ಮನುಕುಲ ಸಕಲ ಜೀವರಾಶಿಗಳಲ್ಲೇ ಶ್ರೇಷ್ಠವಾಗಿದ್ದು, ನಾವೆಲ್ಲರೂ ಮಾನವನ ಘನತೆ, ಗೌರವಗಳನ್ನು ಕಾಪಾಡಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ನ ತೆಲಂಗಾಣ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಮೌಲಾನಾ ಹಾಮೆದ್ ಮೊಹಮ್ಮದ್ ಖಾನ್ ನುಡಿದರು.
ಬೀದರ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ʼಮಾನವ ಹಕ್ಕುಗಳುʼ ಕುರಿತ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಭೂಮಿಯ ಮೇಲೆ ಬದುಕುವ ಹಕ್ಕು ಪ್ರತಿ ಮಾನವನಿಗೂ ಇದೆ. ಹೀಗಾಗಿ, ಒಬ್ಬ ವ್ಯಕ್ತಿಯನ್ನು ಕೊಲೆಗೈದರೆ ಮನುಕುಲವನ್ನೇ ನಾಶ ಮಾಡಿದಂತೆ. ಒಬ್ಬರಿಗೆ ಜೀವ ದಾನ ಮಾಡಿದರೆ ಮಾನವ ಕುಲಕೋಟಿಗೆ ಜೀವದಾನ ಮಾಡಿದಂತೆ. ತಾಯಿಯ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಜೀವನಕ್ಕೂ ಮನುಷ್ಯ ಜೀವನದಷ್ಟೇ ಮಹತ್ವ ಇದೆ. ಭ್ರೂಣ ಹತ್ಯೆ ಘೋರ ಅಪರಾಧವಾಗಿದೆ. ಮನುಷ್ಯನಿಗೆ ತನ್ನ ಜೀವ ತಾನು ತೆಗೆದುಕೊಳ್ಳುವುದಕ್ಕೂ ಅವಕಾಶ ಇಲ್ಲ” ಎಂದು ತಿಳಿಸಿದರು.
“ಪ್ರವಾದಿಗಳು ಕೇವಲ ದೇವ ಸಂದೇಶ ಜನರಿಗೆ ತಲುಪಿಸುವ ಹೊಣೆ ಹೊತ್ತಿದ್ದರು. ದೇವ ಸಂದೇಶ ಒಪ್ಪಿಕೊಳ್ಳುವಂತೆ ಯಾರ ಮೇಲೂ ಒತ್ತಡ ಹಾಕಿರಲಿಲ್ಲ. ಮಾನವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧರ್ಮವೂ ಪ್ರಾಮುಖ್ಯತೆ ನೀಡಿದೆ. ಮಾನವರೆಲ್ಲರೂ ಸರಿ ಸಮಾನರು, ಧರ್ಮ, ಜಾತಿ, ಜನಾಂಗ, ಬಣ್ಣದ ಆಧಾರದ ಮೇಲೆ ಭೇದ ಭಾವ ಸಲ್ಲದು. ಅದಾಗಿಯೂ ಮುಸ್ಲಿಮರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ. ಕೃಷ್ಣಪ್ಪ ಮಾತನಾಡಿ, “ಮಾನವ ಹಕ್ಕುಗಳನ್ನು ಎಲ್ಲರೂ ಅರಿಯಬೇಕು. ಅವುಗಳ ರಕ್ಷಣೆ ಮಾಡಬೇಕು” ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, “ಎಲ್ಲ ಧರ್ಮಗಳ ಮಹಾಪುರುಷರು ಹಾಗೂ ಪ್ರವಾದಿಗಳು ಮಾನವ ಏಕತೆಗೆ ಆದ್ಯತೆ ಕೊಟ್ಟಿದ್ದರು. ಎಲ್ಲರನ್ನು ಒಳಗೊಂಡ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು” ಎಂದರು.
ನ್ಯಾಯವಾದಿ ಬಾಬುರಾವ್ ಹೊನ್ನಾ ಮಾತನಾಡಿ, “ಕೋಮುವಾದ, ಕಾರ್ಪೋರೇಟ್ ಹಿತಾಸಕ್ತಿ ಆಡಳಿತ ಹಾಗೂ ಜನವಿರೋಧಿ ಕಾನೂನುಗಳಿಂದ ಸರ್ಕಾರ ಮಟ್ಟದಲ್ಲೇ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೋಸುಂಬೆಯನ್ನೂ ನಾಚಿಸಿದ ಕುಮಾರಸ್ವಾಮಿ
ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ರಫಿಕ್ ಅಹಮ್ಮದ್, ಇಕ್ಬಾಲ್ ಗಾಝಿ, ಮೌಲಾನಾ ಮೊಸಿನ್ ಕಿರ್ಮಾನಿ, ಇನಾಯತ್ ಸಿಂಧೆ, ಮಹಮ್ಮದ್ ಸೈಫುದ್ದಿನ್ ಇದ್ದರು. ಜಮಾ ಅತೆ ಇಸ್ಲಾಮಿ ಹಿಂದ್ನ ಬೀದರ್ ಘಟಕದ ಅಧ್ಯಕ್ಷ ಮಹಮ್ಮದ್ ಮೌಅಝ್ಝಮ್ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಮಹಮ್ಮದ್ ನಿಜಾಮುದ್ದಿನ್ ನಿರೂಪಿಸಿದರು. ಮಹಮ್ಮದ್ ಆರುಫುದ್ದಿನ್ ವಂದಿಸಿದರು.