'ರೈತರು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯುತ್ತಿದ್ದಾರೆ. ಸರ್ಕಾರಗಳು ರೈತರಿಗೆ ಅವರ ಹಕ್ಕುಗಳನ್ನು ಮುಂಚಿತವಾಗಿ ನೀಡಬೇಕಲ್ಲವೇ. ಈ ರೀತಿ ಪದೇ ಪದೇ ರೈತರನ್ನು ರಸ್ತೆಗೆ ತರುವುದು ಸರಿಯಲ್ಲ'
ಹರಿಯಾಣ ರೈತರು ಮತ್ತೊಂದು ಆಂದೋಲನ ನಡೆಸಲು ಆರಂಭಿಸಿದ್ದರು. ಅವರ ಹೋರಾಟದ ಶಕ್ತಿಯನ್ನು ಕಂಡಿರುವ ಅಲ್ಲಿನ ಬಿಜೆಪಿ ಸರ್ಕಾರ, ಹೋರಾಟ ಆರಂಭವಾದ ಎರಡೇ ದಿನಗಳಲ್ಲಿ ರೈತರ ಬೇಡಿಕೆಗಳನ್ನು ಪೂರೈಸುವುದಾಗಿ ಒಪ್ಪಿಕೊಂಡಿದೆ. ಸೂರ್ಯಕಾಂತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ – ಕ್ವಿಂಟಾಲ್ಗೆ 6,400 ರೂ.) ನೀಡುವುದಾಗಿ ಘೋಷಿಸಿದೆ. ಅಲ್ಲದೆ, ಬಂಧನದಲ್ಲಿರುವ ರೈತರನನ್ಉ ಅಗತ್ಯ ಕ್ರಮಗಳನ್ನು ಮುಗಿಸಿದ ನಂತರ ಬಿಡುಗಡೆ ಮಾಡುವುದಾಗಿ ಹೇಳಿದೆ.
ಮತ್ತೊಮ್ಮೆ ರೈತರು ಗೆಲುವು ಸಾಧಿಸಿದ್ದಾರೆ. ಅವರ ಮುಂದೆ ಸರ್ಕಾರ ತಲೆ ಬಾಗಿದೆ. ಬಿಜೆಪಿ ಸರ್ಕಾರ ತಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂಬುದನ್ನು ತೋರಿಸಲು ಪದೇ-ಪದೇ ಹೆಣಗಾಡುತ್ತಿದೆ. ಆದರೆ, ದೇಶದ ರೈತರು ಬಿಜೆಪಿ ಸರ್ಕಾರವನ್ನು ಮಣಿಸುತ್ತಿದ್ದಾರೆ. ಪಟ್ಟು ಬಿಡದೆ ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ.
ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪಿಪ್ಲಿ ಬಳಿಯ ದೆಹಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೈತರು ಎರಡು ದಿನಗಳ ಹಿಂದೆ ಹೋರಾಟ ಆರಂಭಿಸಿದ್ದರು. ಬಿಸಿಲಿಗೂ ಲೆಕ್ಕಿಸದೇ ಎರಡು ದಿನಗಳ ಕಾಲ ರಸ್ತೆಯಲ್ಲಿ ಕುಳಿತಿದ್ದರು. ಇದೀಗ, ತಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ ಬಳಿಕ, ರೈತರು ನಗೆ ಬೀದಿದ್ದಾರೆ.
ಕುರುಕ್ಷೇತ್ರದ ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ಹೋರಾಟವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ. ತಮ್ಮ ಬೇಡಿಕೆಗಳು ಈಡೇರುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಂಡ ರೈತರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಇದೇ ವೇಳೆ, ಸ್ಥಳಕ್ಕೆ ಬಂದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಬದೌರಿಯಾ, ‘ಜೈಲಿನಲ್ಲಿರುವ ರೈತರನ್ನು ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್, “ಎಂಎಸ್ಪಿ ಆಧಾರದ ಮೇಲೆ ಸೂರ್ಯಕಾಂತಿಯನ್ನು ಖರೀದಿಸಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ದೇಶದ ಪ್ರಧಾನಿಯೂ ಎಂಎಸ್ಪಿ ಮೇಲೆಯೂ ಬೆಳೆಯನ್ನು ಖರೀದಿಸುವುದಾಗಿ ಘೋಷಿಸಿದ್ದರು. ನಾವು ಎಂಎಸ್ಪಿಗಾಗಿ ಇನ್ನೂ ಹೋರಾಟ ನಡೆಸುತ್ತೇವೆ. ಎಲ್ಲ ಬೆಳೆಗಳಿಗೆ ಎಂಎಸ್ಪಿ ಜಾರಿಯಾಗಲು ಮಹದ್ವತ ಆಂದೋಲನ ನಡೆಯುವ ಅಗತ್ಯವಿದೆ” ಎಂದು ಹೇಳಿದ್ದಾರೆ.
“ಇನ್ನು ಮುಂದೆ ಸೂರ್ಯಕಾಂತಿಗೆ ಎಂಎಸ್ಪಿ ದರ ಸಿಗುತ್ತದೆ. ಸಿಗದಿದ್ದರೆ ಮತ್ತೆ ರೈತರು ಇಲ್ಲಿಗೆ ಬರುತ್ತಾರೆ” ಎಂದು ಹೇಳಿದ್ದಾರೆ.
“ಎರಡು ದಿನಗಳಿಂದ 50 ಡಿಗ್ರಿ ತಾಪಮಾನದಲ್ಲಿ ರಸ್ತೆಯ ಮೇಲೆ ಕುಳಿತು ರೈತರು ಚಳುವಳಿ ನಡೆಸಿದ್ದಾರೆ. ಗೆದ್ದಿದ್ದಾರೆ. ಇದು ಸಂಸತದ ವಿಷಯ. ಆದರೆ ಇದು ಅಂತಿಮ ವಿಜಯವಲ್ಲ. ಎಂಎಸ್ಪಿ ಗ್ಯಾರಂಟಿ ಕಾಯ್ದೆಯನ್ನು ದೇಶದಲ್ಲಿ ಜಾರಿಗೆ ತಂದಾಗ ಮಾತ್ರ ನಮಗೆ ಅಂತಿಮ ಗೆಲುವು ಸಿಗುತ್ತದೆ” ಎಂದು ಪಂಜಾಬ್ನ ರೈತ ಮುಖಂಡ ಸುರ್ಜಿತ್ ಸಿಂಗ್ ಫೂಲ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ನನ್ನಂತಹ ಬಿಜೆಪಿ ಮುಖಂಡನಿಗೇ ರಕ್ಷಣೆ ಇಲ್ಲ, ಮತ್ತಾರು ಸುರಕ್ಷಿತರು: ಬಿಜೆಪಿಯ ಮುಸ್ಲಿಂ ನಾಯಕ
“ರೈತರು ಗೆದ್ದಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಖಟ್ಟರ್ ಅವರ ಉದ್ದೇಶವೇನು. ಅವರು ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಮೊದಲ ರೈತರಿಗೆ ಯಾಕೆ ಹಿಂಸೆ ಕೊಟ್ಟರು? ಬಿಸಿಲಿನ ತಾಪದಲ್ಲಿ ರಸ್ತೆಯ ಮೇಲೆ ರೈತರನ್ನು ಕುಳಿತುಕೊಳ್ಳುವಂತೆ ಯಾಕೆ ಮಾಡಿದರು? ಸಾಮಾನ್ಯ ಜನರಿಗೆ ಯಾಕೆ ಕಿರುಕುಳ ನೀಡಲಾಯಿತು? ಅಷ್ಟಕ್ಕೂ ಏನು ನಡೆಯುತ್ತಿದೆ? ಸರ್ಕಾರ ಗೊಂದಲದಲ್ಲಿದೆಯೇ ಅಥವಾ ರೈತರಿಗೆ ತೊಂದರೆ ಕೊಡಲು ಬಯಸಿದೆಯೇ?” ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಇಂದರ್ಜಿತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇಷ್ಟೆಲ್ಲ ಆದ ನಂತರವೂ ರೈತರು ತಮ್ಮ ತಾಳ್ಮೆ ಮತ್ತು ದೃಢಸಂಕಲ್ಪದಿಂದ ಹೋರಾಟ ನಡೆಸಿದರು. ಗೆದ್ದರು. ಮುಂದಿನ ಹೋರಾಟಕ್ಕೆ ಜಯ ಸಿಗಲಿದೆ ಎಂದರು. ಆದರೆ ಸರ್ಕಾರಗಳು ರೈತರಿಗೆ ಅವರ ಹಕ್ಕುಗಳನ್ನು ಮುಂಚಿತವಾಗಿ ನೀಡಬೇಕಲ್ಲವೇ. ಈ ರೀತಿ ಪದೇ ಪದೇ ರೈತರನ್ನು ರಸ್ತೆಗೆ ತರುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ಈ ಹೋರಾಟಕ್ಕೂ ಮುನ್ನ ಜೂನ್ 6ರಂದು ರೈತರು ಶಹಾಬಾದ್ನಲ್ಲಿ ಧರಣಿ ಆರಂಭಿಸಿದ್ದರು. ಹೋರಾಟನಿರತ ರೈತರ ಮೇಲೆ ಪೊಲೀಸರು ಲಾಠಿಜಾರ್ಜ್ ನಡೆಸಿದರು. ಗುರುನಾಮ್ ಸಿಂಗ್ ಸೇರಿದಂತೆ ಹಲವಾರು ರೈತ ಮುಖಂಡರನ್ನು ಬಂಧಿಸಿದರು. ಚಧುನಿ ಅವರನ್ನು 14 ದಿನಗಳ ಕಾಲ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದು ರೈತರನ್ನು ಕೆರಳಿಸಿತು. ರೈತರು ರಾಜ್ಯಾದ್ಯಂತ ರೈತರು ರಸ್ತೆ ತಡೆ ನಡೆಸಿದರು. ಇದಾದ, ಬಳಿಕ ಜೂನ್ 12ರಂದು ಜಂಟಿ ಮಹಾಪಂಚಾಯತ್ ಕರೆ ನೀಡಿದರು. ಹೆದ್ದಾರಿಯಲ್ಲಿಯೇ ಮಹಾಪಂಚಾಯತ್ ನಡೆಯಿತು. ಅಲ್ಲೇ ಹೋರಾಟವನ್ನೂ ಆರಂಭಿಸಿದರು. ಹೋರಾಟಕ್ಕೆ ಮಣಿದ ಸರ್ಕಾರ ಅಂತಿಮವಾಗಿ ಎಂಎಸ್ಪಿ ನೀಡುವುದಾಗಿ ಘೋಷಿಸಿದೆ. ಬಂಧಿತ ರೈತರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.