ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತನಿಖಾ ತಂಡಗಳು ಜನವರಿ ಮತ್ತು ಜೂನ್ ನಡುವೆ ಸಾರಿಗೆ ಬಸ್ಸುಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ 21,034 ಪ್ರಯಾಣಿಕರಿಂದ 20.19 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಸಾರಿಗೆ ನಿಗಮ ಹೇಳಿದೆ.
ಹುಬ್ಬಳ್ಳಿಯಲ್ಲಿ ವಾಕರಸಾ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಹುದ್ದಾರ ಅವರು ತನಿಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. “ವಾಕರಸಾ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳ 9 ಸಾರಿಗೆ ವಿಭಾಗಗಳು ಹಾಗೂ ಕೇಂದ್ರ ಕಚೇರಿಯ ತನಿಖಾ ಸಿಬ್ಬಂದಿಗಳು ಜನವರಿಯಿಂದ ಜೂನ್ ಅವಧಿಯಲ್ಲಿ 1,00,778 ತನಿಖೆಗಳನ್ನು ನಡೆಸಿದ್ದಾರೆ. ಟಿಕೆಟ್ ರಹಿತ ಪ್ರಯಾಣ ಮಾಡಿದ 21,034 ಪ್ರಯಾಣಿಕರಿಂದ 20,19,459 ರೂ. ದಂಡ ವಸೂಲಿ ಮಾಡಿದ್ದಾರೆ” ಎಂದು ತಿಳಿಸಿದರು.
“ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವುದು. ಚಾಲನಾ ಸಿಬ್ಬಂದಿಗಳಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ತನಿಖಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ತನಿಖಾಧಿಕಾರಿಗಳು ಸಾರಿಗೆ ಆದಾಯ ಸೋರಿಕೆ ತಡೆಗಟ್ಟಲು ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು” ಎಂದರು.
ಸಭೆಯಲ್ಲಿ ಉಪ ಮುಖ್ಯ ಸಂಚಾರ ಸ್ಥಾಪಕ ಎಚ್. ರಾಮನಗೌಡರ ಮಾತನಾಡಿ, “ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳೆಯರು ಸೇರಿದಂತೆ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಿಗಧಿತ ನಿಲುಗಡೆಗಳಲ್ಲಿ ಕಡ್ಡಾಯವಾಗಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ-ಹತ್ತಿಸಿಕೊಂಡು ಹೋಗಬೇಕು. ಪ್ರಯಾಣಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕು. ಸುರಕ್ಷಿತ ಕ್ರಮಗಳ ಪಾಲನೆಯ ಬಗ್ಗೆ ಚಾಲನಾ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕು” ಎಂದರು.
ಉತ್ತಮ ಸಾಧನೆ ಮಾಡಿದ ತನಿಖಾ ಸಿಬ್ಬಂದಿ ಬಸವಂತಪ್ಪ ತಳ್ಳಳ್ಳಿ, ಈಶಪ್ಪ ಪಟ್ಟಣಶೆಟ್ಟಿ, ಭೀಮಪ್ಪ ದಾನಪ್ಪಗೋಳ, ಅಮರನಾಥ ಕುಂಟೋಜಿ, ರಾಜೇಶ ಮನಸೂರ ಹಾಗೂ ಗೋವಿಂದ ಲಮಾಣಿ ಹಾಗೂ ಚಾಲಕರಾದ ಹುಸೇನ್ ಸಾಬ್ ಮುಲ್ಲಾನವರ ಮತ್ತು ಅಶೋಕ ಶಿವಶರಣ ಅವರಿಗೆ ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.