಳು ಭರವಸೆ ನೀಡಿ ಬಿಜೆಪಿ ಜನರನ್ನು ವಂಚಿಸಿದೆ ಎಂದ ಕಾಂಗ್ರೆಸ್
‘ಶ್ರಾವಣ ಮಾಸದಲ್ಲಿ 450 ರೂ.ಗೆ ಎಲ್ಪಿಜಿ ಸಿಲಿಂಡರ್ಗಳನ್ನು ನೀಡುತ್ತೇನೆ. ನಂತರ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಸಮಸ್ಯೆಗೆ ಶಾಶ್ವತ ವ್ಯವಸ್ಥೆ ಮಾಡುತ್ತೇನೆ’ ಎಂದು ಮುಖ್ಯಮಂತ್ರಿಯ ಮಾತು ನಂಬಿ ಮಹಿಳೆಯರು ಗ್ಯಾಸ್ ಏಜೆನ್ಸಿಗಳತ್ತ ಧಾವಿಸಿರುವ ಬೆಳವಣಿಗೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದಲ್ಲಿ ಸದ್ಯ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ಮುಂಬರಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭೋಪಾಲದಲ್ಲಿ ಆ.27ರಂದು ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ 450 ರೂ.ಗೆ ಮನೆ ಬಳಕೆಯ ಸಿಲಿಂಡರ್ಗಳನ್ನು ನೀಡುವುದಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಹಿಳೆಯರಿಗೆ ಭರವಸೆ ನೀಡಿದ್ದರು.
ಈ ಮಾತನ್ನು ನಂಬಿದ ರಾಜ್ಯದ ಹಲವು ಮಹಿಳೆಯರು, ಮರುದಿನವೇ ಖಾಲಿ ಸಿಲಿಂಡರ್ಗಳೊಂದಿಗೆ ಗ್ಯಾಸ್ ಏಜೆನ್ಸಿಗೆ ಹೋಗಿದ್ದಾರೆ. ಆದರೆ, ಅಲ್ಲಿ ಹೋದಾಗ, ‘1,185 ರೂ ಪಾವತಿಸಿದರೆ ಮಾತ್ರ ಗ್ಯಾಸ್ ಕೊಡುತ್ತೇವೆ. ಇಲ್ಲದಿದ್ದರೆ ಮನೆಗೆ ಹೋಗಿ’ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸೀಮಾ ಕೊಹ್ಲಿ ಎಂಬ ಮಹಿಳೆ, “ನಮ್ಮ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆನ್ಲೈನ್ ಸಭೆ ನಿನ್ನೆ ನಡೆಸಲಾಗಿತ್ತು. ನಮಗೆ ಭಾಗವಹಿಸುವಂತೆ ಸೂಚಿಸಿದ್ದರು. ಅದರಂತೆ ನಾವು ಭಾಗವಹಿಸಿದ್ದೆವು. ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಭಾಯಿ(ಸಿಎಂ ಶಿವರಾಜ್ ಸಿಂಗ್ ಚೌಹಾಣ್) 450₹ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಘೋಷಿಸಿದ್ದರು. ಅವರ ಮಾತನ್ನು ನಂಬಿ ಖಾಲಿ ಸಿಲಿಂಡರ್ಗಳೊಂದಿಗೆ ಗ್ಯಾಸ್ ಏಜೆನ್ಸಿಗೆ ಬಂದೆವು. ಇಲ್ಲಿ ಅವರು ₹450 ಗ್ಯಾಸ್ ನಮ್ಮಲ್ಲಿ ಇಲ್ಲ. 1,185 ರೂ ಪಾವತಿಸಿದರೆ ಮಾತ್ರ ಗ್ಯಾಸ್ ಕೊಡುತ್ತೇವೆ. ಇಲ್ಲದಿದ್ದರೆ ಮನೆಗೆ ಹೋಗಿ’ ಎಂದು ತಿಳಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.
ಈ ಬೆಳವಣಿಗೆಯನ್ನು ಖಂಡಿಸಿರುವ ವಿಪಕ್ಷ ಕಾಂಗ್ರೆಸ್, ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರವು 450 ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಸುಳ್ಳು ಭರವಸೆ ನೀಡಿ ಜನರನ್ನು ವಂಚಿಸಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ‘ರಾಖಿ ಉಡುಗೊರೆಯಲ್ಲೂ ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಮೋಸ ಮಾಡಿದ್ದಾರೆ. ಸಹೋದರಿಯರೇ, ಮೋದಿ ಸರ್ಕಾರವೇ ಗ್ಯಾಸ್ ಬೆಲೆಯನ್ನು 1,100 ರೂಪಾಯಿಗಿಂತ ಹೆಚ್ಚಿಸಿದೆ. ಇದರಿಂದಾಗಿ ದೇಶದ ಕೋಟಿಗಟ್ಟಲೆ ಕುಟುಂಬಗಳಿಗೆ ಗ್ಯಾಸ್ ರೀಫಿಲ್ಲಿಂಗ್ ಮಾಡಲು ಸಾಧ್ಯವಾಗಿಲ್ಲ. ನೀವು ಹೆದರಬೇಡಿ, ನಮ್ಮ ಸರ್ಕಾರ ಬಂದರೆ, ಐನೂರು ರೂಪಾಯಿಯಲ್ಲಿ ನಿಮಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ. ಇದು ನಮ್ಮ ಗ್ಯಾರಂಟಿ. ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಮುಳುಗಿರುವ ಮಧ್ಯಪ್ರದೇಶದ ಬಿಜೆಪಿ ಸರ್ಕಾರಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ’ ಎಂದು ತಿಳಿಸಿದ್ದಾರೆ.
2023ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಜ್ಯದ ಮಹಿಳೆಯರಿಗೆ ಶ್ರಾವಣ ತಿಂಗಳಲ್ಲಿ 450 ರೂ.ಗೆ ಅಡುಗೆ ಅನಿಲವನ್ನು ನೀಡುವುದಾಗಿ ಘೋಷಿಸಿತ್ತು.
ಲಾಡ್ಲಿ ಬೆಹ್ನಾ ಯೋಜನೆಯ ಬಳಿಕ, ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಘೋಷಿಸಿದ “ರಕ್ಷಾ ಬಂಧನ ಉಡುಗೊರೆ”ಗಳಲ್ಲಿ ಇದೂ ಕೂಡ ಒಂದು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ ಹತ್ತಿರವಾದಂತೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರ ರೂ. 200 ಇಳಿಸಿದ ಸರ್ಕಾರ!
ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿರುವ ವಿಪಕ್ಷ ಕಾಂಗ್ರೆಸ್, ಈಗಾಗಲೇ ಹಲವಾರು ಭರವಸೆಗಳನ್ನು ಘೋಷಿಸಿದೆ. ಇದರಲ್ಲಿ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದು ಕೂಡ ಸೇರಿದೆ.
ಈ ನಡುವೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಎಲ್ಲ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಇಂದು ₹200 ರೂಪಾಯಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ.