ಹಾಸನ ಪೆನ್ಡ್ರೈವ್ ವಿಚಾರದಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಯಾರು ಅಪರಾಧಿ ಇದ್ದಾರೋ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಆರ್.ಪಿ ವೆಂಕಟೇಶ ಮೂರ್ತಿ ಒತ್ತಾಯಿಸಿದ್ದಾರೆ.
ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಪ್ರಕರಣ ಗಂಭೀರವಾದದ್ದು. ಒಬ್ಬ ಅಸಹಾಯ ಮಹಿಳೆ ಇಂತಹ ಕೃತ್ಯವನ್ನ ನಿರಾಕರಿಸಿದರೂ, ಆಕೆಯನ್ನ ಬಲವಂತವಾಗಿ ತನ್ನ ಕಾಮವಾಂಚೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಆತನನ್ನ ಬಂಧಿಸಬೇಕು. ಪ್ರಕರಣದಲ್ಲಿ ಮೊದಲ ಸಾಕ್ಷ್ಯಯಾಗಿ ಬಿಜೆಪಿಯ ದೇವರಾಜೇಗೌಡ ಅವರನ್ನು ಪರಿಗಣಿಸಬೇಕು” ಎಂದು ಹೇಳಿದರು.
“’ಗೃಹ ಸಚಿವ ಅಮಿತ್ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದೆ. ಈ ವ್ಯಕ್ತಿಯ ಹಲವಾರು ವಿಡಿಯೋಗಳಿವೆ, ಆತನನ್ನ ಮೈತ್ರಿ ಅಭ್ಯರ್ಥಿ ಮಾಡಬೇಡಿ ಅಂತ ಹೇಳಿದ್ದೆ. ಆದರೂ, ಮೈತ್ರಿ ಮಾಡಿಕೊಂಡಿದ್ದಾರೆ’ ಅಂತ ದೇವರಾಜೇಗೌಡ ಹೇಳಿದ್ದರು. ಆತನ ಹೇಳಿರುವುದು ನಿಜವಾ? 2900ಕ್ಕೂ ಹೆಚ್ಚು ವಿಡಿಯೋಗಳಿವೆ ಎಂದು ದೇವರಾಜೇಗೌಡ ಹೇಳಿದ್ದಾರೆ. ಅದರಲ್ಲಿ, ಒಂದು ವಿಡಿಯೋ ಗಮನಿಸಿದರೆ, ಅದು ಅತ್ಯಾಚಾರ ಎಂಬುದು ಸ್ಪಷ್ಟವಾಗಿದೆ. ಆಕೆಯ ಸಮ್ಮತಿ ಇಲ್ಲದಿದ್ದರೂ, ಆಕೆಯ ಮೇಲೆ ದೌರ್ಜನ್ಯ ಎಸಲಾಗಿದೆ” ಎಂದು ವೆಂಕಟೇಶ ಮೂರ್ತಿ ಅರೋಪಿಸಿದರು.
“ಬಹಳ ಜನ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಕೋರ್ಟ್ನಲ್ಲಿ ಸ್ಟೇ ತಂದಿದ್ದಾರೆ ಎಂಬ ಕಾರಣಕ್ಕೆ ಅವರ ಹೆಸರನ್ನು ನಾನು ಹೇಳುತ್ತಿಲ್ಲ. ನನ್ನನ್ನ ಕೇಳೋರು ಯಾರು ಇಲ್ಲ ಎಂಬ ಅಹಃ ಇಂತಹ ಕೃತ್ಯಕ್ಕೆ ಕಾರಣ. ಆ ಮಹಿಳೆಯರ ಕುಟುಂಬವು ಈ ವಿಡಿಯೋಗಳನ್ನು ನೋಡಿದ್ರೆ, ಆ ಮಹಿಳೆಯರು ಮತ್ತು ಕುಟುಂಬದ ಪರಿಸ್ಥಿತಿ ಏನಾಗಬೇಕು” ಎಂದರು.
“ಕೆಲವರು ಸಮ್ಮತಿಯಿಂದಲೇ ಕೃತ್ಯದಲ್ಲಿ ಪಾಲ್ಗೊಂಡಿರಬಹುದು. ಆದರೆ, ಆ ಕೃತ್ಯವನ್ನ ತಾನೇ ವಿಡಿಯೋ ಮಾಡಿಕೊಂಡಿರುವುದು ವಿಕೃತಿ. ಬ್ಲಾಕ್ಮೇಲ್ ಮಾಡುವ ಉದ್ದೇಶದಿಂದ ಆತ ವಿಡಿಯೋ ಮಾಡಿಕೊಂಡಿದ್ದಾನಾ” ಎಂದು ಪ್ರಶ್ನಿಸಿದರು.