ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಳೆದ ಕೆಲವು ದಿನಗಳಿಂದ ವರ್ಗಾವಣೆ ದಂಧೆ ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ನಾನು ದಾಖಲೆ ಇಲ್ಲದೆ ಸುಮ್ಮನೆ ಆರೋಪ ಮಾಡಿಲ್ಲ ಎಂದು ಜೇಬಿನಿಂದ ಪೆನ್ಡ್ರೈವ್ ತೆಗೆದು ಸುದ್ದಿಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಜೇಬಿನಿಂದ ಪೆನ್ ಡ್ರೈವ್ ತೆಗೆದು, “ಇದರಲ್ಲಿ ಎಲ್ಲ ದಾಖಲೆ ಇದೆ. ಸರಿಯಾದ ಸಮಯಕ್ಕೆ ರಿವಿಲ್ ಮಾಡ್ತೀನಿ. ನಾನು ಸುಮ್ ಸುಮ್ನೇ ಚರ್ಚೆ ಮಾಡುವುದಿಲ್ಲ. ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡಿದ್ದೀನಿ” ಎಂದು ಎಚ್ಚರಿಕೆ ನೀಡಿದ್ದಾರೆ.
“ಇಂಧನ ಇಲಾಖೆಯಲ್ಲಿ ಹತ್ತು ಕೋಟಿಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ ಒಂದು ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ” ಎಂದು ಆರೋಪಿಸಿದ್ದಾರೆ.
“ನಿನ್ನೆ ಮಂಡ್ಯದಲ್ಲಿ ವರ್ಗಾವಣೆ ಆಗಿದಿಯಲ್ಲ. ತನಿಖೆಯಾದವರನ್ನು ಸಸ್ಪೆಂಡ್ ಆದವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಲಾಟರಿ ದಂಧೆ ನಡೆಸಿದವರನ್ನು ಮನೆಗೆ ಕಳುಹಿಸಿದವನು ನಾನು” ಎಂದರು.
“ನನ್ನ ವಿರುದ್ಧ ಮಾತನಾಡಲು ನಮ್ಮಿಂದ ಬೆಳೆದವರನ್ನೇ ಬಳಸಿಕೊಳ್ಳುತ್ತಿದ್ದಾರೆ. ನಮ್ಮಿಂದ ಬೆಳೆದವರು ಈಗ ನಮ್ಮ ಬಗ್ಗೆಯೇ ಮಾತನಾಡುತ್ತಿದ್ದಾರೆ. ವರ್ಗಾವಣೆ ದಂಧೆಗೆ ಸಂಬಂಧಿಸಿದ ಪೆನ್ ಡ್ರೈವ್ ಇದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಿಗದಿತ ಸಮಯಕ್ಕೆ ಸದನಕ್ಕೆ ಬಂದವರಿಗೆ ಬಹುಮಾನ ಘೋಷಿಸಿದ ಸ್ಪೀಕರ್ ಯು ಟಿ ಖಾದರ್
“ಈ ಸರ್ಕಾರದಲ್ಲಿ ನಗದು ಅಭಿವೃದ್ಧಿ ಇಲಾಖೆ ಎಂದು ಯಾರೋ ಹೇಳಿದ್ದರು. ಹಾಗಾಗಿ ನಾನು ಹೇಳಿದೆ, ನಗರಾಭಿವೃದ್ಧಿ ಇಲಾಖೆ ಬಗ್ಗೆ ಗೊತ್ತು. ನಗದು ಅಭಿವೃದ್ಧಿ ಇಲಾಖೆ ಯಾವುದು ಎಂದು ಅರ್ಥವಾಗಲಿಲ್ಲ. ಯಾಕೆ ಹೀಗೆ ಕರೆಯುತ್ತಿದ್ದಾರೆ ಎಂದು ನನಗೆ ಆಮೇಲೆ ಗೊತ್ತಾಯಿತು. ನಗರಾಭಿವೃದ್ಧಿ ಇಲಾಖೆ ಅಲ್ಲ ನಗದು ಅಭಿವೃದ್ಧಿ ಇಲಾಖೆ” ಎಂದು ಟೀಕಿಸಿದರು.
ಪೆನ್ಡ್ರೈವ್ನಲ್ಲಿ ಏನಿದೆ?
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರದರ್ಶಿಸಿದ ಪೆನ್ಡ್ರೈವ್ನಲ್ಲಿ ಕಾಂಗ್ರೆಸ್ ಸರ್ಕಾರದ ಹಿರಿಯ ಸಚಿವರೊಬ್ಬರು 30 ಲಕ್ಷ ರೂಪಾಯಿ ಲಂಚ ಕೇಳಿರುವ ಆಡಿಯೋ ಇದೆ ಎನ್ನಲಾಗಿದೆ. ಸರ್ಕಾರದ ಹಿರಿಯ ಸಚಿವರ ಆಡಿಯೋ ಎನ್ನಲಾಗಿದೆ.