- ಬಹಿರಂಗ ಚುನಾವಣಾ ಪ್ರಚಾರಕ್ಕೆ ಅಧಿಕೃತ ತೆರೆ
- ಕೊನೆ ಕ್ಷಣದ ಮತಯಾಚನೆ ನಡೆಸಿದ ನಾಯಕರು
ರಾಜ್ಯ ರಾಜಕೀಯದ ಹೊಸ ಪರ್ವ ಆರಂಭಕ್ಕಾಗಿನ ಗುದ್ದುಗೆ ಗುದ್ದಾಟದ ಕೊನೆ ಅಂಕಕ್ಕೆ ಭಾವುಕ ತೆರೆ ಬಿದ್ದಿದೆ. ಚುನಾವಣಾ ಆಯೋಗ ನಿಗದಿ ಪಡಿಸಿದಂತೆ ಮೇ 8ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.
ಈ ಕ್ಷಣ ಆರಂಭವಾಗುವುದಕ್ಕೂ ಮೊದಲು ಹಾಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಹಾಗೂ ಭವಿಷ್ಯದ ಸಿಎಂ ಎಂದೇ ಬಿಂಬಿತರಾದ ಡಿಕೆ ಶಿವಕುಮಾರ್ ತಮ್ಮ ತಮ್ಮ ಸ್ವಕೇತ್ರಗಳಲ್ಲಿ ಮತಯಾಚನೆ ಮಾಡಿದರು.
ಮೂವರೂ ನಾಯಕರು ಬಹಿರಂಗ ಚುನಾವಣಾ ಪ್ರಚಾರದ ಕೊನೆ ಭಾಷಣಗಳನ್ನು ಭಾವುಕವಾಗಿಯೇ ಮಾಡುವ ಮೂಲಕ ಜನರ ಮನಗೆಲ್ಲಲು ಪ್ರಯತ್ನಿಸಿದರು.
ತವರು ಕ್ಷೇತ್ರ ಕನಕಪುರದ ಮೇಲೆ ವಿಪರೀತ ವ್ಯಾಮೋಹ ಹೊಂದಿರುವ ಡಿ ಕೆ ಶಿವಕುಮಾರ್ ಇದೇ ಮೊದಲ ಬಾರಿ ಕೊನೆಯ ಒಂದೇ ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಜನರ ಬಳಿ ಕೈ ಮುಗಿದು ಮತ ಕೇಳಿದ ಅವರು ನಮ್ಮ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿ ಅಧಿಕಾರಕ್ಕೆ ಕೂರಿಸಿ, ನೀವು ನಮಗೆ ಹೊರಿಸಿರುವ ಜವಾಬ್ದಾರಿಯನ್ನು ಸಾಂಗವಾಗಿ ನೆರವೇರಿಸಿಕೊಡುತ್ತೇವೆ ಎಂದು ಕೇಳಿಕೊಂಡರು.
ಇನ್ನು ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿದ ಎಚ್ ಡಿ ಕುಮಾರಸ್ವಾಮಿ, ಉಸಿರಿರೋವರೆಗೂ ನಾನು ಚನ್ನಪಟ್ಟಣದ ಮಗ, ನಂತರ ನನ್ನ ದೇಹವೂ ಇಲ್ಲೇ ಮಣ್ಣಾಗಲಿದೆ ಎಂದು ಭಾವನಾತ್ಮಕವಾಗಿ ಜನರ ಮನ ಗೆಲ್ಲಲು ಮುಂದಾದರು.
ನಮ್ಮ ಕುಟುಂಬವನ್ನು ಕೈ ಹಿಡಿದು ನಡೆಸಿದ್ದು ರಾಮನಗರ ಚನ್ನಪಟ್ಟಣ ಕ್ಷೇತ್ರಗಳು, ನಾನು ಸಿಎಂ ಆದರೆ ಇವೆರಡನ್ನೂ ಅವಳಿ ನಗರಗಳನ್ನಾಗಿ ಮಾಡಿ ಮಾದರಿ ಕ್ಷೇತ್ರ ಮಾಡುವೆ. ನನ್ನನ್ನು ಮುಖ್ಯಮಂತ್ರಿಯನ್ನಾಗಿಸುವುದೂ ಬಿಡುವುದು ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.
ಇವರ ನಡುವೆ ಭಿನ್ನತೆ ಮೆರೆದ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಕೊನೆ ಪ್ರಚಾರ ಕಾರ್ಯವನ್ನು ನಂಜನಗೂಡು ಅಭ್ಯರ್ಥಿ ದರ್ಶನ್ ಧ್ರುವನಾರಾಣ್ ಪರ ನಡೆಸಿದರು. ಯುವ ನಾಯಕನ ಅಗತ್ಯತೆಯನ್ನು ಕ್ಷೇತ್ರದ ಜನರಿಗೆ ಮನದಟ್ಟು ಮಾಡಿ ಆಶೀರ್ವದಿಸುವಂತೆ ಕೋರಿಕೊಂಡರು.
ಈ ಸುದ್ದಿ ಓದಿದ್ದೀರಾ? : ಪಕ್ಷಾಂತರಿಗಳಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ತಿರಸ್ಕರಿಸಬೇಕು
ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಮತಯಾಚನೆ ಮಾಡಿ ಕ್ಷೇತ್ರದ ಜನರಲ್ಲಿ ಮನವಿ ಮಾಡಿ, ಪಕ್ಷ ಹಾಗೂ ತಮ್ಮನ್ನು ಆಶೀರ್ವದಿಸಿ ಮತ್ತೊಂದು ಅವಧಿಗೆ ಅಧಿಕಾರ ನಡೆಸಲು ಅನುವು ಮಾಡಿಕೊಡುವಂತೆ ಕೋರಿಕೊಂಡರು.
ಹೀಗೆ ಮೂವರೂ ನಾಯಕರು ತಮ್ಮ ತಮ್ಮ ಜವಾಬ್ಧಾರಿ ಜೊತೆ ಪಕ್ಷ ಗೆಲ್ಲಿಸುವ ಹೊಣೆ ಹೊತ್ತು, ಮತದಾರ ಪ್ರಭುವಿನೆದುರು ನಡು ಬಗ್ಗಿಸಿ ಮತಯಾಚನೆ ಮಾಡಿದರು.