ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಮಹತ್ವದ ರಾಜ್ಯಸಭೆಯ ಕಲಾಪದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಗೈರು ಹಾಜರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಎಚ್ ಡಿ ದೇವೇಗೌಡ, ‘ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಮಹತ್ವದ ಸಭೆ ಆಯೋಜಿಸಲಾಗಿತ್ತು. ಸೊಂಟ ನೋವಿನ ಹಿನ್ನೆಲೆಯಲ್ಲಿ ಬಹಳ ಹೊತ್ತು ಆ ಸಭೆಯಲ್ಲಿ ಭಾಗವಹಿಸಲಾಗಲಿಲ್ಲ. ಮಹತ್ವದ ಸಭೆಯಾಗಿದ್ದರಿಂದ ಹತ್ತು ನಿಮಿಷವಷ್ಟೇ ಸಭೆಯಲ್ಲಿ ಕೂತಿದ್ದೆ. ಆ ನಂತರ ವೈದ್ಯರಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿ ವಿಶ್ರಾಂತಿ ಪಡೆಯುತ್ತಿದ್ದೇನೆ. ನೋವು ಕಡಿಮೆಯಾದರೆ ಬುಧವಾರ ನಡೆಯಲಿರುವ ಕಲಾಪದಲ್ಲಿ ಭಾಗವಹಿಸಲು ಶ್ರಮಿಸುತ್ತೇನೆ’ ಎಂದು ತಿಳಿಸಿದ್ದಾರೆ.
ವಿವಾದಾತ್ಮಕ ದಿಲ್ಲಿ ಸೇವೆಗಳ ಮಸೂದೆಯನ್ನು ಸೋಮವಾರ ರಾಜ್ಯಸಭೆಯಲ್ಲಿ ಮತಕ್ಕೆ ಹಾಕಲಾಗಿತ್ತು. ಐದೂವರೆ ಗಂಟೆಗಳ ಕಾಲ ನಡೆದ ವಾಕ್ಸಮರದ ಬಳಿಕ ಮಸೂದೆ ಕೇಂದ್ರ ಸರ್ಕಾರದ ಪರವಾಗಿತ್ತು.
ಮತದಾನ ನಡೆಯಲಿದ್ದ ಹಿನ್ನೆಲೆಯಲ್ಲಿ ವಯೋ ಸಹಜ ಅನಾರೋಗ್ಯದ ನಡುವೆಯೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಸಭೆಗೆ ವೀಲ್ಚೇರ್ನಲ್ಲಿ ಬಂದು ಕಲಾಪದಲ್ಲಿ ಭಾಗವಹಿಸಿದ್ದರು. ಆದರೆ ಇದನ್ನು ಬಿಜೆಪಿ ಟೀಕೆ ಮಾಡಿ, ಟ್ವೀಟ್ ಮಾಡಿದೆ.
ಅನುಮಾನ: ವಿವಾದಾತ್ಮಕ ದಿಲ್ಲಿ ಸೇವೆಗಳ ಮಸೂದೆಯನ್ನು ರಾಜ್ಯಸಭೆಯಲ್ಲಿ ಸೋಮವಾರ ಮತಕ್ಕೆ ಹಾಕಲಾಗಿತ್ತು. ಈ ಮಸೂದೆಯ ಪರವಿರುವುದು ಎನ್ಡಿಎ ಬೆಂಬಲಿಸಿದಂತಾಗುತ್ತದೆ, ವಿರೋಧಿಸುವುದು ಇಂಡಿಯಾ ಒಕ್ಕೂಟಗಳೊಂದಿಗೆ ಗುರುತಿಸಿಕೊಂಡಂತಾಗುತ್ತದೆ. ದೇವೇಗೌಡರು ಆರೋಗ್ಯದ ನೆಪ ಹೇಳಿ ಭಾಗವಹಿಸದಿರುವುದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ರಾಜಕೀಯ ನಾಯಕರು ಹೇಳುತ್ತಿದ್ದಾರೆ.