ಖಾನೌರಿ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರೈತರೊಬ್ಬರು ಹತ್ಯೆಯಾಗಿದ್ದು, ಅವರ ಸಾವಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಇತಿಹಾಸವು ಖಂಡಿತವಾಗಿಯೂ ಬಿಜೆಪಿಯಿಂದ ರೈತರ ಹತ್ಯೆಗಳ ಉತ್ತರ ಕೇಳುತ್ತದೆ ಎಂದು ಹೇಳಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ರೈತರ ಜೀವ ಉಳಿಸದಿದ್ದಾಗ ಭಾರತವು ಹೇಗೆ ಮೌನವಾಗಿರುತ್ತದೆ? ಖಾನೌರಿ ಗಡಿಯಲ್ಲಿ ಗುಂಡಿನ ದಾಳಿಗೆ ಬಟಿಂಡಾದ ಯುವ ರೈತ ಶುಭಕರನ್ ಸಿಂಗ್ ಸಾವನ್ನಪ್ಪಿರುವುದು ನೋವು ತಂದಿದೆ” ಎಂದಿದ್ದಾರೆ.
“ಮೋದಿ ಸರ್ಕಾರವು – ಮೊದಲು 750 ರೈತರ ಜೀವಗಳನ್ನು ಬಲಿ ತೆಗೆದುಕೊಂಡಿತು. ಮೋದಿ ಸಂಪುಟದ ಸಚಿವರ ಮಗ ಲಖೀಂಪುರದಲ್ಲಿ ರೈತರನ್ನು ಮೇಲೆ ಕಾರು ಹರಿಸಿದನು. ಮಧ್ಯಪ್ರದೇಶದ ಮಂದಸೌರ್ನಲ್ಲಿಯೂ ಸಹ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಂಡಿನ ದಾಳಿಗೆ ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ನೆನಪಿಸಬೇಕಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ಮೋದಿಜೀ ಅವರೇ ರೈತರನ್ನು ಆಂದೋಲಂಜೀವಿ ಮತ್ತು ಪರ್ಜೀವಿ (ಪರಾವಲಂಬಿಗಳು) ಎಂದು ಕರೆದಿದ್ದಾರೆ. 10 ವರ್ಷಗಳ ಬಿಜೆಪಿ ಆಡಳಿತ ರೈತರಿಗೆ ಬೆನ್ನಿಗೆ ದೊಣ್ಣೆಯಿಂದ ಹೊಡೆಯುತ್ತಿದೆ. ಹೊಟ್ಟೆಗೆ ಒದೆಯುವಂತಿದೆ. ಮೋದಿಯವರಿಗೆ ನಾಚಿಕೆಯಾಗಬೇಕು” ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಕೂಡ ಪೋಸ್ಟ್ ಮಾಡಿದ್ದು, “ಪ್ರಧಾನಿ ನರೇಂದ್ರ ಮೋದಿಯವರ ದುರಹಂಕಾರವು ಕಳೆದ ಬಾರಿ 700 ರೈತರ ಜೀವ ತೆಗೆದುಕೊಂಡಿತು. ಸರ್ಕಾರ ಈಗ ಮತ್ತೆ ರೈತರ ಶತ್ರುವಾಗಿದೆ. ಖಾನೌರಿ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಯುವ ರೈತ ಶುಭಕರನ್ ಸಿಂಗ್ ಸಾವಿನ ಸುದ್ದಿ ಹೃದಯವಿದ್ರಾವಕವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪವಿದೆ” ಎಂದು ಹೇಳಿದ್ದಾರೆ..
ಸ್ನೇಹಿ ಮಾಧ್ಯಮಗಳ ಹಿಂದೆ ಅಡಗಿರುವ ಬಿಜೆಪಿಯಿಂದ ಮುಂದೊಂದು ದಿನ ಇತಿಹಾಸ ಖಂಡಿತಾ ‘ರೈತರ ಹತ್ಯೆ’ಯ ಉತ್ತರ ಕೇಳುತ್ತದೆ,” ಎಂದಿರುವ ಅವರು ‘#FarmerLivesMatter’ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಪೋಸ್ಟ್ ಮಾಡಿದ್ದಾರೆ.
खनौरी बॉर्डर पर युवा किसान शुभकरण सिंह की फायरिंग में मौत की खबर हृदयविदारक है, मेरी संवेदनाएं उनके परिवार के साथ हैं।
पिछली बार 700 से अधिक किसानों का बलिदान लेकर ही माना था मोदी का अहंकार, अब वो फिर से उनकी जान का दुश्मन बन गया है।
मित्र मीडिया के पीछे छिपी भाजपा से एक दिन… pic.twitter.com/Gq8igo757S
— Rahul Gandhi (@RahulGandhi) February 21, 2024
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಒಂದೆಡೆ ಬಂಡವಾಳಶಾಹಿಗಳೊಂದಿಗೆ ಸ್ನೇಹ, ಮತ್ತೊಂದೆಡೆ ರೈತರಿಗೆ ದ್ರೋಹ” ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಂಭು ಮತ್ತು ಖಾನೌರಿಯಲ್ಲಿ ಬ್ಯಾರಿಕೇಡ್ಗಳನ್ನು ಭೇದಿಸಿ ದೆಹಲಿಯತ್ತ ನಡೆಯಲು ರೈತರು ಪ್ರಯತ್ನಿಸಿದ್ದು, ಅವರನ್ನು ತಡೆಯಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್ಗಳು ಮತ್ತು ರಬ್ಬರ್ ಬುಲೆಟ್ಗಳನ್ನು ಹಾರಿಸಿದ್ದಾರೆ. ಈ ವೇಳೆ, ಒಬ್ಬ ರೈತ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ.
ರೈತ ಹೋರಾಟವನ್ನು ತಡೆಯಲು ಸರ್ಕಾರ ರೈತರೊಂದಿಗೆ 4ನೇ ಸುತ್ತಿನ ಮಾತುಕತೆ ನಡೆಸಿದೆ. ಆದರೆ, ಸರ್ಕಾರದ ಪ್ರಸ್ತಾಪವನ್ನು ರೈತ ಮುಖಂಡರು ತಿರಸ್ಕಾರಿಸಿದ್ದಾರೆ. ಪಂಜಾಬ್-ಹರಿಯಾಣ ಗಡಿಯಲ್ಲಿ ಮೊಕ್ಕಾಂ ಹೂಡಿರುವ ರೈತರು ಹೋರಾಟವನ್ನು ಮುಂದುವರೆಸುತ್ತೇವೆ. ದೆಹಲಿ ಚಲೋ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರವನ್ನು ಒತ್ತಾಯಿಸಲು ರೈತರು ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳು, ಮಿನಿ-ವ್ಯಾನ್ಗಳು ಮತ್ತು ಪಿಕಪ್ಗಳೊಂದಿಗೆ ಫೆಬ್ರವರಿ 13ರಿಂದ ಗಡಿ ಭಾಗಗಳಲ್ಲಿ ಮೊಕ್ಕಾಂ ಹೂಡುತ್ತಿದ್ದಾರೆ.