- ಆಂಧ್ರ ಪ್ರದೇಶದಲ್ಲಿ ಗರಿಷ್ಠ 42.2 ಡಿಗ್ರಿ ಸೆಲ್ಸಿಯಸ್ ಶಾಖದ ಅಲೆಗಳು
- ಅಧಿಕ ಬೇಸಗೆಯಿಂದ ರಾಜ್ಯದಲ್ಲಿ ಬಿರುಗಾಳಿ ಸಾಧ್ಯತೆಯ ಎಚ್ಚರಿಕೆ
ಆಂಧ್ರ ಪ್ರದೇಶದಾದ್ಯಂತ ಮುಂದಿನ ಮೂರು ದಿನ ಬಿರು ಬೇಸಗೆಯ ಶಾಖದ ಅಲೆಗಳು ಹರಡಲಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಪಿಎಸ್ಡಿಎಂಎ) ವ್ಯವಸ್ಥಾಪಕ ನಿರ್ದೇಶಕ ಬಿ ಆರ್ ಅಂಬೇಡ್ಕರ್ ಹೇಳಿದ್ದಾರೆ.
ರಾಜ್ಯದ 136 ಪ್ರದೇಶಗಳು ಭಾನುವಾರ (ಮೇ 14) ಬೇಸಗೆಯ ಶಾಖದ ಅಲೆಗಳನ್ನು ಕಾಣಲಿವೆ. ಸೋಮವಾರ (ಮೇ 15) 153 ಪ್ರದೇಶಗಳಲ್ಲಿ ಶಾಖದ ಅಲೆಗಳು ಇರಲಿವೆ ಎಂದು ಅವರು ಹೇಳಿದ್ದಾರೆ.
ನಂದ್ಯಾಲ ಜಿಲ್ಲೆಯ ಗೋಸ್ಪಾಡು ಪ್ರದೇಶದಲ್ಲಿ ಶನಿವಾರ ಗರಿಷ್ಠ ತಾಪಮಾನ 42.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ವೇಳೆ ಪೂರ್ವ ಗೋದಾವರಿ ಜಿಲ್ಲೆಯ ರಾಜನಗರಂ ಮತ್ತು ಸೀತಾನಗರಂ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 41.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸುಡು ಬೇಸಿಗೆಯ ಸ್ಥಿತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಸಿಲಿನ ತಾಪಕ್ಕೆ ನಲುಗಿರುವ ಆಂಧ್ರ ಪ್ರದೇಶ ಜಿಲ್ಲೆಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೆಚ್ಚು ತಾಪಮಾನದ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಂಬೇಡ್ಕರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ಸೇರಿ 67 ಮಂದಿ ಬಡ್ತಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್
ಆಂಧ್ರ ಪ್ರದೇಶ ಸರ್ಕಾರ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಸ್ಥಾಪಿಸಿರುವ ಉಚಿತ ಸಂಖ್ಯೆಗಳಾದ 1070, 112 ಮತ್ತು 18004250101 ಗಳಿಗೆ ಸಂಪರ್ಕಿಸಿ ಜನರು ತಮ್ಮ ಪ್ರದೇಶಗಳಲ್ಲಿ ಬೇಸಿಗೆಯ ತಾಪಮಾನ ತೀವ್ರತೆ ಮತ್ತು ಇತರ ವಿವರಗಳನ್ನು ತಿಳಿದುಕೊಳ್ಳಬಹುದು ಎಂದು ಅಂಬೇಡ್ಕರ್ ಮಾಹಿತಿ ನೀಡಿದರು.
ಹೆಚ್ಚಿನ ಬೇಸಿಗೆಯಿಂದ ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಉಂಟಾಗಬಹುದು. ಕೆಲವು ಪ್ರದೇಶಗಳಲ್ಲಿ ಗುಡುಗು, ಇನ್ನೂ ಕೆಲವಲ್ಲಿ ಗುಡುಗು ಸಹಿತ ಮಳೆ ಉಂಟಾಗುವ ಸಾಧ್ಯತೆ ಇದೆ. ಈ ವೇಳೆ ಕುರಿಗಾಹಿಗಳು, ಗೋಪಾಲಕರು ಮತ್ತು ಕಾರ್ಮಿಕರು ಮರದ ಕೆಳಗೆ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.