ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲೂಕಿನ ಮಳಲಿ ದೇವಸ್ಥಾನದ ಬಳಿ ನಡೆದಿದೆ.
ಯಸಳೂರು ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಶರತ್ ಹಲ್ಲೆಗೊಳಗಾಗಿರುವವರು. ಅವರನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾನ್ಸ್ಟೆಬಲ್ ಶರತ್ ಕಳೆದ ಜೂ.15ರಂದು ರಜೆ ಪಡೆದು ತಮ್ಮೂರು ಕುಂದೂರಿನ ಎಸ್.ಹೊನ್ನೇನಹಳ್ಳಿಗೆ ತೆರಳಿದ್ದರು. ಸ್ನೇಹಿತ ದೀಪಕ್ ಎಂಬುವವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಳಲಿ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ದೇವಸ್ಥಾನದ ಬಳಿಯಿರುವ ಸೋನಾ ಶ್ರೇಯ ಕನ್ವೆನ್ಷನ್ ಹಾಲ್ ಮುಂಭಾಗ ಚೇತನ್ ಎಂಬಾತ ಗುಂಪು ಕಟ್ಟಿಕೊಂಡು ಯುವಕನೊಬ್ಬನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದ. ಇದನ್ನು ಗಮನಿಸಿದ ಕಾನ್ಸ್ಟೆಬಲ್ ಶರತ್ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಆಗ ಕೋಪಗೊಂಡ ಚೇತನ್ ತನ್ನ ಸ್ನೇಹಿತರೊಂದಿಗೆ ಏಕಾಏಕಿ ಶರತ್ ಮೇಲೆ ಎರಗಿದ್ದಾನೆ.
ನಟರಾಜ ಎಂಬಾತ ಕಲ್ಲಿನಿಂದ ಶರತ್ ತಲೆಗೆ ಹೊಡೆದು, ಬಳಿಕ ಕಾರಿನಲ್ಲಿಟ್ಟಿದ್ದ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಶರತ್ ಯುವಕರಿಂದ ತಪ್ಪಿಸಿಕೊಂಡು ಕನ್ವೆನ್ಷನ್ ಹಾಲ್ ಒಳಗೆ ಓಡಿ ಹೋಗಿದ್ದಾರೆ. ಅಲ್ಲಿಗೂ ನುಗ್ಗಿದ ಈ ಪುಂಡರು ಮನಬಂದಂತೆ ಮಾರಕಾಸ್ತ್ರದಿಂದ ಶರತ್ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ವಿದ್ಯುತ್ ಸ್ಪರ್ಶಿಸಿ ಸಾವು; ಬಾಲಕನ ಮನೆಗೆ ಮಕ್ಕಳ ಹಕ್ಕುಗಳ ಆಯೋಗ ಭೇಟಿ
ಹಲ್ಲೆಗೊಳಗಾದ ಶರತ್ ತೀವ್ರ ರಕ್ತಸ್ರಾವಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಕರಣ ಸಂಬಂಧ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಪೇದೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರಕರಣ ಸಂಬಂಧ ಹೊಳೆನರಸೀಪುರ ನಗರ ಪೊಲೀಸರು ಮಿಥುನ್ ಮತ್ತು ಲೋಹಿತ್ ಎಂಬಾತನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಪೇದೆ ಶರತ್ ಮೇಲೆ ಮಾರಕಾಸ್ತ್ರ ಬೀಸಿ, ಪುಂಡಾಟ ಮೆರೆದಿದ್ದ ಪ್ರಮುಖ ಆರೋಪಿ ನಟರಾಜು ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.