ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದ ಆರೋಪಿಯಾಗಿರುವ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ದೆಹಲಿ ನ್ಯಾಯಾಲಯದಲ್ಲಿ ”ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಪ್ರಕರಣ ಸಂಬಂಧ ಬುಧವಾರ(ಆಗಸ್ಟ್ 10) ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಬ್ರಿಜ್ ಭೂಷಣ್ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ನಿರಾಕರಿಸಿ ವಕೀಲರ ಮೂಲಕ ವಾದವನ್ನು ಮಂಡಿಸಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ಪರ ಹಿರಿಯ ವಕೀಲ ರಾಜೀವ್ ಮೋಹನ್ ವಕಾಲತ್ತು ವಹಿಸಿದ್ದಾರೆ.
ನ್ಯಾಯಮೂರ್ತಿ ಹರ್ಜಿತ್ಸಿಂಗ್ ಜಸ್ಬಾಲ್ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ. ಕುಸ್ತಿ ಪಂದ್ಯಗಳು ಹೆಚ್ಚಾಗಿ ಪುರುಷ ತರಬೇತುದಾರರನ್ನೇ ಹೊಂದಿರುತ್ತವೆ ಎಂದು ಹೇಳಿದ ವಕೀಲರು, ‘ಆತಂಕದಿಂದ ಅಥವಾ ಉತ್ತಮ ಸಾಧನೆಗಾಗಿ ಆಟಗಾರನನ್ನು ಹುರಿದುಂಬಿಸುವ ಸಲುವಾಗಿ ಪುರುಷ ಕೋಚ್ ತಬ್ಬಿಕೊಂಡರೆ, ಅದು ಸಹಜ’ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಶಾಸಕನ ಸಹಾಯ; ವರದಿ ಮಾಡಿದ ಪತ್ರಕರ್ತನ ಮೇಲೆ ಗೂಂಡಾಗಳಿಂದ ಹಲ್ಲೆ
“ತಮ್ಮ ಕಕ್ಷಿದಾರರು ಅನೇಕ ವರ್ಷಗಳಿಂದ ಆಟಗಾರರಿಗೆ ತಿಳಿದಿರುವ ವ್ಯಕ್ತಿಯಾಗಿದ್ದರು ಮತ್ತು ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಪದಕ ಗೆಲ್ಲುವುದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು ಮತ್ತು ಆ ಅಪ್ಪುಗೆ ಅವರ ಸಂತೋಷದ ಅಭಿವ್ಯಕ್ತಿಯಾಗಿತ್ತು. ಆದ್ದರಿಂದಲೇ ಅವರಿಗೆ ಲೈಂಗಿಕ ಕಿರುಕುಳದ ಉದ್ದೇಶ ಇರಲಿಲ್ಲ ಎಂದು ನಾವು ಸಮರ್ಥಿಸಿಕೊಳ್ಳುತ್ತೇವೆ” ಎಂದು ನ್ಯಾಯಾಲಯಕ್ಕೆ ಬ್ರಿಜ್ ಭೂಷಣ್ ಪರ ವಕೀಲರು ತಿಳಿಸಿದರು.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 188 ರ ಪ್ರಕಾರ, ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ತನ್ನ ಕಕ್ಷಿದಾರನ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ವಕೀಲ ರಾಜೀವ್ ಮೋಹನ್ ನ್ಯಾಯಾಲಯಕ್ಕೆ ತಿಳಿಸಿದರು. ಮ್ಯಾಜಿಸ್ಟ್ರೇಟ್ ಅಪರಾಧದ ಅರಿವನ್ನು ಮಾತ್ರ ತೆಗೆದುಕೊಳ್ಳಬಹುದು. ಆದರೆ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅವರು ಸಮರ್ಥಿಸಿಕೊಂಡರು.
ಕರ್ನಾಟಕದ ಬಳ್ಳಾರಿಯ ಘಟನೆಯೊಂದನ್ನು ಉದಾಹರಣೆ ನೀಡಿದ ವಕೀಲರು, ಸೆಕ್ಷನ್ 176 ರಿಂದ 188 ರವರೆಗಿನ ವಿಚಾರಣೆ ಅಥವಾ ವಿಚಾರಣೆಯ ಸ್ಥಳವು ಯಾವ ವಿಚಾರಣೆಯನ್ನು ನಡೆಸಬೇಕು ಎಂಬುದನ್ನು ನಿರ್ದಿಷ್ಟಪಡಿಸುತ್ತದೆ. ಅಪರಾಧವಾಗಿದ್ದರೆ ಎಲ್ಲಿ ಅಪರಾಧ ಮಾಡಲಾಗಿದೆ, ಕಿರುಕುಳ, ಅತ್ಯಾಚಾರ ಇತ್ಯಾದಿ ಅಪರಾಧಗಳನ್ನು ನಮೂದಿಸಬೇಕು ಎಂದು ವಾದ ಮಂಡಿಸಿದರು.