ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯ ಚೆಲುವನಹಳ್ಳಿಯಲ್ಲಿ ಎರಡು ತಿಂಗಳಿಂದ ಕಾರ್ಮಿಕರಿಗೆ ಕೂಲಿ ಕೊಡದೆ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 19 ಮಂದಿ ಕಾರ್ಮಿಕರನ್ನು ರಕ್ಷಿಸಿದ್ದಾರೆ.
ಅಮಾನವೀಯ ಕೃತ್ಯ ಎಸಗಿರುವ ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ವಿರುದ್ಧ ಬಾಣಾವರ ಠಾಣೆಯಲ್ಲಿ ʼಜೀತ ಪದ್ಧತಿ ನಿರ್ಮೂಲನೆ ಕಾಯ್ದೆ’ಯಡಿ ಪ್ರಕರಣ ದಾಖಲಿಸಲಾಗಿದೆ.
ಮೇ 26ರಂದು ಉಪ ವಿಭಾಗಾಧಿಕಾರಿ ಕೃಪಾಲಿನಿ, ತಹಶೀಲ್ದಾರ್ ವಿದ್ಯಾ ವಿಭಾ ರಾಠೋಡ, ಕಂದಾಯ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ ಬಾಣಾವರ ಪೊಲೀಸರು, ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ, “ಕೂಲಿ ಕೊಡದೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ” ಎಂದು ಕಾರ್ಮಿಕರು ಅವಲತ್ತುಕೊಂಡಿದ್ದಾರೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸೀಕೆರೆಯ ಚಿತ್ರ ಸ್ಟುಡಿಯೊ ಮಾಲೀಕ ಮುನೇಶ್ ಮತ್ತು ಅನಿಲ್ ಎಂಬುವರನ್ನು ಬಂಧಿಸಲಾಗಿದೆ. ಮುನೇಶ್ ಈ ಹಿಂದೆಯೂ ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ನಂತರವೂ ಇದೇ ಕೆಲಸಕ್ಕೆ ಇಳಿದಿದ್ದಾನೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಗದಗ, ಬಳ್ಳಾರಿ, ಕಲಬುರಗಿ, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ಮಧುಗಿರಿ ಸೇರಿದಂತೆ ಹತ್ತಾರು ಭಾಗಗಳಿಂದ ಅರಸೀಕೆರೆಗೆ ರೈಲು ನಿಲ್ದಾಣಕ್ಕೆ ಬಂದಿದ್ದ 19 ಮಂದಿ ಕಾರ್ಮಿಕರನ್ನು ಭೇಟಿ ಮಾಡಿದ್ದ ಮುನೇಶ್, ಅನಿಲ್ ಎಂಬ ವ್ಯಕ್ತಿಯ ಸಹಾಯದಿಂದ ತಮ್ಮ ಜಮೀನಿಗೆ ಕರೆದುಕೊಂಡು ಬಂದಿದ್ದ. ದಿನಕ್ಕೆ ಎರಡು ಹೊತ್ತಿನ ಊಟ ಹಾಗೂ ಮದ್ಯ ನೀಡುತ್ತಿದ್ದ. ಆದರೆ ಸಂಬಳ ಕೊಡುತ್ತಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಕೂಲಿ ಕಾರ್ಮಿಕರ ಆಗ್ರಹ
ಎರಡು ತಿಂಗಳಿಂದ ಕಾರ್ಮಿಕರನ್ನು ಶೆಡ್ನಲ್ಲಿ ಇರಿಸಿಕೊಂಡಿದ್ದು, ಹೊರಗೆ ಹೋಗದಂತೆ ಬೇಲಿ ನಿರ್ಮಿಸಿದ್ದ. ನಿತ್ಯ ವಾಹನಗಳಲ್ಲಿ ಚನ್ನರಾಯಪಟ್ಟಣ, ಬಾಣಾವರ, ಅಣತಿ, ಕೆಂಬಾಳು ಸೇರಿದಂತೆ ಹಲವೆಡೆ ಕರೆದೊಯ್ದು ಶುಂಠಿ ಕೀಳುವ ಕೆಲಸ ಮಾಡಿಸುತ್ತಿದ್ದ. ಸಂಜೆ ಶೆಡ್ಗೆ ತಂದು ಬಿಡುತ್ತಿದ್ದ. ಈ ವಿಷಯವನ್ನು ತಿಳಿಸಲು ಕಾರ್ಮಿಕರ ಬಳಿ ಮೊಬೈಲ್ ಫೋನ್ ಕೂಡ ಇರಲಿಲ್ಲ. ಕಾರ್ಮಿಕರ ಬಳಿ ಇದ್ದ ಮೊಬೈಲ್ ಫೋನನ್ನು ಕಿತ್ತುಕೊಂಡಿದ್ದ. ಕೆಲಸ ಮಾಡುತ್ತಿದ್ದ ಹೊಲದಲ್ಲಿನ ಕೆಲವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
“ಕೆಲಸಕ್ಕೆ ಬಳಸುತ್ತಿದ್ದ ಎರಡು ಮಚ್ಚು ಮತ್ತು 10 ಪ್ಲಾಸ್ಟಿಕ್ ಬಕೆಟ್, 4 ಕಬ್ಬಿಣದ ಕುಂಟೇಣಿ ಹಾಗೂ ಒಂದು ವಾಹನವನ್ನು ವಶಕ್ಕೆ ಪಡೆಯಲಾಗಿದೆ” ಎಂದು ಹರಿರಾಂ ಶಂಕರ್ ತಿಳಿಸಿದ್ದಾರೆ.
“ಮುನೇಶ್ ವಿರುದ್ಧ ಈ ಹಿಂದೆಯೂ ಅರಸೀಕೆರೆ ಗ್ರಾಮಾಂತರ ಠಾಣೆ ಹಾಗೂ ದುದ್ದ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಆತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ” ಎಂದು ಹೇಳಿದ್ದಾರೆ.