ಹಿಂದಿ ಚಿತ್ರರಂಗದವರು ಬಾಲಿವುಡ್ ಎನ್ನುವುದನ್ನು ನಿಲ್ಲಿಸಬೇಕು
ನಾನು ಯಾವ ʼವುಡ್ʼನ ಅಭಿಮಾನಿಯೂ ಅಲ್ಲ ಎಂದ ಮಣಿರತ್ನಂ
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ಚಿತ್ರಗಳನ್ನು ಬಾಲಿವುಡ್ ಸಿನಿಮಾ ಎಂದು ಗುರುತಿಸುತ್ತಿರುವ ಬಗ್ಗೆ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್ ಮಾತ್ರವಲ್ಲ, ಹಿಂದಿ ಚಿತ್ರರಂಗದವರು ತಮ್ಮನ್ನು ತಾವು ಬಾಲಿವುಡ್ನವರು ಎಂದು ಗುರುತಿಸಿಕೊಳ್ಳುವುದನ್ನು ನಿಲ್ಲಿಸಬೇಕು” ಎಂದು ಎಚ್ಚರಿಸಿದ್ದಾರೆ.
ʼಪೊನ್ನಿಯನ್ ಸೆಲ್ವನ್-2ʼ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಮಣಿರತ್ನಂ, ಏಪ್ರಿಲ್ 19ರಂದು ಚೆನ್ನೈನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗಯಾಗಿದ್ದರು. ಅವರ ಜೊತೆಗೆ ದಕ್ಷಿಣ ಸಿನಿ ರಂಗದ ಖ್ಯಾತ ನಿರ್ದೇಶಕರಾದ ವೆಟ್ರಿಮಾರನ್, ಬಾಸಿಲ್ ಜೋಸೆಫ್, ರಿಷಬ್ ಶೆಟ್ಟಿ ಕೂಡ ಸಂವಾದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಜಗತ್ತಿನ ಮೇಲೆ ದಕ್ಷಿಣದ ಸಿನಿಮಾಗಳು ಬೀರಿದ ಪ್ರಭಾವದ ಕುರಿತು ಮಣಿರತ್ನಂ ಮಾತನಾಡಿದ್ದಾರೆ. ಇದೇ ವೇಳೆ, “ಹಿಂದಿ ಚಿತ್ರರಂಗದವರು ತಮ್ಮನ್ನು ತಾವು ಬಾಲಿವುಡ್ನವರು ಎಂದು ಹೇಳಿಕೊಳ್ಳುವುದನ್ನು ನಿಲ್ಲಿಸದಾಗಲೇ ವಿದೇಶಿಗರಿಗೆ ಬಾಲಿವುಡ್ ಎಂದರೆ ಭಾರತೀಯ ಸಿನಿಮಾ ಅಲ್ಲ ಎಂಬ ಸ್ಪಷ್ಟತೆ ಸಿಗುತ್ತದೆ. ನಾನು ಬಾಲಿವುಡ್, ಕಾಲಿವುಡ್, ಯಾವುದೇ ವುಡ್ಗಳ ಅಭಿಮಾನಿಯೂ ಅಲ್ಲ. ನಾವು ಎಲ್ಲ ಚಿತ್ರರಂಗಗಳನ್ನು ಒಟ್ಟಾಗಿ ಭಾರತೀಯ ಸಿನಿಮಾ ಎಂಬಂತೆ ಕಾಣುವ ಅಗತ್ಯವಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಖಾಸಗಿ ತನಕ್ಕೆ ಧಕ್ಕೆ : ದೆಹಲಿ ಹೈಕೋರ್ಟ್ ಮೊರೆ ಹೋದ ಆರಾಧ್ಯ ಬಚ್ಚನ್
ತೆಲುಗಿನ ʼಆರ್ಆರ್ಆರ್ʼ ಸಿನಿಮಾ ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಗೆದ್ದಾಗ ವೇದಿಕೆಯ ಮೇಲಿದ್ದ ನಿರೂಪಕ ಜಿಮ್ಮಿ ಕಿಮ್ಮೆಲ್ ʼಆರ್ಆರ್ಆರ್ʼ ಬಾಲಿವುಡ್ ಸಿನಿಮಾ ಎಂದು ಘೋಷಿಸಿದ್ದರು. ಜಿಮ್ಮಿ ಅವರ ಈ ಹೇಳಿಕೆ ಭಾರತೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಸಂದರ್ಶಿಸಿದ್ದ ಅಮೆರಿಕನ್ ಮಾಧ್ಯಮದ ನಿರೂಪಕನೂ ʼಆರ್ಆರ್ಆರ್ʼ ಬಾಲಿವುಡ್ ಸಿನಿಮಾ ಎಂದಿದ್ದರು. ಆತನ ಮಾತನ್ನು ತಿದ್ದಲು ಯತ್ನಿಸಿದ್ದ ಭಾರತ ಮೂಲದ ಪ್ರಿಯಾಂಕಾ ಚೋಪ್ರಾ, ʼಆರ್ಆರ್ಆರ್ʼ ಬಾಲಿವುಡ್ ಚಿತ್ರವಲ್ಲ ಅದು ತಮಿಳಿನ ಸಿನಿಮಾ ಎಂದು ಟ್ರೋಲ್ಗೆ ಒಳಗಾಗಿದ್ದರು. ಕನ್ನಡ ಮೂಲದ ʼಕೆಜಿಎಫ್ʼ ಚಿತ್ರವನ್ನು ಕೂಡ ಇದೇ ರೀತಿಯಲ್ಲಿ ಬಾಲಿವುಡ್ ಚಿತ್ರ ಎಂದು ಬಿಂಬಿಸಲಾಗಿತ್ತು.