- ಮಾ 13 ರಿಂದ 17 ರವರೆಗೆ ನಡೆದ ವಿಚಾರಣೆ
- ಮುಂದಿನ ವಿಚಾರಣೆ ಮೇ 8 ಮುಂದೂಡಿಕೆ
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾರ್ಚ್ ತಿಂಗಳ ವಿಚಾರಣೆಯು 13 ರಿಂದ 17 ರವರೆಗೆ ನಡೆದಿದೆ. ಈ ವೇಳೆ 3 ಸಾಕ್ಷಿಗಳ ಹೇಳಿಕೆ, ಆರೋಪಿ ಪರ ವಕೀಲರ ಪಾಟಿ ಸವಾಲು, ಬಾಕಿ ಉಳಿದಿದ್ದ ಇನ್ನಿಬ್ಬರು ಸಾಕ್ಷಿಗಳ ಹೇಳಿಕೆ ಮತ್ತು ಪಾಟಿ ಸವಾಲುಗಳನ್ನು ನ್ಯಾಯಾಲಯ ಆಲಿಸಿದೆ.
ಪೊಲೀಸ್ ಅಧಿಕಾರಿಗಳ ವಿಶೇಷ ಕೋರಿಕೆಯಂತೆ ಪ್ರಕರಣದ ವಿಚಾರಣೆ ಗೌಪ್ಯವಾಗಿ ನಡೆಯುತ್ತಿದೆ. ವಿಚಾರಣೆ ವೇಳೆ ಸಾರ್ವಜನಿಕರಿಗೆ ಮತ್ತು ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ವಿಚಾರಣೆಯ ವಾದ-ಪ್ರತಿವಾದಗಳ ಮಾಹಿತಿಯನ್ನು ನ್ಯಾಯಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತಿದೆ.
ಮಾರ್ಚ್ ತಿಂಗಳ ಮೂರು ದಿನಗಳಲ್ಲಿ ನಡೆದ ವಿಚಾರಣೆಯ ಪ್ರಮುಖ ಅಂಶಗಳು ಇಂತಿವೆ
ಸಾಕ್ಷಿ-1: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದ ಸದಸ್ಯ ಬಾಲರಾಜ್ ತನಿಖೆಯ ಕುರಿತು ವಿವರಿಸಿದರು. ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಜಿತ್ ಕುಮಾರ್ ವಾಸವಿದ್ದ ಉಡುಪಿ ಮನೆಯನ್ನು ಪಂಚರ ಎದುರಿಗೆ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ, ತಪಾಸಣೆ ಮಾಡಿದ್ದ ಬಗ್ಗೆ ಹಾಗೂ ಮತ್ತಿಬ್ಬರು ಆರೋಪಿಗಳಾದ ಅಮಿತ್ ಬಡ್ಡಿ ಮತ್ತು ಗಣೇಶ್ ಮಿಸ್ಕಿನ್ ಅವರನ್ನು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರುಪಡಿಸಿ, ಅಲ್ಲಿಂದ ಬೆಂಗಳೂರಿಗೆ ಕರೆತಂದ ಬಗ್ಗೆ ಸಾಕ್ಷಿ ಹೇಳಿದರು.
ಆರೋಪಿ ಪರ ವಕೀಲ ಕೃಷ್ಣಮೂರ್ತಿಯವರು ಪಾಟಿ ಸವಾಲು ಮಾಡಿದರು. ಸಾಕ್ಷಿಯು ತಪಾಸಣೆ ಮಾಡುವಾಗ, ದಾಖಲು ಮಾಡುವಾಗ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸದ ಬಗ್ಗೆ, ತಾವು ಸಹಿ ಮಾಡಿ ಪಡೆದುಕೊಂಡ ನೋಟೀಸಿನಲ್ಲಿ ಕೈ ಬರಹದಿಂದ ಕೆಲವು ತಿದ್ದುಪಡಿ ಮಾಡಿರುವ ಬಗ್ಗೆ, ಸಾಕ್ಷಿಯ ಮೇಲೆ ಬೇರೆ ಪ್ರಕರಣದಲ್ಲಿ ಆರೋಪವಿರುವ ಬಗ್ಗೆ ವಿವರಿಸಿದರು. ಆರೋಪಿಗಳ ವಿರುದ್ಧ ನೀಡಿದ ಸಾಕ್ಷಿಗಳೆಲ್ಲವೂ ಸುಳ್ಳು ಎಂದು ಸವಾಲು ಹಾಕಿದರು.
ಸಾಕ್ಷಿ-2: ಬಿಬಿಎಂಪಿಯ ದ್ವಿತೀಯ ದರ್ಜೆ ಸಹಾಯಕ ವಿ ಮುಕುಂದ ಅವರು ಪೊಲೀಸರ ಕೋರಿಕೆ ಮೇರೆಗೆ ಮೇಲಧಿಕಾರಿಗಳು ಆದೇಶದನ್ವಯ ತನಿಖೆಯಲ್ಲಿ ಪಂಚರಾಗಿ ಸಹಕರಿಸಿದ ಬಗ್ಗೆ ಸಾಕ್ಷಿ ನುಡಿದರು. ಪಾಟಿ ಸವಾಲು ನಡೆಸಿದ ಆರೋಪಿ ಪರ ವಕೀಲರು ಸಾಕ್ಷಿಯು ಪಂಚರಾಗಿ ಸಹಕರಿಸಲು ಅನುಸರಿಸಬೇಕಿದ್ದ ಪ್ರಕ್ರಿಯೆಗಳಲ್ಲಿ ಇರುವ ಲೋಪಗಳ ಬಗ್ಗೆ ಪ್ರಶ್ನಿಸಿ, ಸುಳ್ಳು ಸಾಕ್ಷ್ಯ ಹೇಳುತ್ತಿರುವುದಾಗಿ ಸವಾಲು ಮಾಡಿದರು.
ಸಾಕ್ಷಿ–3: ಕಡಬಗೆರೆ ಗ್ರಾಮ ಪಂಚಾಯತಿ ಸೆಕ್ರೆಟರಿ ಪ್ರವೀಣ್ ಕುಮಾರ್, “ಪೊಲೀಸರ ಕೋರಿಕೆ ಮೇರೆಗೆ ಕಡಬಗರೆ ಗ್ರಾಮ ಪಂಚಾಯತಿಯ ಪಿಡಿಒ ಅವರಿದ ನಿರ್ದೇಶಿತನಾಗಿ ಪೊಲೀಸರ ತನಿಖೆಗೆ ಪಂಚರಾಗಿ ಸಹಕರಿಸಿದ್ದೆ” ಎಂದು ಹೇಳಿದರು.
ಪಾಟಿ ಸವಾಲು ನಡೆಸಿದ ಆರೋಪಿ ಪರ ವಕೀಲರು, “ಸರ್ಕಾರಿ ಸಿಬ್ಬಂದಿಯಾಗಿ ಪೊಲಿಸ್ ಪಂಚನಾಮೆಗೆ ಸಹಕರಿಸುವ ಮುನ್ನ ಪಾಲಿಸಬೇಕಾದ ಪ್ರಕ್ರಿಯೆಗಳಲ್ಲಿ ಇರುವ ಲೋಪಗಳ ಬಗ್ಗೆ, ಹಾಗೂ ಅದರಲ್ಲಿ ಇರುವ ಕೈಬರಹ ತಿದ್ದುಪಡಿಗಳ 3ನೇ ಸಾಕ್ಷಿಗೆ ಮಾಹಿತಿ ಇಲ್ಲ. ಅವರು ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದಾರೆ” ಎಂದು ಆರೋಪಿಸಿದರು.
ಸಾಕ್ಷಿ–4: ಪಂಚನಾಮೆಯ ಸಾಕ್ಷಿಯಾಗಿದ್ದ ಡಿವಿಆರ್ ರವಿಕುಮಾರ್ ನ್ಯಾಯಾಲಯದ ಎದುರು ಪ್ರಕರಣ ಸಂಬಂಧ ಮಾಹಿತಿ ನೀಡಿದರು. “ಎಮ್ಎನ್ಸಿ ಗಳಿಗೆ ಆಹಾರ ಸರಭರಾಜು ಮಾಡುವ ಕೆಲಸದಲಿದ್ದು, 2017 ರ ಸೆಪ್ಟೆಂಬರ್ 5ರ ಮಧ್ಯರಾತ್ರಿ ಟೀ ಕುಡಿಯಲು ರಾಜರಾಜೇಶ್ವರಿ ನಗರದ ಬಳಿ ನಿಂತಿದ್ದಾಗ ಪೊಲೀಸರ ಕೋರಿಕೆ ಮೇರೆಗೆ ಅವರು ವಶಪಡಿಸಿಕೊಂಡಿದ್ದ ಸಿಸಿಟಿವಿಗಳ ಡಿವಿರ್ ಗಳ ಪಂಚನಾಮೆಗೆ ಸಾಕ್ಷಿಯಾಗಿದ್ದೆ” ಎಂದು ತಿಳಿಸಿದರು.
ಸಾಕ್ಷಿ-5: ಪ್ರಕರಣದ ತನಿಖಾಧಿಕಾರಿ ಎಸಿಪಿ ಪ್ರಕಾಶ್, “ನಾವು ವಶಪಡಿಸಿಕೊಂಡ ಡಿವಿಆರ್ ಇಂದ ಪ್ರದರ್ಶಿಸಲಾದ ದೃಶ್ಯದಲ್ಲಿ ಗೌರಿ ಲಂಕೇಶ್ ಗೇಟನ್ನು ತೆರೆಯುತ್ತಿರುವುದು, ಆಗ ಕಾರಿನ ಒಂದು ಸಿಂಗಲ್ ಲೈಟ್ ಆನ್ ಆಗಿರುವುದು ಮತ್ತು ಅಪರಿಚಿತನೊಬ್ಬ ಬಂದು ಗೌರಿ ಲಂಕೇಶ್ ಗೆ ಶೂಟ್ ಮಾಡಿ ಹೋಗುತ್ತಿರುವುದು ಕಂಡು ಬಂದಿದೆ” ಎಂದು ವಿವರಿಸಿದರು.
ಪಾಟಿ ಸವಾಲು ನಡೆಸಿದ ಆರೋಪಿ ಪರ ವಕೀಲರು, “ಗೌರಿ ಲಂಕೇಶರ ಸಾವನ್ನು ಖಚಿತ ಪಡಿಸಿಕೊಳ್ಳದೆ ದೇಹವನ್ನು ಶವಾಗಾರಕ್ಕೆ ಕಳಿಸಿದ ಬಗ್ಗೆ, ಪೊಲೀಸರ ವರದಿಯಲ್ಲಿ ನಮೂದಾಗಿದ್ದ ಸಮಯದಂತೆ ಸಿಸಿಟಿವಿ ಡಿವಿಆರ್ನಲ್ಲಿ ಇಲ್ಲ” ಎಂದು ವಾದಿಸಿದರು. ಆದರೆ, ಗೌರಿಯವರ ಸಾವನ್ನು ಖಚಿತಪಡಿಸಿಕೊಳ್ಳದೆ ಶವಾಗಾರಕ್ಕೆ ಕಳಿಸಲಾಯಿತೆಂಬ ಮತ್ತು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂಬ ಆರೋಪವನ್ನು ಎಸಿಪಿ ನಿರಾಕರಿಸಿದರು.
ಮುಂದಿನ ವಿಚಾರಣೆಯನ್ನು 2023ರ ಮೇ 8ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.