ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹತ್ತಿ ಬೆಳೆಗೆ ರೋಗ ತಗುಲಿದ್ದು, ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ. ನಷ್ಟ ಅನುಭಿವಿಸಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಜಿಲ್ಲೆಯಲ್ಲಿ ಬಹುತೇಕ ರೈತರು ಬೆಳೆದಿದ್ದು ಬಿ.ಟಿ ತಳಿಯ ಹತ್ತಿ ಬೆಳೆ ಕೆಂಪು-ಹಳದಿ ಬಣ್ಣಕ್ಕೆ ತಿರುಗಿ, ಒಣಗಿ ಹೋಗಿವೆ. ಬಹಳಷ್ಟು ರೈತರು ನಷ್ಟ ಅನುಭವಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ರೋಗಕ್ಕೆ ತುತ್ತಾಗಿದ್ದ ಬೆಳೆಗೆ ಕೃಷಿ ವಿಶ್ವವಿದ್ಯಾಲಯದ ತಜ್ಞರು ಸೂಚಿಸಿದರ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಆದರೂ ರೋಗ ಹತೋಟಿಗೆ ಬಂದಿಲ್ಲ. ಸಾವಿರಾರು ರೈತರು ಹತ್ತಿ ಬೆಳೆಯನ್ನು ಕಿತ್ತುಹಾಕಿ, ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
“ಬಿ.ಟಿ ತಳಿಯ ಹತ್ತಿ ಬೆಳೆದು, ನಷ್ಟ ಅನುಭವಿಸಿದ ರೈತರಿಗೆ ನಷ್ಟ ಪರಿಹಾರ ನೀಡಬೇಕು. ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ರೈತರ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು” ಎಂದು ಒತ್ಥಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಗೌರವಾಧ್ಯಕ್ಷ ಮಾಜೀದ್ ಸಾಬ್, ಉಪಾಧ್ಯಕ್ಷ ವೀರೇಶ್ ಗೌಡ, ಹುಲಿಗೆಪ್ಪ ಜಾಲಬೆಂಚಿ, ನರಸರೆಡ್ಡಿ, ಮಲ್ಲಿಕಾರ್ಜುನ ರಮೇಶ ಶ್ರೀಧರ ತಿಮ್ಮಪ್ಪ ಸೇರಿದಂತೆ ರೈತರು ಭಾಗವಹಿಸಿದ್ದರು.